ಸಾಮೂಹಿಕ ಮದುವೆಗಳು ಭಾರತ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿಗೆ ಹಿಡಿದ ಕೈಗನ್ನಡಿಗಳು- ದೊಡ್ಡನಗೌಡ ಪಾಟೀಲ.
ಹುನಗುಂದ ಸಪ್ಟೆಂಬರ್.10

ಭಾರತ ದೇಶ ಅನೇಕ ಸಂಪ್ರದಾಯ,ಸಂಸ್ಕೃತಿ ಸಂಸ್ಕಾರವನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ರಾಷ್ಟ್ರವಾಗಿದೆ.ಸಾಮೂಹಿಕ ಮದವೆ ನಮ್ಮ ಸಂಪ್ರದಾಯಕ್ಕೆ ಹಿಡಿದ ಕೈಗನ್ನಡಿಯಾಗಿವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಅಮರಾವತಿ ಗ್ರಾಮದ ಬೈಲ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸನಾತನ ಧರ್ಮದ ಸಂಸ್ಕೃತಿ ಆಚಾರ ವಿಚಾರಗಳು ಇನ್ನು ಜೀವಂತವಾಗಿವೆ ಎನ್ನುವುದ್ದಕ್ಕೆ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಜಾತ್ರಾ,ಉತ್ಸವಗಳ ಸಾಕ್ಷಿಯಾಗಿವೆ.ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮೂಹಿಕ ಮದುವೆಗಳನ್ನು ಹಮ್ಮಿಕೊಂಡು ಬಡತನದಲ್ಲಿರುವ ಸಾಕಷ್ಟು ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲು ಆಗದೇ ಇರುವ ಬಡ ಕುಟುಂಬಗಳಿಗೆ ಆಶ್ರಯವಾಗಿವೆ.ಅನೇಕ ಮಠಾಧೀಶರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ಸಂಸಾರದಲ್ಲಿ ಸ್ವಾಭಿಮಾನದಿಂದ ದುಡಿದು ಜೀವನ ಸಾಗಿಸುವುದ್ದನ್ನು ಕಲಿತುಕೊಳ್ಳಬೇಕು ಮತ್ತು ಹತ್ತ ಮನೆಯನ್ನು ಬಿಟ್ಟು ಇನ್ನುಂದು ಮನೆಯನ್ನು ಬೆಳಗಲು ಬಂದ ಸೊಸೆಯನ್ನು ಅತ್ತೆ ಮಾವ ಮಗಳಂತೆ ಕಾಣಬೇಕು ಸೊಸೆಯಾದವಳು ಅತ್ತೆ ಮಾವರನ್ನು ತಂದೆ ತಾಯಿಯಂತೆ ಕಂಡಾಗ ಮಾತ್ರ ನಿಮ್ಮ ಜೀವನ ಸುಖ ಮಯವಾಗಿರುತ್ತದೆ.ಎಷ್ಟೆ ಕಷ್ಟ ಬಂದರೂ ಕೂಡಾ ಜೋಡು ಎತ್ತಿನಂತೆ ಕಷ್ಟ ಸುಖದಲ್ಲಿ ಸಮನಾಗಿ ಸ್ವೀಕರಿಸಿ ಬದುಕಿನ ಬಂಡಿಯನ್ನು ಸಾಗಿಸಿ ನಿಮ್ಮ ದಾಂಪತ್ಯ ಜೀವನಕ್ಕೆ ಶುಭವಾಗಲಿ ಎಂದರು.ಹಡಗಲಿ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ ಸಾಮೂಹಿಕ ಮದುವೆಗಳು ಆರ್ಥಿಕವಾಗಿ ಬಡತನದಲ್ಲಿ ಇರುವ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗುತ್ತವೆ.ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಿವೆ.ಇಂತಹ ಸಾಮೂಹಿಕ ಮದುವೆಯಲ್ಲಿ ಮದುವೆಯಾಗುತ್ತಿರುವ ನವ ದಂಪತಿಗಳಿಗೆ ಗುರುಗಳ ಕೃಪೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಬಂದ ಜನರ ಆಶೀರ್ವಾದ ನಿಮ್ಮಗಳ ಮೇಲೆರುತ್ತದೆ ಎಂದರು.ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ.ಎಸ್.ರಡ್ಡೇರ ಮಾತನಾಡಿದರು.ಈ ಸಂದರ್ಭದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೇದಿಕೆಯಲ್ಲಿ ಹರಸೂರ ಪರ್ವತೇಶ್ವರ ಮಠದ ಶಿದ್ದರಾಮ ಶಿವಾಚಾರ್ಯರು,ಅಂಕಲಿಮಠದ ವೀರಭದ್ರೇಶ್ವರ ಶರಣರು,ತಾ.ಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,ಮೃತ್ಯುಂಜಯ ಕೊಪರದಮಠ,ಬಸವರಾಜ ಗೌಡರ,ಶರಣಪ್ಪ ಬಂಡೆಪ್ಪನವರ,ಪಿ.ಬಿ.ನದಾಫ್,ಗ್ರಾ.ಪಂ ಅಧ್ಯಕ್ಷ ಬಸವರಾಜ ಕಮತರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ