ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.
ಕಾಳಜಿಯ ಕಲ್ಪವೃಕ್ಷ “ಅಪ್ಪ”

ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ , ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ . ಅಪ್ಪ ” ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ಅಪ್ಪ ನಿನ್ನ ತುಟಿ ಅಂಚಿನಲ್ಲಿ ಪದವಾಗಿ ನಲಿದಾಡುವಾಸೆ,ನಿನ್ನ ಕಿರು ಬೆರಳು ಹಿಡಿದುಜಗತ್ತು ಸುತ್ತುವಾಸೆ.ತಾನು ಎಲ್ಲಾ ಕಡೆ ಇರೊಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವ್ರು, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನು ಸಲಹಲು ಸಾದ್ಯವಿಲ್ಲ ಎಂದು ತಿಳಿದು ಅಪ್ಪನನ್ನು ಸೃಷ್ಟಿಸಿದ.ಅಪ್ಪನ ಬೆರಳ ತುದಿಯಲ್ಲಿ ಮಗಳ ಭರವಸೆ ಅಡಗಿರುತ್ತದೆ ಈ ಮಾತು ಅಕ್ಷರಶಹ ಸತ್ಯ . ಒಬ್ಬ ಮಾದರಿ ಹಾಗೂ ಉತ್ತಮ ಆದರ್ಶ ಇರುವ ಅಪ್ಪ ಎಂದಿಗೂ ಮಕ್ಕಳ ಭರವಸೆಯಾಗಿರುತ್ತಾರೆ . ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ.ಅಪ್ಪನ ಪ್ರೀತಿ ಅರ್ಥ ಆಗೋದು ಬಹಳಾನೇ ಕಷ್ಟ.ಬದುಕು ರೂಪಿಸಿದ , ಜೀವನ ಪಾಠ ಕಲಿಸಿದ , ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು . ಪ್ರತಿವರ್ಷ ಜೂನ್ ತಿಂಗಳ ಮೂರನೆಯ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ . ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910 ರಲ್ಲಿ ವಾಷಿಂಗ್ಟನ್ನಲ್ಲಿ ಮೊದಲ ಬಾರಿಗೆ ಅಪ್ಪಂದಿನ ದಿನವನ್ನು ಆಚರಿಸಲಾಗಿತ್ತು . ಅಂತೆಯೇ ಈ ವರ್ಷ ಜೂನ್ 16 ರಂದು ಫಾದರ್ಸ್ ಡೇ ಆಚರಿಸ ಲಾಗುತ್ತಿದೆ . ಅಪ್ಪಂದಿರ ತ್ಯಾಗ , ಪ್ರೀತಿಯನ್ನು ಸ್ಮರಿಸಿ ಕೊಳ್ಳಲು , ನಾವು ಅವರ ಮೇಲಿತ್ತ ಪ್ರೀತಿ , ಅಭಿಮಾನ ವನ್ನು ತೋರ್ಪಡಿಸಲು ಈ ದಿನವನ್ನು ಆಚರಿಸ ಲಾಗುತ್ತದೆ . ಕೆಲವು ದೇಶಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಕೂಡ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಮ್ಯಾಜಿಕ್ ಬಾಕ್ಸ್. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ…ತೋರು ಬೆರುಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ…ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: “ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ.” ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೂ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ. ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ