ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಮತ್ತು ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾ ಸಂಸ್ಥೆ ವತಿಯಿಂದ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ.

ಚಿತ್ರದುರ್ಗ ಆ.26

ದಿನಾಂಕ : 25/08/2024 ಭಾನುವಾರ ರಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಚಿತ್ರದುರ್ಗ ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ , ಸೀಬಾರ ಗುತ್ತಿನಾಡು ಇವರ ಸಹಯೋಗದಲ್ಲಿ ” ಮಾರಿ ಕಣಿವೆ ಇತಿಹಾಸ ” ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಈ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಆದ ಕುಮಾರಿ, ಹರ್ಷಿತಾ ಮತ್ತು ಸಂಗಡಿಗರು ಪ್ರಾರ್ಥನೆ ಯೊಂದಿಗೆ ಚಾಲನೆ ನೀಡಿದರು. ನಂತರ ಈ ಕಾರ್ಯಕ್ರಮದ ಉದ್ಘಾನೆಯನ್ನು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರು ಹಾಗೂ ಚಿತ್ರದುರ್ಗದ ಖ್ಯಾತ ವಕೀಲರೂ ಆದ ಶ್ರೀಯುತ ಬಿ.ಕೆ ರಹಮತ್ ಉಲ್ಲಾ ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಆದ ಶ್ರೀಯುತ ನೀಲಕಂಠ ದೇವರು ಮತ್ತು ವೇದಿಕೆ ಮೇಲಿರುವ ಎಲ್ಲ ಗಣ್ಯಾತಿ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಪನ್ಯಾಸಕರು ಆದ ಶ್ರೀಯುತ ಎನ್.ಶಿವಾನಂದ್ ಬಂಡೆಮೆಗಳಹಳ್ಳಿ ಇವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಾಹಿತ್ಯ ಸಂಸ್ಕೃತಿ ಕಲೆ ನಮ್ಮ ಕನ್ನಡ ಭಾಷೆಗೆ ಅತೀ ಹೆಚ್ಚು ಒತ್ತು ನೀಡಬೇಕು, ಅಲ್ಲದೆ ತ.ರಾ.ಸು , ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು, ಹಾಗೂ ರವಿ ಬೆಳೆಗೆರೆ ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ತತ್ವ ಸಿದ್ಧಾಂತಗಳನ್ನು ಮತ್ತು ಇವರುಗಳು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ ಇಂತಹ ವ್ಯಕ್ತಿಗಳ ಮಾರ್ಗದಲ್ಲಿ ವಿದ್ಯಾರ್ಥಿಗಳು ಬೆಳೆಯ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ವಕೀಲರೂ ಆದ ಶ್ರೀಯುತ ಬಿ.ಕೆ.ರಹಮತ್ ಉಲ್ಲಾ ರವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಪೋಕ್ಸೋ ಕೇಸುಗಳು, ಯುವಕರ ಆತ್ಮಹತ್ಯೆ, ಕೊಲೆಗಳು, ಬಾಲ್ಯ ವಿವಾಹಗಳು, ಹೆಚ್ಚು ದಾಖಲಾಗುತ್ತಿವೆ ಇದಕ್ಕೆ ಮೂಲ ಕಾರಣ ಇಂದಿನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಯುವಕರು ಮಾಡುವ ಬೈಕ್ ವೀಲಿಂಗ್, ಸುಳ್ಳು ಭರವಸೆ , ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಮುಂದಿನ ಅಮೂಲ್ಯ ಜೀವನ ಮತ್ತು ಭವಿಷ್ಯವನ್ನು ರೂಪಿಸಿ ಕೊಳ್ಳುವಲ್ಲಿ ವಿಫಲ ರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕರು ಹಾಗೂ ವಿಮರ್ಶಕರು ಆದ ಶ್ರೀಯುತ ಪ್ರೊ, ಎಂ.ಜಿ ರಂಗಸ್ವಾಮಿ ರವರು ” ಮಾರಿ ಕಣಿವೆ ಇತಿಹಾಸ ” ಎಂಬ ವಿಷಯದ ಕುರಿತು ಇದರ ಮೂಲ ಉಗಮ, ಈ ಜಲಾಶಯ ನಿರ್ಮಿಸಲು ಕಾರಣವೇನು ಇನ್ನಿತರೆ ವಿಷಯಗಳ ಕುರಿತು ಮತ್ತು 1835 ರಲ್ಲಿ ರಿಚರ್ಡ್ ಡಾಬಾ ಸ್ಟೀವರ್ಡ್ ಎಂಬ ವ್ಯಕ್ತಿ ಇಲ್ಲಿ ಸರ್ವೇ ಮಾಡಿ ಇದು ಹಿರಿಯೂರಿನ ಪಶ್ಚಿಮಕ್ಕೆ 21 ಕಿ. ಮೀ, ಚಿತ್ರದುರ್ಗ ದಿಂದ ದಕ್ಷಿಣ ದಿಂದ 55 ಕಿ.ಮೀ ಬೆಂಗಳೂರಿನ ವಾಯುವ್ಯಕ್ಕೆ 180 ಕಿ.ಮೀ ದೂರದಲ್ಲಿದೆ ಅಲ್ಲದೆ ಇಲ್ಲಿನ ರೈತರ ಜೀವನಾಡಿ ಎಂದರೆ ತಪ್ಪಾಗಲಾರದು ಎಂದು ಸುದೀರ್ಘ ವಿಶೇಷ ಉಪನ್ಯಾಸ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿತು.

ಮುಖ್ಯ ಅತಿಥಿಗಳಾದ ಚಿತ್ರದುರ್ಗ ಜಿಲ್ಲೆಯ ಲೋಕಾಯುಕ್ತ ಇಲಾಖೆಯ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಶ್ರೀಯುತ ಬಿ.ಮಲ್ಲೇಶಪ್ಪ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಇನ್ನಿತರೆ ವಿವಿಧ ಇಲಾಖೆಗಳಲ್ಲಿ ಅತೀ ಹೆಚ್ಚು ಲಂಚದ ಪ್ರಕರಣಗಳು ದಾಖಲಾಗುತ್ತಿವೆ ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಅತ್ಯಂತ ಎಚ್ಚರ ವಹಿಸಬೇಕು, ಅಲ್ಲದೆ ಯಾರೇ ಲಂಚ ಕೇಳಿದರು ಸೂಕ್ತ ಸಾಕ್ಷಿ ಹಾಗೂ ದಾಖಲೆ ಗಳೊಂದಿಗೆ ನೇರವಾಗಿ ನಮ್ಮ ಲೋಕಾಯುಕ್ತ ಇಲಾಖೆಗೆ ಬಂದು ಅವರ ವಿರುದ್ಧ ಕೇಸ್ ದಾಖಲಿಸಬಹುದು ಯಾರು ಕೂಡ ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ನಂತರ ಸೀಬಾರ ಗುತ್ತಿನಾಡು ನಲ್ಲಿರುವ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಆದ ಶ್ರೀಯುತ ನೀಲಕಂಠ ದೇವರು ಮಾತನಾಡಿ ಇಂತಹ ಕಾರ್ಯಕ್ರಮಗಳು , ಕವಿ ಗೋಷ್ಠಿಗಳು ಶಾಲಾ ಪಠ್ಯದ ಜೊತೆಗೆ ಈ ರೀತಿಯ ಸಾಹಿತ್ಯದ ಗೋಷ್ಠಿಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿ ಕೊಳ್ಳುವುದರಿಂದ ಮಕ್ಕಳಲ್ಲಿರುವ ಪ್ರತಿಭೆ, ಕಲೆ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕ ವಾಗಿರುತ್ತದೆ ಅಲ್ಲದೆ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಮತ್ತು ಭವಿಷ್ಯಕ್ಕೆ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಬಿ.ಕೆ.ಎಸ್ ಅಂಜುಮ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮದೇ ಛಾಪನ್ನು ಈ ಸಮಾಜದಲ್ಲಿ ನಿರ್ಮಿಸುತ್ತಿದ್ದಾರೆ ಆದರೂ ಮಹಿಳೆಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಪೋಕ್ಸೋ ಅಂತಹ ಪ್ರಕರಣಗಳು ದಿನ ನಿತ್ಯ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನೋಡುತ್ತಿರುವುದು ತುಂಬಾ ವಿಷಾದದ ಸಂಗತಿ,

ಹಾಗಾಗಿ ಕಾನೂನಿನ ಚೌಕಟ್ಟಿನ ಮೂಲಕ ಎಲ್ಲರೂ ಕೂಡ ನ್ಯಾಯವನ್ನು ಪಡೆದು ಕೊಳ್ಳಬಹುದು ಎಂದು ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ತಿಳಿಸಿದರು. ನಂತರ ಚಿತ್ರದುರ್ಗ ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರು ಆದ ಶ್ರೀಯುತ ಕೋಡಿಹಳ್ಳಿ ಶಿವಮೂರ್ತಿ. ಟಿ ಮಾತನಾಡಿ ಈ ರಾಜ್ಯದಲ್ಲಿ ಯಾವುದೇ ಕ್ರಿಮಿನಲ್ ಮತ್ತು ಕ್ರೈಂ ಗೆ ಸಂಬಂಧಪಟ್ಟ ಪ್ರಕರಣಗಳು, ಕೊಲೆ ಸುಲಿಗೆ, ದರೋಡೆ, ಮರ್ಡರ್, ರೇಪ್, ಮಹಿಳೆಯ ಮೇಲಿನ ದೌರ್ಜನ್ಯಗಳಿಗೆ ಮೂಲ ಕಾರಣ ಎಂದರೆ ಆ ವ್ಯಕ್ತಿಯ ಆಲೋಚನೆಗಳು, ಪರಿಸ್ಥಿತಿ ಮತ್ತು ಮನಸ್ಥಿತಿಯೇ ಇದಕ್ಕೆ ಮೂಲ ಕಾರಣ ಎಂದರೆ ತಪ್ಪಾಗಲಾರದು, ಹಾಗಾಗಿ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ, ಅಲ್ಲದೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ತುಂಬಾ ಶೋಚನೀಯ ಸಂಗತಿ ಎಂದರು, ದಲಿತ ಸಾಹಿತ್ಯ ಪರಿಷತ್ ಮುಖ್ಯವಾಗಿ ಎಲೆ ಮರೆ ಕಾಯಿಯಂತೆ ಇರುವ ಕವಿಗಳನ್ನು ಮತ್ತು ಸಾಹಿತಿಗಳನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಕಲೆಗಳಾದ ಕೋಲಾಟ, ಕಂಸಾಳೆ, ಸೋಬಾನೆ ಪದಗಳು, ಬಯಲು ನಾಟಕ, ರಂಗ ಭೂಮಿ ಕಲಾವಿದರು, ಜಾನಪದ, ತತ್ವಪದ, ಭಜನೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಕಲಾವಿದರನ್ನು ಗುರ್ತಿಸಿ ಮುಖ್ಯ ವೇದಿಕೆಗೆ ಕರೆ ತಂದು ಅವರಿಗೆ ಅವಕಾಶಗಳನ್ನು ಒದಗಿಸುವುದು ಮತ್ತು ಗೌರವಿಸುವುದು ದ.ಸಾ.ಪ ಪ್ರಮುಖ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಂತರ ವಿಶ್ವ ಮಾನವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಆದ ಶ್ರೀಮತಿ ಸುಧಾ ಏಚ್. ಆರ್ ಮಾತನಾಡಿ ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳಿಗೆ ಭಾಗವಹಿಸುವುದರಿಂದ ಕನ್ನಡದ ಬಗ್ಗೆ ಭಾಷೆ, ನಾಡು, ನುಡಿ, ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿದು ಕೊಳ್ಳಲು ಹಾಗೂ ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.ನಂತರ ಹಿರಿಯ ಸಾಹಿತಿಗಳಾದ ಶ್ರೀಮತಿ ಕೆ.ಎಸ್.ತಿಪ್ಪಮ್ಮ ನಾಗರಾಜ್ ರವರು ಮಾತನಾಡಿ ಮಕ್ಕಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಹೆಚ್ಚು ಓದುವುದರ ಕಡೆ ಗಮನ ಹರಿಸಿ ಉನ್ನತ ಮಟ್ಟದ ಸ್ಥಾನಮಾನ ಉದ್ಯೋಗಗಳನ್ನು ಪಡೆದು ನೆಮ್ಮದಿ ಜೀವನ ಸಾಗಿಸಿ, ನಿಮ್ಮ ಕುಟುಂಬ ಮತ್ತು ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ಮತ್ತು ಶ್ರೇಯಸ್ಸನ್ನು ತಂದು ಕೊಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಸಲಹೆ ನೀಡಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ, ಎಸ್.ಏಚ್.ಶಫಿ ಉಲ್ಲಾರವರು ಮಾತನಾಡಿ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ವ್ಯಕ್ತಿಯಾದ ಕುವೆಂಪು ರವರ ಮಾರ್ಗದರ್ಶನ , ತತ್ವ ಸಿದ್ಧಾಂತಗಳು, ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೂ ಇವರ ಸಾಧನೆಯ ಸ್ಫೂರ್ತಿಯ ಕಿರಣಗಳೇ ಈ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಎಂದರೆ ತಪ್ಪಾಗಲಾರದು ಯಾಕೆಂದರೆ ಈ ವಯಸ್ಸಿನಲ್ಲಿ ಇಷ್ಟು ಚೆನ್ನಾಗಿ ಕವಿತೆಗಳನ್ನು ಬರೆದು ವಾಚನ ಮಾಡುವುದು ಅಷ್ಟು ಸುಲಭದ ಮಾತಲ್ಲ ಹಾಗಾಗಿ ಇಲ್ಲಿ ಪ್ರತಿಯೊಬ್ಬರೂ ವಾಚಿಸಿದ ಕವನಗಳು ತುಂಬಾ ಅದ್ಭುತವಾಗಿ ಮೂಡಿ ಬಂದವು ಇಲ್ಲಿ ತುಂಬಾ ಕವಿಗಳು ಅಡಗಿ ಕುಳಿತಿದ್ದಾರೆ ಬೆಳೆಯುವ ಪೈರು ಮೊಳಕೆಯಲ್ಲಿ ಯೇ ಎಂಬಂತೆ ಈ ಶಾಲೆಯ ನಿಸರ್ಗಮಯ ವಾತಾವರಣವು ಪೂರಕವಾಗಿದೆ ಹಾಗೆ ಇಲ್ಲಿನ ವಿದ್ಯಾರ್ಥಿಗಳು ತುಂಬಾ ಸಂಯಮ ಶಿಸ್ತು ಶಾಲೆಯ ಎಲ್ಲರ ಸಹಕಾರ ತುಂಬಾ ಚೆನ್ನಾಗಿತ್ತು ಇಂತಹ ನಿಸರ್ಗದ ಮಡಿಲಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.ಈ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು, 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಹಿಸಿದ್ದರು ಈ ಸಂದರ್ಭದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಎಲ್ಲ ಪದಾಧಿಕಾರಿಗಳು ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಎಲ್ಲ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸರಾದ ಎನ್.ತಿಪ್ಪೇಸ್ವಾಮಿ ರವರು ಸ್ವಾಗತಿಸಿದರು, ಆರ್.ಜೆ ವಿನಾಯಕ್ ನಿರೂಪಿಸಿದರು,ಏಚ್. ಸತೀಶ್ ಕುಮಾರ್ ವಂದಿಸಿದರು ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button