ಕೂಡ್ಲಿಗಿ: ಸರ್ಪ ಸಾಮ್ರಾಜ್ಯ ನಾಟಕ ಪ್ರದರ್ಶನ ಒನಕೆ ಓಬವ್ವನಂತಹ ಧೀರ ಮಹಿಳೆಯನ್ನು ನೀಡಿದ ಊರು ಕುದುರೆಡವು – ಭೀಮಣ್ಣ ಗಜಾಪುರ.
ಕುದುರೆಡವು ಫೆಬ್ರುವರಿ.10
![](https://i0.wp.com/sknewskannada.in/wp-content/uploads/2024/02/IMG-20240210-WA0067-1024x473.jpg?resize=708%2C327&ssl=1)
ಧೀರ ಮಹಿಳೆ ಒನಕೆ ಓಬವ್ವಳನ್ನು ರಾಜ್ಯಕ್ಕೆ ದೇಶಕ್ಕೆ ನೀಡಿದ ಕೀರ್ತಿ ಕುದುರೆಡವು ಗ್ರಾಮಕ್ಕೆ ಸಲ್ಲುತ್ತಿದ್ದು ಇಂತಹ ಐತಿಹಾಸಿಕ ಗ್ರಾಮ ಸಂಶೋಧನೆಗೆ ಅವಕಾಶವನ್ನು ನೀಡಿದ್ದು ಓಬವ್ವಳ ಇತಿಹಾಸಿ ಇನ್ನೂ ಮುಸುಕಾಗಿಯೇ ಇದ್ದು ಇತಿಹಾಸ ಸಂಶೋಧಕರು ಓಬವ್ವಳ ಕುಟುಂಬ, ಹಿನ್ನೆಲೆಯ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ ಎಂದು ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ಕೖತಿಯ ಲೇಖಕ ಭೀಮಣ್ಣ ಗಜಾಪುರ ಅಭಿಪ್ರಾಯಪಟ್ಟರು. ಅವರು ತಾಲೂಕಿನ ಕುದುರೆಡವು ಗ್ರಾಮದಲ್ಲಿ ಶ್ರೀ ಹಳ್ಳದ ಮಲಿಯಮ್ಮ ಜಾತ್ರೆಯ ಪ್ರಯುಕ್ತ ಸ್ಥಳೀಯ ಕಲಾವಿದರು ಆಯೋಜಿಸಿದ್ದ ಸರ್ಪ ಸಾಮ್ರಾಜ್ಯ ನಾಟಕಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು. ಸಾಮಾನ್ಯ ಕಹಳೆ ಊದುವವನ ಮಗಳಾದ ಓಬವ್ವಳನ್ನು ಗುಡೇಕೋಟೆ ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಚಿತ್ರದುರ್ಗದ ಪಾಳೇಗಾರರ ಆಸ್ಥಾನದಲ್ಲಿದ್ದ ಮದ್ದ ಹನುಮಪ್ಪನಿಗೆ ಮದುವೆ ಮಾಡಿ ಕೊಡಲಾಯಿತು. ಗುಡೇಕೋಟೆ, ಕುದುರೆಡವು ನೆಲದಲ್ಲಿ ಹುಟ್ಟಿದ ಓಬವ್ವಳ ವಂಶಸ್ಥರು ಈಗಲೂ ಕುದುರೆಡವು ಗ್ರಾಮದಲ್ಲಿದ್ದು ಒನಕೆ ಓಬವ್ವಳ ಇತಿಹಾಸಕ್ಕೆ ಮತ್ತಷ್ಟು ಸಾಕ್ಷಿಯನ್ನು ನೀಡುತ್ತದೆ ಎಂದರು. ಹೈದರಾಲಿಯಂತಹ ದೊರೆ ಓಬವ್ವಳಂತ ಒಬ್ಬ ಧೀರ ಮಹಿಳೆ ನನ್ನ ಸೈನ್ಯದಲ್ಲಿ ಇದ್ದಿದ್ದರೆ ಚಿತ್ರದುರ್ಗವನ್ನು ಯಾವಾಗಲೋ ನಾನು ಜಯಿಸುತ್ತಿದ್ದೆ ಎಂದು ತನ್ನ ಸೈನಿಕರಿಗೆ ಹೇಳಿದ ರೀತಿಯನ್ನು ತರಾಸು ಅವರ ದುರ್ಗಾಸ್ತಮಾನ ಐತಿಹಾಸಿಕ ಕಾದಂಬರಿಯಲ್ಲಿ ವಿವರಿಸಿದ್ದನ್ನು ನೋಡಿದರೆ ಓಬವ್ವಳ ಶೌರ್ಯ ನಮಗೆ ತಿಳಿಯುತ್ತದೆ ಎಂದರು. ಕೂಡ್ಲಿಗಿ ತಾಲೂಕಿನಲ್ಲಿ ಈ ಬಾರಿ ಸಾಮಾಜಿಕ ನಾಟಕಗಳು ಹೆಚ್ಚೆಚ್ಚು ಪ್ರದರ್ಶನವಾಗುತ್ತಿದ್ದು ಸ್ಥಳೀಯ ಕಲಾಸಕ್ತರಿಗೆ ಪ್ರೇಕ್ಷಕರಿಗೆ ಹಬ್ಬದ ವಾತಾವರಣ ಮೂಡಿಸಿದೆ. ಕುದುರೆಡವು ಗ್ರಾಮದಲ್ಲಿ ನಾಟಕ ನೋಡಲು ಇಡೀ ಊರೇ ಆಗಮಿಸಿರುವುದನ್ನು ನೋಡಿದರೆ ಮತ್ತೆ ನಮ್ಮ ಪೂರ್ವಜರ ನಾಟಕ ಪರಂಪರೆಗೆ ಯಾವತ್ತು ಅಳಿವಿಲ್ಲ ಎಂಬುದು ತಿಳಿಯುತ್ತದೆ ಎಂದರು.
![](https://i0.wp.com/sknewskannada.in/wp-content/uploads/2024/02/IMG-20240210-WA0065-1024x473.jpg?resize=708%2C327&ssl=1)
ಬಿಜೆಪಿ ಹಿರಿಯ ಮುಖಂಡ ಸೂರ್ಯಪಾಪಣ್ಣ ಪ್ರಾಸ್ತವಿಕವಾಗಿ ಮಾತನಾಡಿ ನಾಟಕಗಳು ಮರೆಯಾಗುತ್ತವೆ ಎನ್ನುವ ವಾತಾವರಣ ನಿರ್ಮಾಣವಾಗಿರುವ ದಿನಗಳಲ್ಲೇ ಪುನಃ ಹಳ್ಳಿಗಳಲ್ಲಿ ನಮ್ಮ ಜಾನಪದ ಕಲೆಗಳು, ನಾಟಕಗಳು ಪುನಃ ಜನತೆಯನ್ನು ಆಕರ್ಷಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ, ನಾಟಕ ರಚನೆಕಾರರಿಗೆ, ಹಳ್ಳಿಗಾಡಿನ ಕಲಾವಿದರಿಗೆ, ಸಂಗೀತ ಕಲಾವಿದರಿಗೆ ಇಂದಿನ ದಿನಗಳಲ್ಲಿ ಪ್ರೋತ್ಸಾಹ ಅಗತ್ಯವಾಗಿದೆ ಎಂದು ತಿಳಿಸಿದರು. ಒನಕೆ ಓಬವ್ವನ ತವರಿನಲ್ಲಿ ನಾವು ಓಬವ್ವಳ ಹೆಸರಿನಲ್ಲಿ ಮತ್ತಷ್ಟು ಶಾಶ್ವತ ಕೆಲಸಗಳನ್ನು ಮಾಡಬೇಕಿದೆ ಎಂದರು. ಒನಕೆ ಓಬವ್ವನ ತವರೂರಾದ ಕುದುರೆಡವು ಗ್ರಾಮವು ಐತಿಹಾಸಿಕ ಗ್ರಾಮವಾಗಿದ್ದು ಧೀರ ಮಹಿಳೆ ಹುಟ್ಟಿದ ನಾಡಿನಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಸೂರ್ಯಪಾಪಣ್ಣ ಹಾಗೂ ತಾಲೂಕು ಬಿಜೆಪಿ ಮುಖಂಡರಾದ ಶರಣನಗೌಡ ಅವರು ಈ ನಾಟಕದಲ್ಲಿ ಕಥಾನಾಯಕರ ಪಾತ್ರ ಮಾಡುವ ಮೂಲಕ ಗಮನ ಸೆಳೆದರು.
ರಾಜಕೀಯ ಮುಖಂಡರು ನಾಟಕದಲ್ಲಿ ಪಾತ್ರ ಮಾಡಿದ್ದರಿಂದ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ನಾಟಕ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ನಾಗರಕಟ್ಟೆ ರಾಜಣ್ಣ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದರು. ಕಾಂಗ್ರೆಸ್ ಯುವ ಮುಖಂಡ ನರಸಿಂಹಗಿರಿ ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕೂಡ್ಲಿಗಿ ಮಂಡಲ ಬಿಜೆಪಿ ನೂತನ ಅಧ್ಯಕ್ಷ ಬಣವಿಕಲ್ಲು ರಾಜು, ಬಿಜೆಪಿ ಹಿರಿಯ ಮುಖಂಡರಾದ ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ, ನಿಂಬಳಗೆರೆ ಕಲ್ಲೇಶ್, ಹೂಡೇಂ ಪಾಪನಾಯಕ, ರಾಯಪುರ ಪ್ರಾಣೇಶ್, ಗುಡೇಕೋಟೆ ಗೋವಿಂದಪ್ಪ, ಟಿ.ಜಿ.ಮಲ್ಲಿಕಾರ್ಜುನಗೌಡ, ಅಜ್ಜನಗೌಡ, ಪ್ರಹ್ಲಾದ, ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು. ಬಿಜೆಪಿ ಹಿರಿಯ ಮುಖಂಡ ಸೂರ್ಯಪಾಪಣ್ಣ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ