ಎಲ್ಲರಲ್ಲೂ ಭಾವೈಕ್ಯತೆ ಮೂಡಿಸುವುದೇ ವೀರಶೈವ ಧರ್ಮ-ಮಲ್ಲಿಕಾರ್ಜುನ ಸ್ವಾಮೀಜಿ.

ನರೇಗಲ್ ನ.23

ಸಮಾಜದಲ್ಲಿನ ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಹೋಗುವುದೇ ವೀರಶೈವ ಧರ್ಮದ ಮೂಲ ಗುರಿಯಾಗಿದೆ. ಅದಕ್ಕೆಂದೆ ಶ್ರೀ ಹಾನಗಲ್ಲ ಗುರು ಕುಮಾರೇಶ್ವರರು ನಮ್ಮ ಧರ್ಮವನ್ನು ಒಂದು ಗೂಡಿಸಿ ಇದನ್ನು ವೀರಶೈವ ಲಿಂಗಾಯತ ಧರ್ಮ ಎಂದು ಕರೆದರು. ಆದರೆ ಈಗೀಗ ನಮ್ಮ ಸಮಾಜ ಒಳ ಪಂಡಗಳ ಸುಳಿಗೆ ಸಿಕ್ಕು ನಲುಗುತ್ತಿದೆ ಎಂದು ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳವರು ನುಡಿದರು. ಅವರು ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.ಒಳ ಪಂಗಡಗಳಲ್ಲಿ ನೀವು ಯಾರೇ ಆಗಿರಿ, ಆದರೆ ಯಾರಾದರೂ ನಿಮ್ಮನ್ನು ನೀವು ಯಾರು? ಎಂದು ಕೇಳಿದರೆ ಮೊದಲು ನಾವು ವೀರಶೈವರು ಎಂದು ಹೇಳಿ ನಂತರ ನಿಮ್ಮ ಒಳ ಪಂಗಡವನ್ನು ಹೇಳಿರಿ. ಇದರಿಂದ ವೀರಶೈವ ಧರ್ಮ ಜಾಗೃತಿಯ ಕನಸು ನನಸಾಗುತ್ತದೆ.

ಹಾನಗಲ್ಲ ಗುರು ಕುಮಾರೇಶ್ವರರು ಬಯಸಿದ ಕನಸು ನನಸಾಗುತ್ತದೆ ಎಂದರು.ಶ್ರೀ ಕುಮಾರೇಶ್ವರರ ಕನಸಿನ ಸಮಾಜವನ್ನು ಕಟ್ಟುವಲ್ಲಿ ನಾವುಗಳು ಬಹಳಷ್ಟು ಶ್ರಮಿಸಬೇಕಿದೆ. ಇಲ್ಲವಾದರೆ ನಾವು ಅವರ ಕನಸಿಗೆ ಕೊಳ್ಳಿ ಇಟ್ಟಂತಾಗುತ್ತದೆ. ಇದನ್ನು ವೀರಶೈವ ಧರ್ಮದ ಎಲ್ಲ ಒಳ ಪಂಗಡದವರೂ ಅರ್ಥ ಮಾಡಿ ಕೊಳ್ಳಬೇಕಿದೆ ಎಂದು ಶ್ರೀಗಳು ತಿಳಿಸಿದರು. ಸಮಾಜದಲ್ಲಿ ಸಿಗುವ ಮಾನ ಸನ್ಮಾನಗಳಲ್ಲಿ ಮೂರು ಪ್ರಕಾರಗಳಿವೆ. ಆಶಾಮೂಲ ಸತ್ಕಾರ, ಭಯಮೂಲ ಸತ್ಕಾರ ಮತ್ತು ನಿರ್ವಾಜ್ಯ ಪ್ರೇಮ ಸತ್ಕಾರ. ಸತ್ಕಾರ ನಿರ್ವಾಜ್ಯ ಪ್ರೇಮವಾಗಿದ್ದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಈ ಸತ್ಕಾರವನ್ನು ಪಡೆಯಲು ವ್ಯಕ್ತಿ ನಿವಾರ್ಥದಿಂದ ಸೇವೆ ಸಲ್ಲಿಸಿದಾಗ ಮಾತ್ರ ಸಾಧ್ಯ ಎಂದರು.ಪುರಾಣಿಕರಾದ ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ ಭಗವಂತನ ಸಂಕೀರ್ತನೆಯಿಂದ ಮನ ಶುದ್ಧಿಯಾಗುತ್ತದೆ. ನಾಮ ಸ್ಮರಣೆಯಲ್ಲಿರುವ ಶಕ್ತಿ ಬೇರೆ ಯಾವುದರಲ್ಲಿಯೂ ಇಲ್ಲ. ನಮ್ಮೆದುರಿಗೆ ಭಗವಂತ ಬರುವುದಿಲ್ಲ. ಆತ ಗುರುವಿನ ರೂಪದಲ್ಲಿ ಬರುತ್ತಾನೆ. ಆದ್ದರಿಂದ ಗುರುವಿನ ನುಡಿಯನ್ನು ನಾವುಗಳು ಆಲಿಸಬೇಕು ಮತ್ತು ಪಾಲಿಸಬೇಕು. ಗುರು ಪರಂಪರೆಯ ಮೇಲೆ ನಮಗೆ ಎಂದಿಗೂ ಅಚಲವಾದ ನಿಷ್ಠೆ ಇರಬೇಕು. ಪ್ರಾಣ ಹೋಗುವ ಪ್ರಸಂಗ ಬಂದರೂ ಧರ್ಮವನ್ನು ಬಿಡಬಾರದು. ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು. ಹಾನಗಲ್ಲ ಶ್ರೀ ಗುರು ಕುಮಾರೇಶ್ವರರು ತಮ್ಮ ಗುರುಗಳ ಮಾತನ್ನು ಎಂದಿಗೂ ಮೀರಲಿಲ್ಲ, ಎದುರಾಡಲಿಲ್ಲ, ಪಾಲಿಸ ಬಿಡಲಿಲ್ಲ. ಇದರಿಂದ ಅವರು ಇಡೀ ಸಮಾಜವೇ ಗೌರವಿಸುವಂತಹ ಸ್ವಾಮೀಜಿಗಳಾದರು. ಅವರ ಜೀವನ ಒಂದು ತೆರೆದ ಪುಸ್ತಕವಿದ್ದಂತೆ. ಅದನ್ನು ಓದಿ ಎಲ್ಲರೂ ತಿಳಿಯ ಬೇಕಾದುದು ಬಹಳಷ್ಟಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಫ್.ಎನ್ ಹುಡೇದ, ಬಿ.ಡಿ ಯರಗೊಪ್ಪ, ಟಿ.ಬಿ ಆಡೂರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ, ಗಣ್ಯ ವರ್ತಕ ಬಸವರಾಜ ಪುರ್ತಗೇರಿ, ಚನ್ನಬಸಪ್ಪ ಗೋದಿ, ಮಲ್ಲಪ್ಪ ಕಿತ್ತೂರ, ಚಂದ್ರಶೇಖರಯ್ಯ ಭೂಸನೂರಮಠ ಇನ್ನೂ ಮುಂತಾದವರಿದ್ದು, ಸನ್ಮಾನ ಸ್ವೀಕರಿಸಿದರು. ಶಿವಯೋಗಿ ಜಕ್ಕಲಿ ನಿರ್ವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button