ಚಾಲಕ ವಿರೋಧಿ ಕಾನೂನನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ – ಚಾಲಕರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.

ಹುನಗುಂದ ಜನೇವರಿ.18

ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ,ಗೃಹ ಸಚಿವ ಅಮಿತ್ ಶಾ ವಿರುದ್ದ ಹರಿಹಾಯುತ್ತಾ ಚಾಲಕರ ವಿರೋಧಿ ಮಸೂದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ ವಿರುದ್ದ ಕರ್ನಾಟಕ ಚಾಲಕರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ರ‍್ಯಾಲಿಯನ್ನು ಹಮ್ಮಿಕೊಂಡು ರಾಷ್ಟ್ರಪತಿ ಅಂಕಿತಕ್ಕೆ ಹೋಗಿರುವ ಚಾಲಕ ವಿರೋಧಿ ಬಿಲ್‌ನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ ವಿಜಯ ಮಹಾಂತ ವೃತ್ತದ ಬಳಿ ಕೆಲ ಹೊತ್ತು ಬೆಳಗಾವಿ ರಾಯಚೂರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಅಲ್ಲಿಂದ ತಹಶೀಲ್ದಾರ ಕಚೇರಿಗೆ ಆಗಮಿಸಿ ಬುಧವಾರ ಗ್ರೇಡ್-೨ ತಹಶೀಲ್ದಾರ ಮಹೇಶ ಸಂದಿಗವಾಡ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಚಾಲಕರ ಒಕ್ಕೂಟದ ತಾಲೂಕಾ ಅಧ್ಯಕ್ಷ ಅಮರೇಶ ಬಂಡರಗಲ್ಲ ಮಾತನಾಡಿ ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ರವರು ಸಂಸತ್‌ನಲ್ಲಿ ಚಾಲಕರ ವಿರುದ್ಧ ಅವೈಜ್ಞಾನಿಕವಾದ ಬಿಲ್ಲನ್ನು ಪಾಸು ಮಾಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೂ ಹೋಗಿದೆ.ಈ ಬಿಲ್‌ನಿಂದ ಚಾಲಕರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.ಒಬ್ಬ ಚಾಲಕ ರಸ್ತೆಯಲ್ಲಿ ಅಪಘಾತ ಮಾಡಿದ ಸಂದರ್ಭದಲ್ಲಿ ಅಪಘಾತವಾದಂತಹ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವ ಹಾಗಿಲ್ಲ. ಸ್ಥಳದಲ್ಲಿಯೇ ಇದ್ದು ಆಸ್ಪತ್ರೆಗೆ ಸಾಗಿಸಬೇಕು,ಮಹಜರು ಮಾಡುವ ಸಂದರ್ಭದಲ್ಲಿ ಸ್ಥಳ ದಲ್ಲಿರಬೇಕು.ಇಲ್ಲವಾದರೆ ಚಾಲಕನು ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಅಂತಹ ಚಾಲಕನಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ೭ ಲಕ್ಷ ರೂ. ಜುಲ್ಮಾನೆಯನ್ನು ಹಾಕಬೇಕು ಎನ್ನುವ ಕಾನೂನನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.ಸಾಕಷ್ಟು ರಸ್ತೆ ಅಪಘಾತ ಸಂದರ್ಭದಲ್ಲಿ ಚಾಲಕ ರಸ್ತೆಯಲ್ಲಿದ್ದಾಗ ಸಾರ್ವಜನಿಕರು ಥಳಿಸಿ ಕೊಲೆ ಮಾಡಿರುವ ಘಟನೆಗಳು ನಡೆದಿವೆ. ಈ ಮಸೂದೆಯಿಂದ ಚಾಲಕರಿಗೆ ತೊಂದರೆ ಯಾಗಲಿದೆ. ಅಪಘಾತವಾದಂತ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಮತ್ತು ಸಂಬಂಧಿಕರು ಎಷ್ಟೋ ಚಾಲಕರನ್ನು ಕೊಂದಿರುವ ಉದಾಹರಣೆಗಳಿವೆ. ಚಾಲಕರ ಜೀವಕ್ಕೆ ಹೊಣೆಗಾರರು ಯಾರಾಗಿರುತ್ತಾರೆ ಎಂದು ಪ್ರಶ್ನಿಸಿದರು.ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಅದ್ಯಕ್ಷೆ ವೀಣಾ ಕಾಶಪ್ಪನವರು ಭಾಗವಹಿಸಿ ಮಾತನಾಡಿ ನೂತನ ಮಸೂದೆ ಚಾಲಕರನ್ನು ಪರೋಕ್ಷವಾಗಿ ಕೊಲ್ಲುವ ಪ್ರಯತ್ನ,ಅಪಘಾತದ ಸಂಧರ್ಭದಲ್ಲಿ ಸಾರ್ವಜನಿಕರು ಚಾಲಕರನ್ನು ಥಳಿಸಿ ಕೊಂದಿರುವ ಸಾಕಷ್ಟು ಉದಾಹರಣೆಗಳಿವೆ.ಈ ಕಾನೂನು ಜಾರಿಯಾದರೆ ಚಾಲಕರ ಮೇಲಿನ ಪ್ರಕರಣಗಳು ಹೆಚ್ಚಾಗುತ್ತವೆ.ಸಾರಿಗೆ ಉದ್ಯಮವನ್ನೆ ನೆಚ್ಚಿಕೊಂಡು ಜೀವನ ನಡೆಸುವವರಿಗೆ ಇದೊಂದು ಮರಣ ಶಾಸನವಾಗಲಿದೆ.ಕೇಂದ್ರ ಸರ್ಕಾರ ಈ ಹೊಣೆಯನ್ನು ಹೊರಲು ಸಾಧ್ಯವೇ ಕೊಲೆ ಗಡುಕರಿಗೆ ವಿಧಿಸುವಂತಹ ಕಾನೂನನ್ನು ಚಾಲಕರ ಮೇಲೆ ಹೇರಲು ಸರ್ಕಾರ ಹೊರಟಿದೆ ಎಂದು ದೂರಿ, ಈ ಹಿನ್ನಲೆಯಲ್ಲಿ ಮಸೂದೆ ಹಿಂಪಡೆಯ ಬೇಕು ಎಂದರು.ಈ ಸಂದರ್ಭದಲ್ಲಿ ಈರಣ್ಣ ಟೆಂಗಿನಕಾಯಿ,ರಜಾಕ ರೇಷ್ಮಿ, ಪ್ರಕಾಶ ಶಿಂದೆ, ರವಿ ಹುಲಗೇರಿ, ಮೆಹಬೂಬ ಗದ್ವಾಲ, ಸಮೀರ ಸುತಗುಂಡರ, ರವಿ ಕರಂಡಿ, ಇಸುಪ ಭಾವಿಕಟ್ಟಿ, ಬಾಷಾ ಭಾವಿಕಟ್ಟಿ, ಮೆಹಬೂಬ ಮಾನವಿ, ಕಾಜೇಸಾಬ ಮಾನವಿ, ಹುಲಗಪ್ಪ ನಡುವಿನಮನಿ,ತಿಮ್ಮಣ್ಣ ಮಸ್ಕಿ, ಮಹಾಂತೇಶ ಭಾವಿಕಟ್ಟಿ, ಜಯಪ್ಪ ಪೂಜಾರಿ, ಹನಮಂತ ಮಸ್ಕಿ, ಶಿವಪ್ಪ ಕುರಿ, ಮುರ್ತುಸಾಬ ಚಟ್ನಿಹಾಳ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button