ರೈತರು ಸಾಕುವ ಜಾನುವಾರುಗಳಿಗೆ ಸರ್ಕಾರ ವಿಶೇಷ ಸೌಲಭ್ಯ ನೀಡಬೇಕು – ಬಸವರಾಜ ಬಿರಾದಾರ.
ಇಂಡಿ ಫೆಬ್ರುವರಿ.12
![](https://i0.wp.com/sknewskannada.in/wp-content/uploads/2024/02/IMG-20240212-WA0074.jpg?w=708&ssl=1)
ದೇಶದಲ್ಲಿ ಆರೋಗ್ಯಯುತ, ಸತ್ವಯುತ ಭೂಮಿಯ ಮಣ್ಣಿನಿಂದ ರೈತರು ವಂಚಿತರಾಗುತ್ತಿದ್ದು, ಅದಕ್ಕಾಗಿ ರೈತರು ಮುಂದಿನ ಪೀಳಿಗೆಗೆ ಸತ್ವಯುತ ಭೂಮಿ ಬಿಟ್ಟು ಹೋಗ ಬೇಕಾದರೆ ಕೃಷಿಯಲ್ಲಿ ಜಾನುವಾರುಗಳನ್ನು ಸಾಕಬೇಕು. ಅದರಲ್ಲಿ ಎತ್ತುಗಳನ್ನು ಸಾಕುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಜಾನುವಾರುಗಳ ಸಗಣಿಯನ್ನು ಜಮೀನಕ್ಕೆ ಹಾಕಿದರೆ ಗೊಬ್ಬರವಾಗಿ ಇಳುವರಿ ಹೆಚ್ಚಿಗೆ ಪಡೆಯುವುದರ ಜೊತೆಗೆ ಸತ್ವಯುತ ಮಣ್ಣು ಉಳಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿ ಪೌಂಢೇಷನದ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.ಅವರು ಶನಿವಾರ ಸಿದ್ದೇಶ್ವರ ಮಹಾ ಸ್ವಾಮೀಜಿ ಅವರ ಜನ್ಮಸ್ಥಳ ಬಿಜ್ಜರಗಿ ಗ್ರಾಮದಿಂದ ನಂದಿಯಾತ್ರೆ ಪ್ರಾರಂಭಗೊಂಡು ಮಣ್ಣು ಉಳಿಸಿ ಎತ್ತುಗಳನ್ನು ಬೆಳೆಸಿ ಜಾಗ್ರತಿ ಜಾಥಾ ಸಾಲೋಟಗಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.ಸರಕಾರ ಕೃಷಿಯಲ್ಲಿ ಜಾನುವಾರು ಅದರಲ್ಲೂ ಎತ್ತುಗಳನ್ನು ಸಾಕುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ದೇಶದಲ್ಲಿ 2 ನೇ ಸಂತನೆಂದರೆ ರೈತ. ಅದಕ್ಕಾಗಿಯೇ ಪೂಜ್ಯ ಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ರೈತರ ಬಗ್ಗೆ ಸದಾ ಕಳಕಳಿ ಹೊಂದಿದ್ದು, ಅವರ ಬಳಿ ಯಾರಾದರೂ ರಾಜಕಾರಣಿಗಳು ಬಂದರೆ ಅವರಿಗೆ ಮೊದಲು ಹೇಳುವುದು ನೀವು ರೈತರಿಗೆ ನೀರು ಕೊಡಿ, ಅವರು ಬಂಗಾರ ಬೆಳೆದು ಬಂಗಾರ ನೀಡುತ್ತಾರೆ. ಮರ ಗಿಡಗಳನ್ನು ಬೆಳೆಸ ಬೇಕು, ಜಾನುವಾರುಗಳನ್ನು ಸಾಕಿ ಸಾವಯವ ಕೃಷಿಯಲ್ಲಿ ಹೆಚ್ಚು ಒತ್ತು ನಿಡುವಂತೆ ರೈತರಿಗೆ ತಿಳುವಳಿಕೆ ಹೇಳುತ್ತಿದ್ದರು. ಅಲ್ಲದೆ ಕೃಷಿಯ ಜೊತೆಗೆ ಹೈನುಗಾರಿಕೆ, ಜಾನುವಾರುಗಳನ್ನು ಸಾಕುವುದು ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು ಎಂದು ಹೇಳಿದರು.
![](https://i0.wp.com/sknewskannada.in/wp-content/uploads/2024/02/IMG-20240212-WA0073.jpg?resize=708%2C286&ssl=1)
ಪ್ರಗತಿಪರ ರೈತರಾದ ಸೋಮನಾಥ ಶಿವೂರ ಮಾತನಾಡಿ, ಅರಣ್ಯ ಪ್ರದೇಶದಲ್ಲಿನ ಗಿಡ, ಮರಗಳು, ಪಕ್ಷಿಗಳು ಇಂಪಾಗಿ ಚಿಲಿ ಪಿಲಿ ಗುಟ್ಟುವುದನ್ನು ಕಿವಿಯಿಂದ ಕೇಳಿ, ಕಣ್ಣಾರೆ ಕಂಡು ಸಂತಸ ಪಟ್ಟು, ಸೃಷ್ಠಿ, ನಿಸರ್ಗದಲ್ಲಿ ದೇವರನ್ನು ಕಾಣಿ ಎಂದು ಉಪದೇಶ ಮಾಡಿದ ಸಂತ, ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂದು ನಮ್ಮೊಟ್ಟಿಗೆ ಇಲ್ಲವಾದರೂ, ಅವರು ಬದುಕಿನ ಮಾರ್ಗ, ನಡೆ, ನುಡಿ,ಸತ್ಸಂಗ ಇಂದಿನ ಯುವ ಸಮೂಹಕ್ಕೆ ದಾರಿ ದೀಪವಾಗಿವೆ. ವೃಕ್ಷವನ್ನು ಪ್ರೀತಿಸಿದರೆ ದೇಶವನ್ನು ಪ್ರೀತಿಸಿ ದಂತೆ. ಭೂಮಂಡಲವನ್ನೇ ಸ್ವರ್ಗ ಮಾಡಬೇಕೇ ವಿನ, ಸ್ವರ್ಗಕ್ಕೆ ನಾವೆ ಹೋಗುವುದಲ್ಲ. ವೃಕ್ಷವನ್ನು ಪ್ರೀತಿಸುವುದು, ರಕ್ಷಿಸುವುದು ಅದುವೇ ಧರ್ಮ ಎಂದು ಹೇಳಿದ ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳು ಆಗಿದ್ದರು ಎಂದರು.ಸೋಮಯ್ಯ ಚಿಕ್ಕಪಟ್ಟ ಸಾನಿಧ್ಯ ವಹಿಸಿದ್ದರು. ಸೋಮನಾಥ ಶಿವೂರ, ವಿನೋದ ದೊಡ್ಡಗಾಣಿಗೇರ, ಶ್ರೀಶೈಲ ನಾಗರಳ್ಳಿ, ಶಿವಾನಂದ ಮನಗೊಂಡ, ರಾಮಗೊಂಡ ಮನಗೊಂಡ, ಪಾಂಡು ಪ್ಯಾಟಿ ಜಾಗ್ರತಿ ಸಭೆಯಲ್ಲಿ ಇದ್ದರು. ವಿ.ಕೆ.ದೊಡ್ಡಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್.ಬಡಿಗೇರ ನಿರೂಪಿಸಿ, ವಂದಿಸಿದರು.ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಶನಿವಾರ ಮಣ್ಣು ಉಳಿಸಿ, ಎತ್ತುಗಳನ್ನು ಬೆಳೆಸಿ ನಂದಿಯಾತ್ರೆ ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಮಣ್ಣು ಉಳಿಸಿ, ಎತ್ತುಗಳನ್ನು ಬೆಳೆಸಿ ನಂದಿಯಾತ್ರೆ ಕಾರ್ಯಕ್ರಮದಲ್ಲಿ ನಂದಿಯಾತ್ರೆಗೆ ಭವ್ಯ ಮೆರವಣಿಗೆ ಮಾಡಲಾಯಿತು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ