ಭಾರತದಲ್ಲಿ ಹುಟ್ಟಿಕೊಂಡ ಯೋಗ ಸಧ್ಯ ಪ್ರಪಂಚದಾದ್ಯಂತ ಆಚರಣೆ – ಯೋಗದಿಂದ ರೋಗ ದೂರ.
ಹುನಗುಂದ ಜೂನ್.21

ಮಾನವನ ಆರೋಗ್ಯಕ್ಕೆ ಯೋಗ ಬಹಳ ಮುಖ್ಯ.ಯೋಗಾಭ್ಯಾಸ ರೂಡಿಸಿ ಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಮತ್ತು ರೋಗಗಳನ್ನು ನಿಯಂತ್ರಿಸಬಹುದು. ಸದೃಢ ಸಮಾಜ ನಿರ್ಮಿಸಲು ಮತ್ತು ಆರೋಗ್ಯಯುತ ಮನುಷ್ಯರನ್ನು ಕಾಣಲು ಯೋಗದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ತಾಲೂಕಾ ಆಡಳಿತ ಮತ್ತು ತಾಲೂಕ ಪಂಚಾಯತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ ೧೦ ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಸಸಿಗೆ ನೀರರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಬಾರತದಲ್ಲಿ ಹುಟ್ಟಿಕೊಂಡ ಯೋಗ ಪ್ರಪಂಚದ ತುಂಬಾ ಪಸರಿಸಿದೆ. ಇಂದು ಅನೇಕ ರೋಗ ರುಜೀನಗಳಿಗೆ ಯೋಗ ಒಂದು ಮಹತ್ವದ ಟಾನಿಕ್ ಆಗಿದೆ. ಜಗತ್ತಿಗೆ ಯೋಗದ ಮಹತ್ವವನ್ನು ಸಾರಿದ ದೇಶವೇ ಭಾರತ ಎನ್ನುವುದನ್ನು ನಾವು ಹೆಮ್ಮೆ ಪಡಬೇಕು.ಯೋಗ ದಿಂದ ರೋಗ ದೂರವಾಗಲಿವೆ. ಭಾರತ ಯೋಗಭ್ಯಾಸದ ತತ್ವವನ್ನು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಆಚರಿಸುವಂತಾಗಿದೆ.

ನಮ್ಮ ನಾಡಿನ ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾದರೆ ಪ್ರತಿಯೊಬ್ಬರೂ ಯೋಗವನ್ನು ಅನುಸರಿಸ ಬೇಕು. ಎಂದರು. ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ ನಾವು ಚೆನ್ನಾಗಿರ ಬೇಕಾದರೆ ಮನುಷ್ಯ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಗಟ್ಟಿ ಗೊಳಿಸ ಬೇಕು. ಇದಕ್ಕೆ ಯೋಗ, ಧ್ಯಾನ ಅಗತ್ಯ. ದಿನದ ೨೪ ಗಂಟೆಗಳ ಕಾಲವೂ ನಾವು ಕೆಲಸ ಮಾಡುತ್ತೇವೆ. ಆದರೆ ಐದು, ಹತ್ತು ನಿಮಿಷಗಳ ಕಾಲ ನಮಗೆ ಧ್ಯಾನ ಅಥವಾ ಉಸಿರಾಟದ ಬಗ್ಗೆ ನಾವು ಸಮಯ ಮೀಸಲಿರಸದೇ ಇರುವುದೇ ಇಂದು ಅನೇಕ ರೋಗಗಳ ಆಗಮನಕ್ಕೆ ಕಾರಣವಾಗಿದೆ. ದಿನಕ್ಕೆ ಕನಿಷ್ಠ ೧೦ ನಿಮಿಷಗಳ ಕಾಲ ಧ್ಯಾನ ಮಾಡಿದರೆ ಸಾಕು. ಮನಸ್ಸು ಅರಳುತ್ತದೆ. ನಮ್ಮ ದೇಹ ಮತ್ತು ಮನಸ್ಸು ಸದೃಢವಾಗಿರುತ್ತವೆ.೧೦ ನೇ ಯೋಗ ದಿನಾಚರಣೆ ಸಂದರ್ಭದಲ್ಲಿ ನಾವೆಲ್ಲರೂ ಯೋಗ ಧ್ಯಾನದ ಮೂಲಕ ಪ್ರಕೃತಿಯೊಂದಿಗೆ ಸಂಬಂಧ ಗಟ್ಟಿ ಗೊಳಿಸೋಣ ಎಂದರು. ಯೋಗ ಗುರು ನವದೆಹಲಿ ಐ.ಟಿ.ಬಿ.ಸಿ ಕಮಾಂಡೋ ಮಾಹಾಂತೇಶ ಗೌಡರ ಮಾತನಾಡಿ ಯೋಗ, ಪ್ರಾಣಾಯಾಮ, ಮಿತ ಆಹಾರಗಳು ಸರ್ವ ರೋಗಕ್ಕೂ ಮದ್ದಾಗಿದ್ದು. ವ್ಯಕ್ತಿಗತ ಆರೋಗ್ಯ, ಮಾನಸಿಕ ನೆಮ್ಮದಿ, ಧನಾತ್ಮಕ ಚಿಂತನೆ, ಇಂದ್ರಿಯ ನಿಗ್ರಹಕ್ಕಾಗಿ ನಿಯಮಿತವಾಗಿ ಯೋಗ ಮಾಡುವದನ್ನು ರೂಢಿಸಿ ಕೊಳ್ಳಬೇಕು. ಯೋಗ ಸಾಧಕರು ಯಾವಾಗಲೂ ನಿರೋಗಿಗಳಾಗಿರ ಬಲ್ಲರು. ವಿದ್ಯಾರ್ಥಿಗಳು ಮತ್ತು ಯುವ ಜನತೆಗಂತೂ ಯೋಗ ತುಂಬ ಪ್ರಯೋಜನಕಾರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಪ್ಪ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ತಾಪಂ ಇಒ ಮುರಳೀಧರ ದೇಶಪಾಂಡೆ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಹೂಲಗೇರಿ, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಸಂಗಮೇಶ ಗಡೇದ, ಮಹಾಂತೇಶ ಅವಾರಿ,ಇನ್ನು ಅನೇಕರು ಉಪಸ್ಥಿತರಿದ್ದರು, ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ ಎಂ.ಬಂಡರಗಲ್ಲ ಹುನಗುಂದ.