ಗಂಗಾ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಣೆ, ಜಗತ್ತಿನಲ್ಲಿಯೇ ಭಾರತೀಯ ಸೇನೆ ಎರಡನೇ ಅತಿದೊಡ್ಡ ಸೇನೆ – ಕರ್ಲನ್ ವಿನ್ಸೆಂಟ್ ಲೋಬೋ.
ಹಿರಿಯೂರು ಆ.15

ಇಂದು ನಡೆದ 78 ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾ ಸಮೂಹ ವಿದ್ಯಾ ಸಂಸ್ಥೆಯ ಆವರಣದಲ್ಲಿ ಅದ್ದೂರಿ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ಜರುಗಿತು. ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಅತಿಗಳಾಗಿ ಆಗಮಿಸಿದ್ದ ಭಾರತೀಯ ಸೇನೆಯ ಸೇನಾಧಿಕಾರಿಗಳಾದ ಕರ್ನಲ್ ವಿನ್ಸೆಂಟ್ ಲೋಬೊ ಹಾಗೂ ಸಂಸ್ಥೆಯ ಚೇರ್ಮನ್ ಸಾಹೇಬರಾದ ಎನ್ ಓಬಯ್ಯರವರು ಜಂಟಿಯಾಗಿ ಧ್ವಜಾರೋಹಣ ನೇರವೇರಿಸಿದರು. ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಕರ್ನಲ್ ವಿನ್ಸೆಂಟ್ ಲೋಬೋ ಭಾರತೀಯ ಸೇನೆ ಜಗತ್ತಿನಲ್ಲಿಯೇ ಎರಡನೇ ಅತ್ಯಂತ ದೊಡ್ಡ ಸೇನೆಯಾಗಿದ್ದು ಸುಸಜ್ಜಿತ, ಸದೃಢ ಹಾಗೂ ಶಿಸ್ತಿನ ವ್ಯವಸ್ಥೆಗೆ ಹೆಸರಾಗಿದೆ.

ಈ ಮೂಲಕ ನಮ್ಮ ಭಾರತ ಅನೇಕ ದೇಶಭಕ್ತ ವೀರಯೋಧರ ನೆಲೆಯೆಂಬುದು ಹೆಮ್ಮೆಯ ಸಂಗತಿ ಎಂದರು. ಹಾಗೇಯೇ ತಮ್ಮ ಪ್ರಸ್ತುತ ಮಿಲಿಟರಿ ಸೇವೆಯ ಸಂದರ್ಭದಲ್ಲಿ ಎದುರಿಸಿದ ಕ್ಲಿಷ್ಟಕರವಾದ ಯುದ್ಧ ಮತ್ತು ಹೋರಾಟಗಳ ರೋಮಾಂಚಕಾರಿ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಬದುಕಿನಲ್ಲಿ ಯಶಸ್ಸನ್ನು ಕಾಣಲು ವಿದ್ಯಾರ್ಥಿಗಳಾದ ನೀವುಗಳು ಅಗತ್ಯ ತತ್ವ ಸಿದ್ಧಾಂತಗಳನ್ನು ರೂಢಿಸಿಕೊಂಡು ಅಗತ್ಯ ಕಾರ್ಯ ಚಟುವಟಿಕೆಗಳನ್ನು ಸಮಯಕ್ಕೆ ತಕ್ಕಂತೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಚೇರ್ಮನ್ ಸಾಹೇಬರಾದ ಎನ್ ಓಬಯ್ಯರವರು ಮಾತನಾಡುತ್ತಾ ಪ್ರತಿಯೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಅರಿತು ಶಿಸ್ತುಬದ್ಧ ಕಾರ್ಯಕ್ರಮವನ್ನು ಸಂಘಟಿಸಿದ್ದೀರಿ. ವಿದ್ಯಾರ್ಥಿಗಳ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬಂದಿವೆ. ಎಲ್ಲರೂ ಶಿಸ್ತಿನಿಂದ ಪಾಲ್ಗೊಂಡಿದ್ದೀರಿ. ಇದರ ಹಿಂದೆ ಇರುವ ಶಿಕ್ಷಕರ ಶ್ರಮ ಸ್ಮರಣೀಯವಾದುದು ಎಂದು ಹೆಮ್ಮೆ ಮತ್ತು ಸಂತೋಷ ದಿಂದ ಕಾರ್ಯಕ್ರಮದ ಶಿಸ್ತು ಬದ್ಧತೆಯನ್ನು ಹಾಡಿ ಹೊಗಳಿದರು.

ಎಲ್ಲರೂ ದೇಶದ ಒಳಿತಿಗೆ ಒಳ್ಳೆಯ ಚಿಂತನೆಗಳನ್ನು ಬೆಳೆಸಿ ಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳಾದ ಜಸ್ವಿಕಾ, ವಾಸವಿ, ಪೂರ್ವಿಕಾ, ಸಂದೀಪ್ ಹಾಗೂ ದೀಪಶ್ರೀ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಸ್ತು ಬದ್ಧ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೊರೆ ಗೊಂಡವು. ಸಂಸ್ಥೆಯ ಅಧ್ಯಕ್ಷರಾದ ಸಿದ್ಧಗಂಗಮ್ಮ, ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಓಬಯ್ಯ, ರೇಖಾ ವಿನ್ಸೆಂಟ್ ಲೋಬೋ, ಪ್ರಾಂಶುಪಾಲರುಗಳಾದ ಶೈಲಜಾ, ಸ್ಪಂದನಾ,ಭವ್ಯ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಪೋಷಕರು ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತನುಶ್ರೀ ಹಾಗೂ ಸಂಗಡಿರು ಪ್ರಾರ್ಥಿಸಿದರು. ಶಿಕ್ಷಕ ಮಲ್ಲೇಶ್ ಸ್ವಾಗತಿಸಿದರು, ಉಪನ್ಯಾಸಕಿ ಅರ್ಚನಾ ಅತಿಥಿಗಳನ್ನು ಪರಿಚಯಿಸಿದರು, ಶಿಕ್ಷಕ ಕಾಳಿಚರಣ್ ನಿರೂಪಿಸಿದರು. ಉಪನ್ಯಾಸಕಿ ಸುಮಯ್ಯ ಸಿದ್ಧಿಕ್ ವಂದಿಸಿದರು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.