ಸಿಗಿ ಹುಣ್ಣಿಮೆ…..

ಭೂಮಿ ತಾಯಿ ರೈತಾಪಿ ವರ್ಗದ ಜೀವಾಳ.ಭಾರತೀಯ ಕೃಷಿ ಪರಂಪರೆಯಲ್ಲಿ ಕೃಷಿ ಭೂಮಿಯನ್ನು ತಾಯಿಯೆಂದೇ ಪರಿಗಣಿಸಲಾಗುತ್ತದೆ.ದಸರಾ ಹಬ್ಬ ಮುಗಿಯುತ್ತಿದ್ದಂತೆ ಬರುವ ಸೀಗೆ ಹುಣ್ಣಮೆ, ರೈತರಿಗೆ ಅದರಲ್ಲೂ ಮಹಿಳೆಯರಿಗೆ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ರೈತರು, ಭೂಮಿ ತಾಯಿಗೆ ಉಡಿ ತುಂಬಿ ನೈವೇದ್ಯ ಸಲ್ಲಿಸಿ, ಉತ್ತಮ ಫಸಲು ಬರಲೆಂದು ಪೂಜೆ ಸಲ್ಲಿಸುತ್ತಾರೆ. ಮಹಿಳೆಯರು ಸಂಜೆ ವೇಳೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಸೀಗವ್ವನಿಗೆ ಹೂವು, ಸಕ್ಕರೆಗೊಂಬೆಯ(ಸಕ್ಕರೆಯಿಂದ ಮಾಡಿದ ತಿನಿಸು) ಆರತಿ ಬೆಳಗುತ್ತಾರೆ.ಹೆಣ್ಣು ಮಕ್ಕಳು ಹಬ್ಬಕ್ಕೆ ಬೇಕಾದ ಅಡುಗೆ ಮಾಡುವುದರಲ್ಲಿ ನಿರತರಾಗುತ್ತಾರೆ. ಕರ್ಚಿಕಾಯಿ, ಜೋಳದ ಹಿಟ್ಟಿನ ಉಂಡಗಡುಬು, ಪುಂಡಿ ಪಲ್ಯ, ಚವಳಿ ಕಾಯಿ, ಕೆಂಪಿಂಡಿ ಕಾರ, ಬದನೆ ಕಾಯಿ, ಚಟ್ನಿ, ಮೊಸರು, ಕರಿದ ಡಬಗಾಯಿ ಮೆಣಸಿನಕಾಯಿ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಅನ್ನ, ಸಾರು, ಕಡಕ್ ರೊಟ್ಟಿ, ಚಪಾತಿ, ಮೊಸರನ್ನ ಹೀಗೆ ಹತ್ತು ಹಲವು ಖಾದ್ಯವನ್ನು ಸಿದ್ಧಪಡಿಸುತ್ತಾರೆ.
*****
ಭೂಮಿಕಾ ದಾಸರೆಡ್ಡಿ, ಬಿದರಿ