ಜನಪದರ ದೇವಿ ಗುಳ್ಳವ್ವ.

ಆಷಾಢ ಬಂದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಗುಳ್ಳವನ ಹಬ್ಬದ ಸೊಬಗು. ಈ ಭಾಗದ ವಿವಾಹಿತರು ಮತ್ತು ಅವಿವಾಹಿತರು ಆಷಾಢದ ಮಾಸದಲ್ಲಿಆಚರಿಸುವ ಪ್ರಮುಖ ಹಬ್ಬ ಇದಾಗಿದೆ. ನಗರ, ಗ್ರಾಮೀಣ ಪ್ರದೇಶವೆನ್ನದೆ ಎಲ್ಲಾಕಡೆಯೂ ವಿಜೃಂಭಣೆಯಿಂದ ಆಚರಿಸುತ್ತಾರೆ.ಏನಿದು ಆಚರಣೆ?ರೈತರು ಗುಳ್ಳವ್ವನಿಗೆ ಮುಂಗಾರು ಮಳೆಯ ದೇವತೆ ಎಂದು ಕರೆಯುತ್ತಾರೆ. ಗುಳ್ಳವ್ವ ದೇವತೆಗೆ ಹಲವಾರು ಹೆಸರುಗಳಿವೆ. ಗುಳ್ಳವ್ವ, ಗುಳಕವ್ವ, ಗೋಲಕವ್ವ, ಗುಳ್ಳವ್ವ ಜನಪರ ದೇವತೆಯಾಗಿದ್ದಾಳೆ. ಮುಂಗಾರು ಮಳೆಯು ರೈತರಿಗೆ ಹೊಲಗದ್ದೆಗಳಲ್ಲಿ ಉತ್ತಮ ಪೈರನ್ನು ಕೊಡುವುದು. ಆದ್ದರಿಂದ ಗುಳ್ಳವ್ವ ದೇವತೆಯನ್ನು ಮಳೆ ಮತ್ತು ಸಂಪತ್ತಿನ ದೇವತೆ ಎಂದು ರೈತರು ಕರೆಯುತ್ತಾರೆ. ಮಣ್ಣಿನ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯದೊಂದಿಗೆ ಭೂಮಿತಾಯಿಯನ್ನು ಪ್ರಕೃತಿಯ ಆದಿ ದೇವತೆರೂಪದಲ್ಲಿ ಕಾಣುವುದಕ್ಕಾಗಿ ಈ ಗುಳ್ಳವ್ವ ದೇವತೆ ಆಚರಣೆಯಲ್ಲಿದೆ ಎನ್ನುವುದು ಪ್ರತೀತಿ. ಆಷಾಢ ಮಾಸದಲ್ಲಿ ಬರುವ ಮಣ್ಣೆತ್ತಿನ ಅಮವಾಸ್ಯೆ ನಂತರ ಬರುವ ನಾಲ್ಕು ಅಥವಾ ಐದು ಮಂಗಳವಾರ ಸತತವಾಗಿ ನಾಗರ ಅಮವಾಸ್ಯೆವರೆಗೂ ಈ ಹಬ್ಬವನ್ನು ಆಚರಿಸಲಾಗುತ್ತದೆ.ಗುಳ್ಳವ್ವನನ್ನು ಮಾಡಲು ಹುಡುಗಿಯರು ಹಳ್ಳ ಇಲ್ಲವೆ ನದಿಯ ತೀರಕ್ಕೆ ಹೋಗಿ ಮಣ್ಣಿನಿಂದ ಮಾಡಿಕೊಂಡು ಬರುತ್ತಿದ್ದರು. ಈಗ ಅದೆಲ್ಲ ಹೋಗಿ ಕುಂಬಾರರೇ ಅವುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಗುಳ್ಳವ್ವ ನನ್ನು ಮಾಡುವ ಆಕಾರ ವಾರದಿಂದ ವಾರಕ್ಕೆ ಕೆಲವೊಂದು ಪ್ರದೇಶದಲ್ಲಿ ಬದಲಾಗುತ್ತ ಹೋಗುತ್ತದೆ. ಮೊದಲನೆಯ ವಾರ ಲಿಂಗಾ ಕಾರದ ಗುಳ್ಳವ್ವ, ಎರಡನೆಯ ವಾರ `ಗುಡಿ~ ಯಾಕಾರದ ಗುಳ್ಳವ್ವ, ಮೂರ ನೇ ವಾರ `ಕಟ್ಟೆ~ಯಾಕಾರದ ಗುಳ್ಳವ್ವ, ನಾಲ್ಕನೆವಾರ ನವಿಲಾಕಾರದ ಗುಳ್ಳವ್ವ ಒಂದು ವೇಳೆ ಆ ಮಾಸದಲ್ಲಿ ಐದು ಮಂಗಳವಾರಗಳು ಬಂದರೆ ಐದನೇದನ್ನು ಹೆಣ್ಣಿನಾಕಾರದ ಗುಳ್ಳವ್ವನನ್ನು ಮಾಡುತ್ತಾರೆ.ಮನೆಗೆ ತಂದ ಗುಳ್ಳವ್ವನಿಗೆ ಗುಲ ಗಂಜಿ ಮತ್ತು ಬಣ್ಣ ಬಣ್ಣದ ಕುಸಬಿ ಕಾಳು ಗಳಿಂದ ಶೃಂಗಾರ ಮಾಡುತ್ತಾರೆ. ಜೊತೆಗೆ ಕೋಣ ಮಾಡುತ್ತಾರೆ. ಅದರಂತೆ ಹಾವು ಚೇಳುಗಳನ್ನು ಮಾಡುತ್ತಾರೆ ಯಾಕೆಂದರೆ ಇವು ಭೂತಾಯಿಯ ಮಕ್ಕಳು ಎಂಬುದು ಕೆಲವರ ಭಾವನೆ. ಗುಳ್ಳವ್ವನನ್ನು ಪೂಜಿಸುವುದು ಹೆಣ್ಣು ಮಕ್ಕಳು. ಆದರೆ ಇಲ್ಲಿರುವ ಕೋಣವನ್ನು ಕಡಿಯುವುದು ಮಾತ್ರ ಗಂಡು ಮಕ್ಕಳ ಕೆಲಸ. ನಂತರ ಮನೆಯಲ್ಲಿರುವ ಬಾಲ ಮುತ್ತೈದೆಯರು ಮಣ್ಣಿನಿಂದ ಮಾಡಿದ ವಿಶಿಷ್ಟವಾದ ಆರತಿಗಳನ್ನು ತೆಗೆದು ಕೊಂಡು ಮನೆ ಮನೆಗಳಿಗೆ ತೆರಳಿ ಪೂಜಿಸಿದ ಗುಳ್ಳವ್ವನ ಸುತ್ತಲೂ ಕುಳಿತು ಹಾಡಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡುಗಳು ಕೂಡಾ ಗಮನ ಸೆಳೆಯುವಂತಹವು.
ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ