ಆಡಂಬರದ ಮದುವೆಗಳು ಕಡಿಮೆಯಾದರೆ ಆರ್ಥಿಕ ಸುಧಾರಣೆ – ಮುರುಘೇಂದ್ರ ಶಿವಾಚಾರ್ಯರು.
ಇಂಡಿ ಡಿಸೆಂಬರ್.17

ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿ ಅನೋನ್ಯವಾಗಿ ಬಾಳುವ ಮೂಲಕ ಸಾಮೂಹಿಕ ಮದುವೆಯ ಉದ್ದೇಶವನ್ನು ಸಾರ್ಥಕ ಪಡಿಸಬೇಕು ಎಂದು ಶಿರಶ್ಯಾಡ ಗ್ರಾಮದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಅವರು ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವವಹಿಸಿ ಆಶೀರ್ವಚನ ನೀಡಿದರು.ಶ್ರೀ ಮಠಕ್ಕೆ ಭಕ್ತರೇ ಆಸ್ತಿ. ನಾವು 2009.ರಿಂದ ಪ್ರತೀ ವರ್ಷ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಶ್ರೀಮಠದ ಭಕ್ತರೇ ಎಲ್ಲಾ ಕಾರ್ಯ ಕ್ರಮಗಳಿಗೆ ಹಣ ಸಂಗ್ರಹಿಸಿ, ಕೆಲವರಿಗೆ ಜವಾಬ್ದಾರಿ ನೀಡಿ ಎಲ್ಲಾ ಕಾರ್ಯಕ್ರಮ ಯಶಸ್ವಿ ಗೊಳಿಸುತ್ತಾರೆ ಎಂದರು.ಗಡಿ ಗೌಡಗಾಂವ ಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿ, ಮಠಗಳು ಭಕ್ತರ ಉದ್ಧಾರಕ್ಕಾಗಿ ದುಡಿಯುವ ಕೇಂದ್ರಗಳಿದ್ದಂತೆ. ಮಠಗಳಿಗೆ ಭಕ್ತರಿಂದ ಬಂದ ಭಕ್ತಿಯ ಕಾಣಿಕೆಯನ್ನು ಧಾರ್ಮಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಮತ್ತೆ ಭಕ್ತರಿಗೆ ಮುಟ್ಟಿಸಬೇಕು. ಅದು ಸ್ವಾಮೀಜಿಗಳ ಕೆಲಸ. ಆ ಕೆಲಸವನ್ನು ಚಾಚೂ ತಪ್ಪದೆ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಮಾಡುತ್ತಿದ್ದಾರೆ ಎಂದರು.ವಿವಾಹಗಳು ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಸರಳ ಸಾಮೂಹಿಕ ವಿವಾಹಗಳ ಅಗತ್ಯತೆ ಹೆಚ್ಚಿದೆ. ಶಿರಶ್ಯಾಡದ ಶ್ರೀಗಳು ತಮ್ಮ ಭಕ್ತರಿಗೆ ಆರ್ಥಿಕ ಹೊರೆ ಯಾಗಬಾರದೆಂಬ ಕಾರಣಕ್ಕೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಮಠಗಳು ಧರ್ಮವನ್ನು ಉಳಿಸುವ ಕಾರ್ಯ ಮಾಡುತ್ತಿವೆ. ಶಿರಶ್ಯಾಡ ಶ್ರೀಗಳು ಪ್ರತೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದ ಅವರು ಮಹಿಳೆಯರು ಸಹ ಮುಖ್ಯ ವಾಹಿನಿಗೆ ಬರಬೇಕು. ದೇಶದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನವಿದೆ. ಎಲ್ಲ ರಂಗದಲ್ಲೂ ಮಹಿಳೆ ಈಗ ಮುಂಚೂಣಿಯಲ್ಲಿದ್ದಾಳೆ. ಗ್ರಾಮೀಣ ಭಾಗದ ಜನರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಬಾರದು. ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀಮಂತ ಇಂಡಿ, ಉಮೇಶ ಬಳಬಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ಭೀಮಾಶಂಕರ ಬಿರಾದಾರ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ವಿವಾಹಗಳಲ್ಲ. ಸಾಮೂಹಿಕ ವಿವಾಹ ಭಾಗ್ಯವಂತರ ವಿವಾಹಗಳಾಗಿವೆ. ಸಾಮೂಹಿಕ ವಿವಾಹಗಳಲ್ಲಿ ಹತ್ತಾರು ಶರಣರ ಆಶೀರ್ವಾದ, ಹಿರಿಯರ ಆಶೀರ್ವಾದ ಸಿಗುವುದಲ್ಲದೆ, ದಂಪತಿಗಳು ಮಠದಲ್ಲಿ ಮದುವೆಯಾಗಿದ್ದೇವೆ, ಸರಿಪಡಿಸಿಕೊಂಡು ಹೋಗಬೇಕು ಎನ್ನುವ ಭಾವದಿಂದ ದಾಂಪತ್ಯ ನಡೆಸುವುದರಿಂದ ಕೊನೆಯವರೆಗೂ ಒಂದಾಗಿ ಸುಖ-ಸಂತೋಶದಿಂದ ಬಾಳುತ್ತಾರೆ ಎಂದರು.ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಕಡಕೋಳದ ರುದ್ರಮುನಿ ಶಿವಾಚಾರ್ಯರು, ರೋಡಗಿಯ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಕಲ್ಲನಗೌಡ ಪಾಟೀಲ, ಕಾಶೀರಾಯಗೌಡ ಪಾಟೀಲ, ಮಡು ದೇಸಾಯಿ, ಮಲ್ಲನಗೌಡ ಪಾಟೀಲ, ಶಂಕರ ಚೌಹಾಣ, ನಾಗನಗೌಡ ಚೌಧರಿ, ಬಾಬುರಾಯಗೌಡ ಪಾಟೀಲ ಉಪಸ್ಥಿತರಿದ್ದರು. ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಲಿಂ. ಮುರುಘೇಂದ್ರ ಶಿವಾಚಾರ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ