“ಮಾತೃ ಹೃದಯದ ಮಹಾಸಂತ”…..

12 ನೇ. ಶತಮಾನದಲ್ಲಿ ದುಃಖದಲ್ಲಿ ಬಿದ್ದು ಒದ್ದಾಡುವವರನ್ನು ಸಂತೈಸಿದ ಅಣ್ಣ ಬಸವಣ್ಣ. ಸರ್ವರಲ್ಲೂ ಪ್ರೀತಿಯನೇ ಬಿತ್ತಿ ಶಿವ ಭಕ್ತಿಯನ್ನು ಬೆಳೆದ. ಶೋಷಿತರಿಗೆ ತಂದೆಯಾಗಿ, ತಾಯಿಯಾಗಿ, ಬಂದುವಾಗಿ, ಬಳಗವಾಗಿ ನಿಂತು ಕೈಹಿಡಿದು ಮೇಲೆತ್ತಿದ. ಹಾಗೆ ಈ ಯುಗದಲ್ಲಿ ಆ ಬಸವಣ್ಣನ ಸಾಕ್ಷಾತ್ ಸ್ವರೂಪಿಗಳೇ ಆಗಿ ರೈತರ ಪಾಲಿಗೆ ದಿವ್ಯ ಜ್ಯೋತಿಯಾಗಿ ಬೆಳಗುತ್ತಿರುವ ಮಾತೃ ಹೃದಯದ ಮಹಾಸಂತ ಪರಮಪೂಜ್ಯ ಶ್ರೀ ಮ.ನಿ.ಪ್ರ ಗುರುಪಾದ ಮಹಾ ಸ್ವಾಮಿಜಿ ಶ್ರೀ ಅಡವಿಸಿದ್ದೇಶ್ವರ ಮಠ ಮರೆಗುದ್ದಿ. ಪೂಜ್ಯರು ಸದಾಕಾಲ ಸಮಾಜದ ಏಳಿಗೆಗಾಗಿ ಭಕ್ತರುದ್ದಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಸರಳತೆಯ ಸಂತರು. ಯುವ ಸಮುದಾಯಕ್ಕೆ ಸ್ಪೂರ್ತಿಯ ಚಿಲುಮೆಯಾಗಿ, ಸರ್ವ ಸಮಾಜಕ್ಕೂ ಮಾರ್ಗದರ್ಶನ ನೀಡುತ್ತಿರುವ ಯೋಗಿಗಳು.

ನೊಂದು ಬಂದವರಿಗೆ ತಮ್ಮ ಪ್ರೀತಿಯ ನುಡಿಗಳಿಂದ ಸಂತೈಸಿ ಧೈರ್ಯ ತುಂಬಿ ಕೈಹಿಡಿದು ಮುನ್ನಡೆಸುವ ಕರುಣಾಮೂರ್ತಿಗಳು ಎಲ್ಲ ಸಂಪ್ರದಾಯದ ಸನ್ಯಾಸಿಗಳ ಜೊತೆಯಲ್ಲೂ ಅವಿನಾಭಾವವಾದ ಸಂಬಂಧವನ್ನು ಹೊಂದಿ, ಯಾರನ್ನು ದ್ವೇಷಿಸದೆ ಎಲ್ಲರ ಆಲೋಚನೆ ಹಾಗೂ ಚಿಂತನೆಗಳನ್ನು ಗೌರವಿಸಿ ಸರ್ವ ಸನ್ಯಾಸಿಗಳಿಗೂ ಪ್ರಿಯವಾದವರು. ಅದರಲ್ಲೂ “ದೇಶದ ಬೆನ್ನೆಲುಬು”ಅದು ಸನ್ಯಾಸಿಯೇ ಆಗಿರಲಿ,ಗೃಹಸ್ಥನೆ ಆಗಿರಲಿ, ಉದ್ಯೋಗಿ ಇರಲಿ, ನಿರುದ್ಯೋಗಿ ಇರಲಿ, ಶ್ರೀಮಂತನಿರಲಿ, ಬಡವನಿರಲಿ ಎಲ್ಲರಿಗೂ ಅನ್ನ ಹಾಕಿ ಹೊಟ್ಟೆ ತುಂಬುವ ಆ ಅನ್ನದಾತನ ಮೇಲೆ ಪೂಜ್ಯರಿಗೆ ಅಗಾಧವಾದ ಪ್ರೀತಿ ಅಷ್ಟೇ ಏಕೆ ಶ್ರೀಮಠದ ಭೂಮಿಯಲ್ಲಿ ತಾವೇ ರೈತರಾಗಿ ಉತ್ತಿ ಬಿತ್ತಿ ಬೆಳೆಯುತ್ತಾ ನಾಡಿನ ರೈತರ ಧ್ವನಿಯಾಗಿ ಅನೇಕ ಕೃಷಿ ಪ್ರಶಸ್ತಿಗಳಿಗೆ ಭಾಜನರಾದವರು. ನಿರಂತರವಾಗಿ ಕಾಯಕ ಯೋಗಿಗಳಂತಿರುವ ಪೂಜ್ಯರು ಒಂದು ಕಡೆ ಕೃಷಿಯ ಕಾರ್ಯ, ಮತ್ತೊಂದೆಡೆ ಕವಿಯ ಕಾರ್ಯ, ಇನ್ನೊಂದೆಡೆ ಭಕ್ತರುದ್ದಾರಕ ಗುರುಕಾರ್ಯ ಇಂತಹ ಪೂಜ್ಯರು ಸಿಗುವುದು ಬಹಳ ವಿರಳಾತಿ ವಿರಳ. ಶ್ರೀಗಳು ಬರೆಯುವ ಕವನಗಳನ್ನು ಓದಿದರೆ ಇವರು ಮಹಾಕವಿಯೇ ಎನಿಸುತ್ತಾರೆ ಅಷ್ಟು ತೂಕ ಬದ್ಧವಾದ ಕವನದ ಸಾಲುಗಳು ಇನ್ನೂ ಕೃಷಿಯ ಬಗ್ಗೆ ಮಾತನಾಡ ತೊಡಗಿದರೆ ಇವರು ಮಹಾ ಕೃಷಿ ವಿದ್ವಾಂಸರೆ ಎಂದೆನಿಸುವರು. ಅನೇಕ ವಿಧ ವಿಧದ ಕೃಷಿ ಪ್ರಯೋಗಗಳನ್ನು ಸ್ವತ ತಾವೇ ಮಾಡುತ್ತಾ ಅದರ ಆಗು ಹೋಗುಗಳನ್ನು ಬಲ್ಲವರು. ಇನ್ನೂ ಭಕ್ತರ ಜೊತೆಗೆ ಇರುವಾಗಲಂತೂ ಅವರ ನೋವು ನಲಿವುಗಳಿಗೆ ಮನೆಯ ಸದಸ್ಯರಂತೆ ಶಕ್ತಿಯಾಗಿ ನಿಂತವರು. ಪೂಜ್ಯರ ವ್ಯಕ್ತಿತ್ವ ಅಳತೆಗೆ ಸಿಗಲಾರದು ಪದಗಳಿಗೆ ನಿಲುಕಲಾರದು. ಸದಾಕಾಲ ಪೂಜ್ಯರ ಪ್ರೀತಿಯ ಅಮೃತಧಾರಿ ನಮ್ಮೆಲ್ಲರ ಮೇಲೂ ಇರಲಿ.
✍️ ಶ್ರೀರಾಮಕೃಷ್ಣ ದೇವರು ಶ್ರೀ ಷಣ್ಮುಖಾರೂಢ ಮಠ. ವಿಜಯಪುರ