ಜ.13 ರಿಂದ 15.ರ ವರೆಗೆ ಹೂವನೂರ ಗ್ರಾಮದಲ್ಲಿ ಸ್ವಾಭಿಮಾನಿ ಶರಣ ಮೇಳ.
ಹುನಗುಂದ ಡಿಸೆಂಬರ್.13

ಜ.13 ರಿಂದ 15.ರ ವರೆಗೆ ಮೂರು ದಿನಗಳ ಕಾಲ 2.ನೆಯ ಸ್ವಾಭಿಮಾನಿ ಶರಣ ಮೇಳವನ್ನು ತಾಲೂಕಿನ ಹೂವನೂರು ಗ್ರಾಮದ ಹೊರ ವಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ಶರಣ ಮೇಳದ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಶರಣ ಮೇಳದ ಬಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ಜನೇವರಿ 13. ರಂದು ಸ್ವಾಭಿಮಾನಿ ಶರಣ ಮೇಳದ ಉದ್ಘಾಟನೆ ಮತ್ತು ಧರ್ಮ ಚಿಂತನೆ ಗೋಷ್ಠಿ,ಯುವ ಗೋಷ್ಟಿ 14. ರಂದು ಸಮುದಾಯ ಪ್ರಾರ್ಥನೆ,ಸಾಮೂಹಿಕ ಇಷ್ಟಲಿಂಗ ಪೂಜೆ,ಮಹಿಳಾ ಗೋಷ್ಠಿ ಹಾಗೂ ಕೊನೆಯ ದಿನ 15. ರಂದು ಬಸವ ಯೋಗಿ ಸಿದ್ದರಾಮೇಶ್ವರರ ಜಯಂತಿ ಮತ್ತು ಪಥ ಸಂಚಲನ ಜರುಗಲಿದೆ ಎಂದು ತಿಳಿಸಿದರು.ಧರ್ಮಗುರು ಬಸವಣ್ಣನವರ ಸಾನ್ನಿಧ್ಯದಲ್ಲಿ ಶರಣ ಮೇಳ ನಡೆಯಲಿದ್ದು, ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿರುವ ಶರಣ ಮೇಳದ ಸಮ್ಮುಖವನ್ನು ಬೀದರ್ ಬಸವ ಮಂಟಪದ ಮಾತೆ ಸತ್ಯಾದೇವಿ ಹಾಗೂ ಬೆಳಗಾವಿ ಪ್ರಭುಲಿಂಗ ಸ್ವಾಮೀಜಿ ಅವರು ವಹಿಸಿಕೊಳ್ಳಲಿದ್ದು, ಅಕ್ಕ ನಾಗಲಾಂಬಿಕೆ, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯ ಬಸವಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಪಾಲ್ಗೊಳ್ಳುವರು ಎಂದರು.ಮಾತಾಜೀಯವರ ಸಂಕಲ್ಪ ಸಾಕಾರ ಗೊಳಿಸಲು ಬಸವ ಧರ್ಮ ಸಂಸ್ಥಾಪನಾ ದಿನ ದಂದು ಸ್ವಾಭಿಮಾನಿ ಶರಣ ಮೇಳ ಆಯೋಜಿಸಲು ತೀರ್ಮಾನಿಸಲಾಗಿದ್ದು,ಸ್ವಾಭಿಮಾನಿಗಳು,ತತ್ವ ನಿಷ್ಠರು, ಹಾಗೂ ಲಿಂಗಾನಂದ ಅಪ್ಪಾಜಿ ಹಾಗೂ ಬಸವಾತ್ಮಾಜೆಯ ಕರುಳಿನ ಕುಡಿಗಳಾದ ತಾವುಗಳು ತನು ಮನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಶರಣ ಮೇಳವನ್ನು ಹೂವನೂರು ಗ್ರಾಮದ ಮುದಕಪ್ಪ ಚಲವಾದಿ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಸಂಬಂಧಿಸಿ ದಂತೆ ತಹಶೀಲ್ದಾರ್ ಹಾಗೂ ಇನ್ನೀತರ ಇಲಾಖೆಗಳ ಅನುಮತಿ ಪಡೆಯಲಾಗಿದೆ ಎಂದರು.ರಾಷ್ಟ್ರೀಯ ಬಸವ ದಳದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೆಂಡಿಗೇರಿ ಮಾತನಾಡಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ