ಹೊರಗುತ್ತಿಗೆ ನೇಮಕಾತಿಯಲ್ಲಿ ಖಾಯಂ ಮೀಸಲಾತಿ ನಿಯಮವನ್ನೇ ಅನುಸರಿಸಬೇಕು ಎಂದು ಆಗ್ರಹಿಸಿ – ಮನವಿ ಪತ್ರ.
ಖಾನಾ ಹೊಸಹಳ್ಳಿ ಜು.04
![](https://i0.wp.com/sknewskannada.in/wp-content/uploads/2024/07/IMG-20240704-WA0100.jpg?resize=708%2C398&ssl=1)
ಹೊರಗುತ್ತಿಗೆ ನೇಮಕಾತಿಯಲ್ಲಿ ಖಾಯಂ ಮೀಸಲಾತಿ ನಿಯಮವನ್ನೇ ಅನುಸರಿಸ ಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯಿಂದ ನಾಡ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇಲ್ಲಿನ ಖಾನಾ ಹೊಸಹಳ್ಳಿ ನಾಡ ಕಚೇರಿಯ ಉಪ ತಹಶೀಲ್ದಾರ್ ಚಂದ್ರಮೋಹನ್ ಅವರಿಗೆ ಮನವಿ ಸಲ್ಲಿಸಿದರು, ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು. ಹೊರ ಸಂಪನ್ಮೂಲ ಏಜೆನ್ಸಿಗಳಲ್ಲೂ (ಟೆಂಡರ್) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆದ್ಯತೆ ನೀಡಿ ಹೊರ ಗುತ್ತಿಗೆ ನೌಕರರನ್ನು ಒದಗಿಸುವಂತಹ ಅವಕಾಶವನ್ನು ಖಾತ್ರಿ ಗೊಳಿಸಬೇಕು ಎಂದು ಒತ್ತಾಯಿಸಿದರು. ಹೊರಗುತ್ತಿಗೆ ಆಧಾರದಲ್ಲಿ ನೇಮಕವಾದವರನ್ನು ಪ್ರತಿ 11 ತಿಂಗಳ ನಂತರ ಕೈಬಿಡುವುದನ್ನು ನಿಲ್ಲಿಸಿ, ಅವರನ್ನೇ ಮುಂದುವರಿಸಬೇಕು. ಕನಿಷ್ಟ ಐದು ವರ್ಷ ಗುತ್ತಿಗೆ ಆಧಾರದಲ್ಲಿ ದುಡಿದವರಿಗೆ ಖಾಯಂ ನೇಮಕಾತಿ ಮಾಡುವ ಸಂದರ್ಭದಲ್ಲಿ ಮೊದಲ ಆದ್ಯತೆ ನೀಡಬೇಕು. ಹತ್ತು ವರ್ಷ ಹೊರಗುತ್ತಿಗೆ ನೌಕರರಾಗಿ ದುಡಿದವರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಇಲಾಖೆ, ಮಂಡಳಿ, ವಿವಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ರಾಜ್ಯ ಸರ್ಕಾರ ಬಂಡವಾಳ ಶಾಹಿ, ಕಾರ್ಪೊರೇಟ್ ಕಂಪನಿಗಳ ಪರವಾದ ಉದಾರೀಕರಣ ಖಾಸಗೀಕರಣ ನೀತಿಗಳನ್ನು ಕೈಬಿಟ್ಟು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತುಂಬಬೇಕು. ಅಭದ್ರ ಉದ್ಯೋಗ 11 ತಿಂಗಳ ಹೊರಗುತ್ತಿಗೆ ನೇಮಕಾತಿ ಪದ್ಧತಿ ರದ್ದು ಮಾಡುವ ಮೂಲಕ ಖಾಯಂ ನೇಮಕಾತಿ ಮಾಡಿ ಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಬಿ.ಟಿ ಗುದ್ದಿ ಚಂದ್ರು, ಸಣ್ಣ ನಾಗರಾಜ್, ಮಾರುತಿ, ಕೇಶವ್, ರಾಧಮ್ಮ, ಮಂಜುಳಾ, ವನಜಾಕ್ಷಿ, ರತ್ನಮ್ಮ ಸೇರಿದಂತೆ ಇತರರು ಇದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.