ಶಿಲ್ಪಕಲೆಗೆ ಜಕಣಾಚಾರಿ ಕೊಡುಗೆ ಅನನ್ಯ – ಸಂತೋಷ ಬಂಡೆ.
ಇಂಡಿ ಜನೇವರಿ.2

ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತ ಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬೇಲೂರು ಹಳೇ ಬೀಡಿನಲ್ಲಿ ಕಲ್ಲಿನಿಂದ ಶಿಲ್ಪ ಕಲೆಯನ್ನು ಕೆತ್ತಿ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕವು ಶಿಲ್ಪ ಕಲೆಯ ತವರೂರು. ಬೇಲೂರು, ಹಳೇಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಅಮರ ಶಿಲ್ಪಿ ಜಕಣಾಚಾರಿ ಅವರ ಶ್ರೇಷ್ಠ ಕೆತ್ತನೆಗಳೇ ಇದಕ್ಕೆ ಸಾಕ್ಷಿ. ಸಾಹಿತ್ಯ, ಸಂಗೀತ, ನಾಟ್ಯ, ವಾಸ್ತು ಶಿಲ್ಪವು ಭಾರತೀಯ ಸಂಸ್ಕೃತಿಯ ಪ್ರತೀಕ. ವಾಸ್ತು ಶಿಲ್ಪ ಕಲೆಯನ್ನು ಅಜರಾಮರ ಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದುದು. ಅಂತಹ ಶಿಲ್ಪ ಕಲೆಯ ಕೊಡುಗೆಯನ್ನು ತನ್ನ ಕಲಾ ಕೌಶಲ್ಯದ ಮೂಲಕ ನಾಡಿಗೆ ನೀಡಿ ಅಜರಾಮರ ನಾದವನು ಅಮರ ಶಿಲ್ಪಿ ಜಕಣಾಚಾರಿ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಇತಿಹಾಸದಲ್ಲಿ ಹೊಯ್ಸಳರು ತಮ್ಮದೇ ಆದ ಕೊಡುಗೆಯನ್ನು ಶಿಲ್ಪ ಕಲೆಗೆ ನೀಡಿದ್ದಾರೆ. ವಿಷ್ಣುವರ್ಧನ ಕಾಲದಲ್ಲಿ ಕಲೆಯು ಉತ್ತುಂಗ ಶಿಖರದಲ್ಲಿತ್ತು. ಇತಿಹಾಸದ ಗತ ಕಾಲದಲ್ಲಿ ಬೇಲೂರು, ಹಳೇಬೀಡು, ಚನ್ನಕೇಶವ ದೇವಾಲಯ ಇನ್ನೂ ಅನೇಕ ಕಡೆ ಅಮರ ಶಿಲ್ಪ ಜಕಣಾಚಾರಿಯವರು ಶಿಲ್ಪ ಕಲೆಗಳನ್ನು ಕೆತ್ತನೆ ಮಾಡಿ ಹೆಸರು ವಾಸಿಯಾಗಿ,ಅಮರ ಶಿಲ್ಪಿ ಎನಿಸಿ ಕೊಂಡಿದ್ದಾರೆ ಎಂದು ಹೇಳಿದರು. ಶಿಕ್ಷಕಿ ಎಸ್ ಪಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.ಶಾಲಾ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ