“ನಮ್ಮೂರ ಗುಡಿ”.

ನೋಡ ಬನ್ನಿ ಜೋಗಿ ಜಂಗಮರೇ
ನಮ್ಮೂರ ಸಿರಿ ಪರಿಯ ನೋಡ ಬನ್ನಿ
ತೆಂಗು ಕಂಗು ಕಬ್ಬು ಬಾಳೆ
ಮಲ್ಲಿಗೆ ಸಂಪಿಗೆ ಕೇದಿಗೆ ಪರಿಮಳ
ಮಾವು ಬೇವು ನೇರಳೆ ಪೇರಲ
ಬನವ ದಹಿಸಿ ವಿಷಾನಿಲ ಕಕ್ಕುವ
ಸೈರನ್ ಕೋಳಿಯ ಕೂಗ ಕೇಳಬನ್ನಿ
ಜುಳು ಜುಳು ಹರಿಯುವ ಝರಿ
ಕೆರೆ ತೊರೆ ನದಿಬತ್ತಿ,ಜಲಪಾತಾಳ ಸೇರಿ
ಜಗಲಿಯ ಮೇಲೆ ವಿರಾಜಿಸಿದ
ಅಪ್ಪನತಿಂದ ಗುಡ್ಡದ ಎದೆ ಬಗೆದು
ತಿಂದು ತೇಗಿದ ಕಣ್ಣೀರ ಕಥೆಯ ಕೇಳ ಬನ್ನಿ
ರೈತ ಬಂಧು ಎತ್ತು ಎಮ್ಮೆ ಹಸು
ಕುರಿ ಕೋಳಿಗಳ ನಿರ್ದಯದಿ
ಕಟುಕನ ಮನೆಗೆ ಸಾಗಿಸಿ,ಬಿಳಿ ಯುಡುಗೆ
ಉಟ್ಟು ಸೋಮಾರಿ ಕಟ್ಟೆಯಲಿ ಪಂಟ
ಹೊಡೆವ ಲಂಟರ ವಿನೋದದ ಪರಿಯ
ನೋಡಬನ್ನಿ
ಮಾನವತೆಯ ಮರ್ಮವ ಮರೆತು
ಹಿರಿದು ಕಿರಿದು ಒಳಿತು ಕೇಡೆಂಬ
ಅರಿವ ತೊರೆದು ಡಾಭಾಗಳೆಂಬ ಕಲಿ
ಸ್ವರ್ಗದಲ್ಲಿ ಕುಳಿತು ಗುಂಡು ತುಂಡುಗಳ
ಸಂಗದಿ ಕೇಕೆ ಹಾಕುವ ಪರಿಯ ನೋಡ ಬನ್ನಿ
*****
ಎನ್ ಎಂ ರವಿಕುಮಾರ್ ಕವಿಗಳು ಮತ್ತು ನಾಟಕಕಾರರು ಎಂ.ಬಿ.ಅಯ್ಯನಹಳ್ಳಿ ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ
