ಶಿಕ್ಷಕರು ನೀಡುವ ಶಿಕ್ಷಣವೇ ದೃಢವಾದ ಆಸ್ತಿಯಾಗಿ ಉಳಿಯಲಿ.

ಸುತಗುಂಡರ ಸ.02

ಶಿಕ್ಷಣವು ಮನುಕುಲದ ಉದ್ಧಾರಕ್ಕೆ ಅವಶ್ಯಕ ಎನಿಸಿದೆ. ಶಿಕ್ಷಣವೇ ಶಕ್ತಿ ಎಂಬ ಮಾತು ಅದರ ಮೌಲ್ಯವನ್ನು ಎತ್ತಿ ಹಿಡಿದಿದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳಿಗೆ ಶಿಕ್ಷಣ ನೀಡಿ ನಾಡಿಗೆ ಆಸ್ತಿಯಾಗಿ ಮಕ್ಕಳನ್ನು ಕೊಡಮಾಡಿ ಎಂಬ ಮೌಲ್ಯಯುತ ಮಾತು ಶಿಕ್ಷಣದ ಬಗ್ಗೆ ಪಾಲಕರು ವಹಿಸ ಬೇಕಾದ ಕರ್ತವ್ಯ ಪ್ರಜ್ಞೆಯನ್ನು ಜಾಗೃತ ಗೊಳಿಸುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೆ ಬೇಕೆಂಬ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ನುಡಿ ಶಿಕ್ಷಣಕ್ಕೆ ಇರುವ ನಿಜ ಶಕ್ತಿಯನ್ನು ಸಂಕೇತಿ ಕರಿಸುತ್ತದೆ.ಕಾಣದ ದೇವರು ಇರಬಹುದು ನಿಜಾ ಆದರೆ ಆ ದೇವರ ರೂಪವೇ ಶಿಕ್ಷಣ. ಶಿ- ಶಿಶುವಿನಿಂದಲೇ ಆರಂಭ ಕ್ಷ – ಕ್ಷಣ ಕ್ಷಣಕ್ಕೂ ವಿಜಯದ ಸಂಕೇತ ಣ- ನವ ಯುಗಕ್ಕೆ ಸಾಕ್ಷಿಯಾಗಲಿದೆ ಶಿಕ್ಷಣ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಸುತಗುಂಡಾರದ ಕವಯಿತ್ರಿ ಕುಮಾರಿ. ಪ್ರತಿಭಾ. ಶೇಖಪ್ಪ. ಪೂಜಾರಿ ಅವರ ಕವನದ ಸಾಲುಗಳಲ್ಲಿ ದೇವರನ್ನು ಯಾರು ಕಂಡಿರುವುದಿಲ್ಲ ಆದರೆ ದೇವರ ರೂಪವೇ ಶಿಕ್ಷಣ ಎಂದು ತಿಳಿಸುತ್ತಾ ಶಿಶುವಿನಿಂದ ಆರಂಭವಾಗಿ, ಕ್ಷಣ ಕ್ಷಣಕ್ಕೂ ವಿಜಯದ ಸಂಕೇತವೆಂಬಂತೆ ಗೋಚರವಾಗಿ, ನವ ಯುಗಕ್ಕೆ ಶಿಕ್ಷಣ ಸಾಕ್ಷಿಯಾಗಲಿದೆ ಎಂಬ ಸಾಲುಗಳು ಶಿಕ್ಷಣದ ಮಹತ್ವವವನ್ನು ಕಾವ್ಯ ಉಕ್ತಿಗಳಲ್ಲಿ ನಮಗೆ ತಿಳಿಸಿ ಕೊಡುತ್ತದೆ. ಶಿಕ್ಷಣದ ಅನೇಕ ಆಯಾಮಗಳನ್ನು, ಮಜಲುಗಳನ್ನು ಅವಲೋಕಿಸುವ ಭಾಗವಾಗಿ ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಕ್ಷಣ ಕ್ಷಣಕ್ಕೂ ವಿಜಯದ ಸಂಕೇತವಾಗಿ ಹೇಗೆ ಗೋಚರಿಸುತ್ತದೆ ಎಂಬ ಅಂಶಗಳನ್ನು ಈ ಲೇಖನ ಬರಹದ ಮೂಲಕ ತಿಳಿಸುವ ಸದಾಶಯವನ್ನು ಅನೇಕ ಚಿಂತನಾರ್ಹ ಅಂಶಗಳ ವಿಶ್ಲೇಷಣೆಯಲ್ಲಿ ಕಾಣುತ್ತೇವೆ.ಶಿಕ್ಷಣ ವ್ಯಕ್ತಿಯ ಬದುಕಿಗೆ ದಾರಿ ದೀಪ : “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ” ಎಂಬ ಬಸವಣ್ಣನವರ ವಚನ ಸಾರದ ಸಾಲುಗಳನ್ನು ಗಮನಿಸುವಾಗ ನಮ್ಮಲ್ಲಿನ ಅಜ್ಞಾನ, ಅಂಧಕಾರ ದೂರವಾಗ ಬೇಕಾದರೆ ಜ್ಞಾನ ಅವಶ್ಯಕ ಎನಿಸುತ್ತದೆ. ಆ ಜ್ಞಾನ ಸಿಗುವುದು ಶಿಕ್ಷಣ ದಿಂದ ಎಂಬುದು ಸತ್ಯದ ಮಾತು. ಚಾಣಕ್ಯ ಒಂದು ಕಡೆ ಹೇಳಿದ ಮಾತು ಹೀಗಿದೆ. “ಅಜ್ಞಾನ ಮತ್ತು ಅಶಿಸ್ತು ಮನುಷ್ಯನ ತೊಂದರಗೆ ಮುಖ್ಯ ಕಾರಣಗಳಾಗಿವೆ” ಮನುಷ್ಯ ತೊಂದರೆಗಳಿಂದ ಮುಕ್ತವಾಗ ಬೇಕಾದರೆ ಜ್ಞಾನ ಮತ್ತು ಶಿಸ್ತು ಅವಶ್ಯಕ ಎನ್ನುವುದನ್ನು ಇಲ್ಲಿ ಕಾಣುತ್ತೇವೆ. ಮನುಷ್ಯ ಸಂಕುಲದ ಬೆಳವಣಿಗೆಯನ್ನು ಗಮನಿಸುವಾಗ ಶಿಕ್ಷಣ ವಹಿಸಿದ ನಿರ್ಣಾಯಕ ಪಾತ್ರ ವೈವಿಧ್ಯಮಯವಾಗಿ ಗೋಚರವಾಗುತ್ತದೆ. ವ್ಯಕ್ತಿಯೊಬ್ಬನ ಸಾಧನೆಗಳು ಕಂಡು ಬರುವುದು ಆತ ಪಡೆದಿರುವ ಶಿಕ್ಷಣ, ಸಂಸ್ಕಾರಗಳನ್ನು ಆಧರಿಸಿರುತ್ತವೆ. ಶಿಕ್ಷಣ ಪಡೆದ ವ್ಯಕ್ತಿ ಸಮಾಜದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಗುರುತಿಸಿ ಕೊಂಡಿರುತ್ತಾನೆ. ಒಬ್ಬ ವ್ಯಕ್ತಿಯ ಬದುಕಿಗೆ ಶಿಕ್ಷಣವು ದಾರಿ ದೀಪ, ಕೈ ದೀವಟಿಗೆ ಯಂತೆ ಕಂಡು ಬಂದು ಆತ ಸಮಾಜದ ಆಸ್ತಿಯಾಗಿ ಸಾಧಕ ವ್ಯಕ್ತಿಯಾಗಿ ಬೆಳಗಲು ಬೆಳೆಯಲು ಶಿಕ್ಷಣ ಹತ್ತು ಹಲವಾರು ಆಯಾಮಗಳಲ್ಲಿ ನಿರ್ಣಾಯಕ ಸ್ಥಾನ ವಹಿಸುತ್ತದೆ.ಶಿಕ್ಷಣ ದಿಂದ ಉತ್ತುಂಗ ಶಿಖರ ತಲುಪಿದ ಮಹನೀಯರು : ಜಗತ್ತಿನ ಅನೇಕ ರಂಗಗಳಲ್ಲಿ ತಮ್ಮದೇ ಆದ ಸಾಧನೆ ತೋರಿದ ಮಹನೀಯರ ಬದುಕನ್ನು ಅವಲೋಕಿಸುವಾಗ ಅವರ ಬದುಕಿನಲ್ಲಿ ದೊರೆತ ಗುರುಗಳ ಪಾತ್ರ, ಶಿಕ್ಷಣದ ಮೇರು ಸ್ಥಾನ ನಿರ್ಣಾಯಕ ಎನಿಸಿದ್ದನ್ನು ಕಾಣುತ್ತೇವೆ. ಭಾರತವನ್ನಾಳಿದ ಸಾಮ್ರಾಟರು, ಶ್ರೇಷ್ಠ ದೊರೆಗಳು ಸ್ವತಃ ತಮ್ಮ ಜೀವನದ ಶಿಕ್ಷಣದ ಅನುಭವಗಳನ್ನು ಗುರುಗಳ ಕಲಿಸಿದ ಬದುಕಿನ ಪಾಠಗಳನ್ನು ಸ್ಮರಿಸಿದ್ದಾರೆ. ಅಶೋಕ, ಮಯೂರ ವರ್ಮ, ಇಮ್ಮಡಿ ಪುಲಕೇಶಿ, ವಿಷ್ಣುವರ್ಧನ, ಕೃಷ್ಣದೇವರಾಯ ಸೇರಿದಂತೆ ಬಹುತೇಕ ಅರಸರು ಅಂದಿನ ಶಾಸ್ತ್ರ, ಶಸ್ತ್ರ ಶಿಕ್ಷಣ ಬಲದಿಂದ ಸಾಧನೆಯ ಉತ್ತುಂಗ ಶಿಖರ ತಲುಪಿದ್ದನ್ನು ಕಾಣುತ್ತೇವೆ. ಅದೇ ರೀತಿ ಸಾಹಿತ್ಯ, ವಿಜ್ಞಾನ, ಕಲೆ, ರಾಜಕೀಯ, ತತ್ವಜ್ಞಾನ, ಧಾರ್ಮಿಕ ಕ್ಷೇತ್ರ ಮುಂತಾದ ವಲಯಗಳಲ್ಲಿನ ಸಾಕ್ರೇಟಿಸ್, ಪ್ಲೇಟೋ, ಶಂಕರಚಾರ್ಯರು, ಬಸವಣ್ಣನವರು, ರನ್ನ, ಪಂಪ, ಕುವೆಂಪು, ಬೇಂದ್ರೆ, ಸರ್ ಸಿ.ವಿ ರಾಮನ್, ಲಾಲ್ ಬಹದ್ದೂರ ಶಾಸ್ತ್ರಿ, ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ, ಹೀಗೆ ಅನೇಕ ಸಾಧಕರು ಶಿಕ್ಷಣವೆಂಬ ಜ್ಞಾನ ಜ್ಯೋತಿಯ ಬೆಳಕಿನಲ್ಲಿ ತಮ್ಮ ಬದುಕನ್ನು ಉಜ್ವಲವಾಗಿಸಿ ಕೊಂಡು ಆದರ್ಶ ವ್ಯಕ್ತಿಗಳಾಗಿ ನಮ್ಮ ನಡುವಿನ ಮರೆಯಲಾಗದ ಮಾಣಿಕ್ಯಗಳಾಗಿ ಕಂಡು ಬರುತ್ತಾರೆ.

ವ್ಯಕ್ತಿ, ದೇಶದ ಚರಿತ್ರೆ ಸ್ಮರಿಸುವಂತಹ ಕಾರ್ಯ ಮಾಡಿ ಸಾಧನೆಯ ಉತ್ತುಂಗ ಶಿಖರ ತಲುಪ ಬೇಕಾದರೆ ಶಿಕ್ಷಣ, ಶಿಕ್ಷಕರ ಪಾತ್ರ ನಿರ್ಧಾರಕ ಸ್ಥಾನ ಪಡೆದು ಕೊಂಡಿದೆ.ಕಣ್ಣು ಇದ್ದರು ಕುರುಡು ರಾಗುವುದು ಬೇಡ : ಶಿಕ್ಷಣದ ಮಹತ್ವ ಮೌಲ್ಯವನ್ನು ಗುರುತಿಸುವಾಗ ಅದು ಮನುಷ್ಯನ ಶರೀರದ ಭಾಗಗಳಾದ ಜಗತ್ತನ್ನು ಕಾಣುವ ಕಣ್ಣುಗಳಷ್ಟು ಮಹತ್ವದ್ದು ಎಂದು ತಿಳಿಯುತ್ತೇವೆ. ಅನೇಕ ಹಿರಿಯರು ಅನುಭವಿಗಳು ಜ್ಞಾನಿಗಳು ಶಿಕ್ಷಣದ ನಿಜ ಮಹತ್ವವನ್ನು ಅರಿತವರಾಗಿದ್ದು; ಇಂದಿನ ಕಾಲ ಘಟ್ಟದಲ್ಲಿ ನಿಜವಾಗಿಯೂ ಕಣ್ಣು ಇರದವರು ಕುರುಡರಲ್ಲ ಯಾರೂ ಶಿಕ್ಷಣವನ್ನು ಪಡೆಯದವರು ಇರುತ್ತಾರೆಯೋ ಅವರೇ ನಿಜವಾದ ಕುರುಡರು ಅವರಿಗೆ ಅಜ್ಞಾನದ ಅಂಧಕಾರ ಇರುತ್ತದೆ ಎನ್ನುತ್ತಾರೆ. ಮನುಷ್ಯ ಸಂಕುಲಕ್ಕೆ ಶಿಕ್ಷಣದ ಚಿಂತನೆಗಳು ಅನೇಕ ಅಭಿವೃದ್ಧಿ ಪ್ರಗತಿಗೆ ಕಾರಣ ಎನಿಸಿವೆ. ಮಾನವರು ಅನೇಕ ಅಚ್ಚರಿಗಳನ್ನು, ಸಾಧನೆ ಸಿದ್ದಿಗಳನ್ನು ಅಪರೂಪದ ಕಾರ್ಯಗಳನ್ನು ಸಾಧ್ಯ ಮಾಡಿದ್ದು ಶಿಕ್ಷಣವೆಂಬ ಶ್ರೇಷ್ಠ ವಿಚಾರ ಧಾರೆಯಿಂದ ಎಂಬುದನ್ನು ನಾವು ಮನವರಿಕೆ ಮಾಡಿಕೊಂಡು ಭವಿಷ್ಯದ ಜನಾಂಗಕ್ಕೆ ಶಿಕ್ಷಣದ ನಿಜ ಮೌಲ್ಯವನ್ನು ಪರಿಚಯಿಸ ಬೇಕಾದ ಅನಿವಾರ್ಯತೆ ಇರಲಾಗಿದೆ. ನಮ್ಮ ಸುತ್ತಲಿನ ಅನೇಕರು ಶಿಕ್ಷಣ ದಿಂದ ವಂಚಿತರಾಗುತ್ತಿರುತ್ತಾರೆ; ಅಂತಹವರಿಗೆ ನೀವು ಕಣ್ಣು ಇದ್ದವರು ಕುರುಡರಾಗುವುದು ಬೇಡ ಶಿಕ್ಷಣ ಪಡೆದವರು ಮಾತ್ರ ಜ್ಞಾನದ ಬೆಳಕಿನಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂಬುದನ್ನು ಮನವರಿಕೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ವಾಗಬೇಕಿದೆ.ಶಿಕ್ಷಣವೇ ದೃಢವಾದ ಆಸ್ತಿಯಾಗಿ ಉಳಿಯಲಿ : ಶಿಕ್ಷಣವನ್ನು ಅನೇಕ ಪದ ಪುಂಜಗಳಿಂದ ವರ್ಣಿಸಿರುವಂತೆ ಅದನ್ನು ದೃಢವಾದ ಆಸ್ತಿ ಎಂದು ಕರೆದಿದ್ದಾರೆ. ಇಂದಿಗೂ ಬಲ್ಲವರು ಹೇಳಿದ ಮಾತು ನಿಮ್ಮ ಮಕ್ಕಳಿಗಾಗಿ ಹೊಲ, ಮನೆ, ಬಂಗಾರ, ನಿವೇಶನ, ಹೀಗೆ ಮುಂತಾದ ಆಸ್ತಿಗಳನ್ನು ಮಾಡದೇ ಮಕ್ಕಳನ್ನೆ ನಾಡಿನ ಆಸ್ತಿಯಾಗಿ ಮಾಡಿರಿ ಎಂಬ ಮಾತಿನ ಗಾಂಭೀರ್ಯತೆಯನ್ನು ಎಲ್ಲಾ ಪಾಲಕರು ಅರಿತು ಕೊಳ್ಳಬೇಕು. ಮಕ್ಕಳಿಗಾಗಿ ಆಸ್ತಿ ಗಳಿಸಿದರೆ ಅವರು ಐಷಾರಾಮಿ ಜೀವನಕ್ಕೆ , ಆಡಂಬರದ ಬದುಕಿಗೆ, ಸಿರಿತನದ ದರ್ಪಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇಲ್ಲಿ ಪಾಲಕರು ಮಕ್ಕಳಿಗಾಗಿ ಯಾವುದೇ ಆಸ್ತಿಯನ್ನು ಮಾಡುವ ಗೋಜಿಗೆ ಹೋಗಬಾರದು ಅವರಿಗೆ ಬೌದ್ಧಿಕ ಶಿಕ್ಷಣವನ್ನು, ತಾಂತ್ರಿಕ ಶಿಕ್ಷಣವನ್ನು, ವೈಚಾರಿಕ ನೆಲೆಯ ಶಿಕ್ಷಣವನ್ನು, ವ್ಶೆಜ್ಞಾನಿಕ ಮನೋಭವಾದ ಶಿಕ್ಷಣವನ್ನು ನೀಡಿದರೆ ಶಿಕ್ಷಣವು ಒಂದು ದೃಢವಾದ ಆಸ್ತಿ ಎಂಬಂತೆ ಗೋಚರವಾಗುತ್ತದೆ. ದೇಶದ ಅಭಿವೃದ್ಧಿಗಾಗಿ ಶಿಕ್ಷಕರು ನೀಡುವ ಶಿಕ್ಷಣವೇ ದೃಢವಾದ ಆಸ್ತಿಯಾಗಿ ಉಳಿಯ ಬೇಕಾಗಿದೆ. ಶಿಕ್ಷಣವಂತ ಮಕ್ಕಳೆ ನಿಜವಾದ ಆಸ್ತಿ ಎಂಬ ಭಾವನೆ ನಮ್ಮ ನೆಲದ ಎಲ್ಲಾ ಜನರಲ್ಲಿ ಮೂಡಿದಾಗ ಶಿಕ್ಷಣ ಸೌಗಂಧದ ಪರಿಮಳ ಎಲ್ಲಾ ಕ್ಷೇತ್ರಗಳಲ್ಲಿ ಹರಡುತ್ತದೆ. ಶಿಕ್ಷಣ ಗುರುವಿನಿಂದ ಪಡೆದ ಭೀಕ್ಷೆ, ಮೌಲ್ಯಗಳನ್ನು ತುಂಬುವ ದೀಕ್ಷೆ : ಶಿಕ್ಷಣದ ಮಹತ್ವ ಅರಿಯುವಾಗ ಗುರುವಿನ ಶ್ರೇಷ್ಠ ಸ್ಥಾನದ ಅನೇಕ ಅಂಶಗಳು ಕಂಡು ಬರುತ್ತವೆ. ಗುರು ಶಿಷ್ಯರ ಅವಿನಾಭಾವ ಸಂಬಂಧವನ್ನು ನಾವು ಭಾರತದ ಸನ್ನಿವೇಶದಲ್ಲಿ ಪುರಾಣ, ಕಾವ್ಯಗಳ ಕಾಲದಿಂದ ಮೊದಲ್ಗೊಂಡು ಆಧುನಿಕ ಕಾಲದ ಅನೇಕ ಗುರು ಶ್ರೇಷ್ಠರ ಶಿಷ್ಯ ಸಾಧಕರ ಜೀವನ ಸಾಧನೆಗಳಲ್ಲಿ ಕಾಣುತ್ತೇವೆ. ಹಿಂದೆ ತಮ್ಮ ಮಕ್ಕಳನ್ನು ೧೫-೧೬ ವರ್ಷಗಳ ತನಕ ಗುರುಕುಲದಲ್ಲಿ ಇಟ್ಟು ಕಲಿಸುವ ಪರಂಪರೆ ಇತ್ತು. ಅಂದು ಗುರುಗಳು ಶಿಷ್ಯರು ಮನೆಗೆ ಹೊರಡುವ ಕೊನೆಯ ವರ್ಷದಲ್ಲಿ ಹೇಳುವ ಮಾತೊಂದು ಹೀಗಿರುತ್ತಿತ್ತಂತೆ ‘ನಾನು ಕಲಿಸಿದ್ದರಲ್ಲಿ ಯಾವುದನ್ನಾದರು ಮರೆತು ಬಿಡು ಪರವಾಗಿಲ್ಲ ಆದರೆ ಸತ್ಯಂ ವದ, ಧರ್ಮಂ ಚರ, ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ’ ಎಂಬುದನ್ನು ನೆನೆಪಿಟ್ಟುಕೋ. ನಿನಗೆ ಜೀವನ ದರ್ಶನ ಆಗುತ್ತದೆ ಎಂದು ಹೇಳುತ್ತಿದ್ದರು. ಕರುಳ ಬಳ್ಳಿಯ ಸಂಬಂಧಕ್ಕಿಂತಲೂ ಮೀಗಿಲಾಗಿ ಗುರುಗಳು ಮಕ್ಕಳಿಗೆ ಕಲಿಸುವ ಅಕ್ಷರ ಅರಿವು, ಜ್ಞಾನ ಸಂಸ್ಕಾರಗಳು ಅವರಿಗೆ ಗುರುಗಳು ನೀಡುವ ಶ್ರೇಷ್ಠ ಭೀಕ್ಷೆ ಎನಿಸಿ ಅದರಿಂದ ತುಂಬುವ ಮೌಲ್ಯಗಳು ಒಬ್ಬ ವ್ಯಕ್ತಿಗೆ ಕೊಡ ಮಾಡುವ ಶ್ರೇಷ್ಠ ದೀಕ್ಷೆ ಎನಿಸಿವೆ. ಅಂತೆಯೇ ಇಂದಿಗೂ ನಮ್ಮ ನೆಲದಲ್ಲಿ ಗುರುಗಳನ್ನು ದೈವತ್ವದ ಸ್ಥಾನದಲ್ಲಿ ಕಂಡು ಪೂಜಿಸಿ ಆರಾಧಿಸುತ್ತಾರೆ.

ಭಾರತದ ಪವಿತ್ರ ನೆಲ ಗುರು-ಶಿಷ್ಯ ಪರಂಪರೆಯ ನಡುವೆ ಸೃಷ್ಟಿಸಿ ಕೊಂಡು ಕಾಲಕಾಲಕ್ಕೆ ಸೃಜಿಸಿ ಕೊಂಡು ಬಂದ ಮೌಲ್ಯಗಳು ನಿಜಕ್ಕೂ ಅಭಿನಂಧನಾರ್ಹ ಎನಿಸಿವೆ. ಹರ ಮುನಿದರು ಗುರು ಕಾಯುವನು ಎಂಬ ನುಡಿ ಗುರುವಿನ ಶ್ರೇ಼ಷ್ಠತೆಗೆ ಸಾಕ್ಷಿ ಎನಿಸಿದ್ದು; ಶಿಷ್ಯ ಪರಂಪರೆ ಶಿಕ್ಷಣ ಪಡೆಯುವ ಹಾದಿಯಲ್ಲಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ತತ್ವ ಚಿಂತನೆಯ ಅರಿವಿನ ಹಾದಿಯಲ್ಲಿ ಸಾಗುತ್ತಾ ಬಂದಿರುವುದು ಗುರುವಿನಿಂದ ಪಡೆಯುವ ಭೀಕ್ಷೆ- ದೀಕ್ಷೆಗಳ ಮೌಲ್ಯವನ್ನು ಎತ್ತರ ಮಟ್ಟಕ್ಕೆ ತಲುಪಿಸಿವೆ. ಕತ್ತಲೆಯ ಕಳೆಯದಿದ್ದರೆ ದೀಪವ ಹಚ್ಚಿ ಫಲವೇನು : ಶಿಕ್ಷಣದ ಘನ ಉದ್ದೇಶ ಮನುಷ್ಯರ ಅಜ್ಞಾನ ಅಂಧಕಾರ ಕಳೆಯ ಬೇಕಿದೆ ಈ ದಿಸೆಯಲ್ಲಿ ಒಂದಷ್ಟು ಅಂಶಗಳನ್ನು ಗಮನಿಸುವಾಗ ಸರ್ವಜ್ಞ ಕವಿಯ ನುಡಿಗಳು ಇಂತಿವೆ.ರಸಿಕನಾಡಿದ ಮಾತು ಶಶಿ ಉದಿಸಿ ಬಂದಂತೆ ರಸಿಕನಲ್ಲದವನ ಬರಿ ಮಾತು ಕಿವಿಯೋಳುಕೂರ್ದೆಸೆಯ ಬಡಿದಂತೆ ಸರ್ವಜ್ಞಇಂದು ಶಿಕ್ಷಣದ ವ್ಯಾಪ್ತಿ ಹರವು ವಿಸ್ತಾರವನ್ನು ಪಡೆದು ಕೊಂಡಿದೆ. ನಮ್ಮ ನಡೆ, ನುಡಿ ಹೇಗಿರಬೇಕೆಂಬುದನ್ನು ಶಿಕ್ಷಣದ ಅನೇಕ ಹಂತಗಳು ನಿರ್ಧರಿಸುತ್ತಾ ಬಂದಿರುತ್ತವೆ. ಅಂತೆಯೇ ಒಬ್ಬ ಉತ್ತಮ ಮಾತುಗಾರ ರೂಪು ಗೊಳ್ಳುವಲ್ಲಿ ಆತ ಉತ್ತಮ ಓದುಗಾರ ನಾಗಿರಬೇಕು ಎಂಬ ಸಂಗತಿಯು ಒಪ್ಪಿತವಾಗಿದ್ದು; ಹಾ.ಮಾ ನಾಯಕರವರು ಅಭಿಪ್ರಾಯ ಪಡಯವಂತೆ “ನಿಜವಾದ ಓದುಗಾರಿಕೆಯು ಮನುಷ್ಯನನ್ನು ವಜ್ರವನ್ನಾಗಿಸುತ್ತದೆ. ಬೆಳಕು ಅಲ್ಲಿ ಪ್ರತಿ ಫಲಿಸುತ್ತದೆ.” ಈ ದಿಸೆಯಲ್ಲಿ ಓದಿನ ಮಹತ್ವ ನಮಗೆ ತಿಳಿಯುವದು ಶಿಕ್ಷಣದಿಂದಲೆ ಎಂಬುದನ್ನು ಅರಿತು ಓದು ಬರಹದ ಕಡೆಗೆ ಎಲ್ಲರೂ ಗಮನ ಹರಿಸಬೇಕಿದೆ. ಅಕ್ಕ ಮಹಾದೇವಿಯ ವಚನೋಕ್ತಿಯ ನುಡಿ “ ಕತ್ತಲೆಯ ಕಳೆಯದಿದ್ದರೆ ದೀಪವ ಹಚ್ಚಿ ಫಲವೇನು” ನಾವು ಕಲಿಯುವ ಶಿಕ್ಷಣ ನಮ್ಮ ನೆಲದ ಅಜ್ಞಾನ ಅಂಧಕಾರ, ಮೌಡ್ಯತೆಗಳನ್ನು ಕಳೆಯ ಬೇಕಿದೆ. ಅವ್ವನ ಕರುಳು, ಕೊರಳು, ಬೆರಳು : ದಿನಾಂಕ ೧೩-೦೮-೨೦೨೪ ರಂದು ಬಾಗಲಕೋಟೆ ಜಿಲ್ಲೆಯ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಹಾಗೂ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಮ್ಮ ಭಾಗದ ಜನಪದ ವಿದ್ವಾಂಸರು, ಗಾಯಕರು ಆದ ಶ್ರೀಕಾಂತ ಕೆಂದೂಳಿ ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದ ಸಾಂದರ್ಭಿಕ ಮಾತು ಇಂತಿದೆ. ನಮ್ಮ ನೆಲದ ಹೆಣ್ಣು ಮಕ್ಕಳಿಗೆ ಯಾವ ವಿಶ್ವ ವಿದ್ಯಾಲಯ, ಕಾಲೇಜುಗಳು ರೊಟ್ಟಿ ಮಾಡುವುದನ್ನು ಕಲಿಸಿಲ್ಲ ಅನಕ್ಷರಸ್ಥರಾದ ನಮ್ಮ ಅವ್ವಂದಿರು ತಮ್ಮ ಮಕ್ಕಳಿಗೆ ತಮ್ಮ ಕರುಳು, ಕೊರಳು, ಬೆರಳು, ಒಂದಾಗಿಸಿ ಕೊಂಡು ಸಂಸ್ಕಾರ ಬಲದಿಂದ ಅವರಿಗೆ ಹದವಾಗಿ ರೊಟ್ಟಿ ಮಾಡುವುದನ್ನು ಕಲಿಸಿದ್ದಾರೆ. ಅವ್ವನ ಅಡುಗೆ ಮನೆಯೇ ಹೆಣ್ಣು ಮಕ್ಕಳಿಗೆ ವಿಶ್ವವಿದ್ಯಾಲಯ ಎಂದು ಹೇಳಿದಾಗ ತುಂಬಿದ ಸಭೆ ಕರತಾಡನ ಮಾಡಿ ಅಪರೂಪದ ನುಡಿ ಸಾಲುಗಳಿಗೆ ಅಭಿನಂಧಿಸಲಾಯಿತು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ನಾವೂ ಸಹ ನೆಲ ಮೂಲ ಸಂಸ್ಸೃತಿಯತ್ತ ಸಾಗಿ ತಂದೆ ತಾಯಂದಿರು ಕಲಿಸುವ ಸಂಸ್ಕಾರ ಶಿಕ್ಷಣದ ನಿಜ ಮೌಲ್ಯಗಳನ್ನು ಅರಿತು ಮನುಷ್ಯ ಸಂಬಂಧಗಳನ್ನು ಗಟ್ಟಿ ಗೊಳಿಸಬೇಕಾದ ಅವಶ್ಯಕತೆ ಇರಲಾಗಿದೆ.ಮಹಾತ್ಮ ಗಾಂಧಿಜಿಯವರ “ವಿದ್ಯಾರ್ಥಿಯಲ್ಲಿರುವ ಶಕ್ತಿಯ ಪರಿ ಪೂರ್ಣತೆಯನ್ನು ಹೊರ ಗೆಳೆಯುವದೇ ಶಿಕ್ಷಣ ಸಾರ ಸರ್ವಸ್ವ” ಎಂಬ ನುಡಿಯನ್ನು ಗಮನಿಸುವಾಗ ಅವರು ಪ್ರತಿಪಾದಿಸಿದ ಸರ್ವೊದಯ ಶಿಕ್ಷಣದ ಚಿಂತನೆಗಳು ನಮಗೆ ಬೆಳಕಾಗ ಬೇಕಿವೆ. ಸಂಸ್ಕಾರ ನೀಡಿ ಮನುಷ್ಯ ಸಮುದಾಯವನ್ನು ಸನ್ಮಾರ್ಗದತ್ತ ಒಯ್ಯುವ ಶಿಕ್ಷಣ ಡಾ. ರಾಧಾಕೃಷ್ಣನ ಅವರು ಹೇಳಿರುವಂತೆ “ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡುವ ಶಿಕ್ಷಣವೇ ನಿಜವಾದ ಪರಿಪೂರ್ಣ ಶಿಕ್ಷಣ” ಎಂಬಂತೆ ಶಿಕ್ಷಣದ ನೈಜ ಬೆಲೆ ಮೌಲ್ಯ ಅರಿತು ನಾವೆಲ್ಲರೂ ಸಾಗಬೇಕಿದೆ. ಅರಿಸ್ಟಾಟಲರು ಹೇಳಿದಂತೆ “ ಶಿಕ್ಷಣ ಸಮೃದ್ಧ ಸ್ಥಿತಿಯಲ್ಲಿದ್ಧಾಗ ಆಭರಣ ಇದ್ದಂತೆ, ಆಪತ್ತಿನಲ್ಲಿ ಆಶ್ರಯ ತಾಣದಂತೆ” ಎಂಬ ಮಾತು ಜ್ಞಾನ ದೀವಿಗೆಯಾಗಿ ಬೆಳಗುವ ಆಪತ್ತಿನಲ್ಲಿ ಸಂಸ್ಕಾರ ಬಲದಿಂದ ಕಾಪಾಡುವ ಚೇತನ ಶಕ್ತಿ ಎನಿಸುವಂತಹದ್ದಾಗಿದೆ.ಇಂದು ಶಿಕ್ಷಣ ಕ್ಷೇತ್ರಕ್ಕೆ ವಚನ ವಾಙ್ಮಯದ ಸರಳ ಸುಂದರ ವೈಚಾರಿಕ ನುಡಿಗಳನ್ನು ಹತ್ತು ಹಲವಾರು ಆಯಾಮಗಳಲ್ಲಿ ಪರಿಚಯಿಸಿ ವಚನಗಳ ಮೂಲಕ ನಾಡಿನ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದು ಅವಶ್ಯ ಎಂದು ತಿಳಿಯಬೇಕಿದೆ. ವಿಶ್ವ ಗುರು ಬಸವಣ್ಣನವರ ವಚನದ ಸಾಲುಗಳನ್ನು ಗಮನಿಸುವಾಗ ಉತ್ಕೃಷ್ಟ ವಿಚಾರ ಧಾರೆಗಳನ್ನು ಗುರುತಿಸುವಾಗ ಈ ವಚನ ವಿಶಿಷ್ಟ ಪೂರ್ಣವಾಗಿ ಕಂಡು ಬರುತ್ತದೆ.ದೇವಲೋಕ, ಮರ್ತ್ಯ ಲೋಕವೆಂಬುದು ಬೇರಿಲ್ಲ ಕಾಣಿರೋಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯ ಲೋಕ ಆಚಾರವೇ ಸ್ವರ್ಗ ! ಅನಾಚರವೇ ನರಕ !ಕೂಡಲ ಸಂಗಮದೇವಾ ನೀವೆ ಪ್ರಮಾಣ ಬಸವವಣ್ಣನವರ ಮತ್ತೊಂದು ವಚನದ ಸಾಲು “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಇಲ್ಲಿಯೂ ಕೂಡಾ ನಾವು ಶೈಕ್ಷಣಿಕ ಆಯಾಮದ ಜ್ಞಾನದ ಮೌಲ್ಯವನ್ನು ಗುರುತಿಸುತ್ತೇವೆ. ಕಾಲ ಬದಲಾಗಿದೆ ಜನರ ಮನಸ್ಥಿತಿಗಳು ಬದಲಾಗಿವೆ ಇಂದು ವಿಜಯವೆಂದರೆ ಯುದ್ದಗಳನ್ನು ಗೆಲ್ಲುವುದು ಅಲ್ಲ, ನಮ್ಮೊಳಗಿನ ಅಜ್ಞಾನ, ಅಂಧಕಾರ, ಅಹಂಗಳನ್ನು, ಅಲ್ಪಮತಿಯ ನಡೆಗಳನ್ನು ಗೆದ್ದು ಸಮಾಜದಲ್ಲಿ ಆದರ್ಶ ಪ್ರಾಯ ಎನಿಸಬೇಕಿದೆ. ಆ ವಿಜಯದ ಸಲುವಾಗಿ ನಿರಂತರ ಪ್ರಯತ್ನ ಪ್ರಾಮಾಣಿಕ ಕಾರ್ಯಗಳು ಜರುಗಬೇಕಿವೆ. ಇಲ್ಲಿ ಕ್ಷಣ ಕ್ಷಣಕ್ಕೂ ವಿಜಯದ ಸಂಕೇತವಾಗಿ ಶಿಕ್ಷಣ ಕಂಡು ಬಂದು ಶಿಕ್ಷಣ ಸಂಸ್ಕೃತಿಯ ವೈಭವ ನಂದಾ ದೀವಿಗೆಯಾಗಿ ಬೆಳಗಲಿ ಎಂಬುದು ಲೇಖನದ ಸದಾಶಯವಾಗಿದೆ.

ಡಾ.ಆದಪ್ಪ ಮ.ಗೊರಚಿಕ್ಕನವರ

(ಕೂಡಲಸಂಗಮ)ಇತಿಹಾಸ

ಉಪನ್ಯಾಸಕರುಪಿ.ಎಸ್.ಎಸ್.

ಕಾಲೇಜು ಬೇವೂರ ಬಾಗಲಕೋಟೆ ಜಿಲ್ಲೆ

ದೂ ಸಂ: ೯೪೮೨೮೧೯೬೦೮

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button