ಯಾರಿಗೆ ಕಷ್ಟಗಳು ಇಲ್ಲ ಹೇಳಿ ನೋಡೋಣ….?

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಹಜವಾಗಿ ಕಷ್ಟ ಇದ್ದೇ ಇರುತ್ತವೆ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಇರಬಹುದು ಆದರೆ ಒಟ್ಟಿನಲ್ಲಿ ಕಷ್ಟಗಳು ಇರುವುದಂತೂ ಸತ್ಯ. ನಾವುಗಳು ಇತರರನ್ನು ನೋಡಿ ಅವರಿಗೆ ಕಷ್ಟಗಳು ಇಲ್ಲ ನನಗೆ ಮಾತ್ರ ವಿಪರೀತ ಕಷ್ಟಗಳು ಎಂದು ಕೊಳ್ಳುತ್ತೇವೆ. ಆನೆಯೂ ಇರುವೆಯನ್ನ ನೋಡಿ ಇರುವೆಯೇ ಅದೃಷ್ಟವಂತ ಅದಕ್ಕೆ ಯಾವ ತೊಂದರೆಗಳು ಇಲ್ಲ, ಎಲ್ಲಿ ಬೇಕೋ ಅಲ್ಲೇ ಮಲಗುತ್ತದೆ,ಅದು ಸ್ವಲ್ಪ ತಿಂದರೂ ಸಾಕು ಹೊಟ್ಟೆ ತುಂಬುತ್ತದೆ ಎಂದು ಆನೆ ಭಾವಿಸುತ್ತದೆ, ಇನ್ನು ಆ ಇರುವೆ ಆನೆಯನ್ನು ನೋಡಿ ಇದು ದೊಡ್ಡಪ್ರಾಣಿ ಎಲ್ಲ ಪ್ರಾಣಿಗಳು ಇದಕ್ಕೆ ಹೆದರುತ್ತವೆ ರಾಜಾ ರೋಷವಾಗಿ ಎಲ್ಲಾ ಕಡೆಗೂ ತಿರುಗಾಡಬಹುದು ನನ್ನ ಹಾಗೆ ಜನ ಅದನ್ನು ತುಳಿಯಲಾರರು ಅದೇ ಬಹಳ ಪುಣ್ಯವಂತ ಪ್ರಾಣಿ ಎಂದು ಒಂದಕ್ಕೊಂದು ತಮ್ಮ ಮನಸ್ಸಿನಲ್ಲಿಯೇ ಅಂದು ಕೊಳ್ಳುತ್ತವೆ. ಆದರೆ ಆನೆಯ ಕಷ್ಟ ಇರುವೆಗೆ ಗೊತ್ತಾಗದು,ಇರುವೆಯ ಕಷ್ಟ ಆನೆಗೆ ಗೊತ್ತಾಗದು ತಮ್ಮದೇ ದೊಡ್ಡ ಕಷ್ಟ ಎಂದು ಅವುಗಳು ತಿಳಿದು ಕೊಂಡಿರುತ್ತವೆ. ಹಾಗೆ ನಾವುಗಳು ಸಹ ಇತರರನ್ನು ನೋಡಿ ಅವರು ಸುಖ ಪುರುಷರು ನಾನು ಮಾತ್ರ ಕಷ್ಟಗಳನ್ನು ಅನುಭವಿಸುತ್ತಿರುವೆ ಎಂಬ ಬ್ರಾಂತಿ ನಮ್ಮದು. ಬಡವನಾದ ನನಗೆ ಅನೇಕ ಸಮಸ್ಯೆಗಳು ನಾನು ಶ್ರೀಮಂತನ ಮಗನಾಗಿ ಹುಟ್ಟಿದ್ದರೇ ಆರಾಮವಾಗಿ ಇರಬಹುದಿತ್ತು ಎಲ್ಲವನ್ನು ಅನುಭವಿಸುವ ಅವಕಾಶಗಳು ಇರುತ್ತಿದ್ದವು ಆಗ ಯಾವ ಕಷ್ಟಗಳು ಇರಲಾರವು ಎಣಿಸುವುದು ಸಹಜ ಅದೇ ರೀತಿ ಶ್ರೀಮಂತನಿಗೂ ಸಾಮಾನ್ಯ ಜನರನ್ನ ನೋಡಿ ಅನಿಸುತ್ತದೆ ಈ ಜನರಿಗೆ ನನ್ನಷ್ಟು ಸವಾಲುಗಳು ಇರಲಾರವು ದಿನ ನಿತ್ಯದ ಅನೇಕ ತೊಂದರೆಗಳಿಂದ ರಾತ್ರಿ ನಿದ್ದೆಯೂ ಬರುತ್ತಿಲ್ಲ ಯಾವ ಚಿಂತೆಯೂ ಇಲ್ಲದ ಆ ಜನರು ಮಾತ್ರ ಆನಂದದ ಬದುಕು ಸಾಗಿಸುತ್ತಾರೆ ಎಂದು ಕೊಳ್ಳುತ್ತಾನೆ. ಹೊಟ್ಟೆ ತುಂಬಿಸಿಕೊಂಡ ಶ್ರೀಮಂತನಿಗೆ ಹೊಟ್ಟೆ ಕರಗಿಸುವ ಚಿಂತೆ, ಹಸಿದ ಹೊಟ್ಟೆಯನ್ನು ತುಂಬಿಸಿ ಕೊಳ್ಳುವುದೇ ಬಡವನ ಚಿಂತೆ.ಅವರವರ ಸಮಸ್ಯೆಗಳು ಅವರಿಗೆ ದೊಡ್ಡವು. ಈ ಕಷ್ಟಗಳು ದೇವತಾ ಪುರುಷರನ್ನೇ ಬಿಟ್ಟಿಲ್ಲ ಇನ್ನು ನಮ್ಮ ನಿಮ್ಮಂತ ಸಾಮಾನ್ಯ ಜನರನ್ನ ಬಿಡುತ್ತಾವೆಯೇ ಹೇಳಿ? ಸಾಕ್ಷಾತ್ ವಿಷ್ಣುವಿನ ಅವತಾರಿಗಳಾದ ರಾಮಕೃಷ್ಣರಿಗೆ ಕಷ್ಟಗಳು ಜೇನುನೊಣ ಮುಕ್ಕುರುವ ಹಾಗೆ ಮುಕುರಿದವು ಅದರಲ್ಲೂ ರಾಮನ್ನ ಸ್ಥಿತಿ ಇನ್ನೂ ಸೂಚನೆಯವಾಗಿತ್ತು. ಅಷ್ಟೇಏಕೆ ನಾವು ಮಹಾನ್ ವ್ಯಕ್ತಿಗಳು, ಶ್ರೇಷ್ಠ ಸಾಧಕರು ಎಂದು ಗುರುತಿಸುವವರಿಗೆನು ಕಷ್ಟಗಳು ಇರಲಿಲ್ಲವೇ? ಸಂತ ಮಹಾಂತಾರರು ಬಸವ, ವಿವೇಕಾನಂದ, ಗಾಂಧಿ, ಸುಭಾಷರು, ಪಟೇಲರಂತಹ ಪ್ರಭಾವಶಾಲಿಗಳು ಎಲ್ಲ ಕಷ್ಟಗಳನ್ನು ಉಂಡವರೇ. ಇದೆಲ್ಲವೂ ನಮಗೂ ಗೊತ್ತು ಆದರೂ ನಾವು ಇನ್ನೂ ಹೇಗಿದ್ದೀವಿ ಎಂದರೆ ಜಗತ್ತಿನಲ್ಲೇ ನನ್ನಷ್ಟು ದೊಡ್ಡ ಸಂಕಷ್ಟಗಳು,ದುಃಖ ದುಮ್ಮಾನಗಳು ಮತ್ಯಾರಿಗೂ ಸಿಗಲಾರವು ಎಂದುಕೊಂಡು ಅಲ್ಪಮನಸ್ಕರಾಗಿಬಿಟ್ಟಿದ್ದೇವೆ. ಕಷ್ಟಗಳೆಂಬುದು ಮನುಷ್ಯನಿಗೆ ಮಾತ್ರ ಬರುವಂತದ್ದಲ್ಲ ಹುಟ್ಟಿದ ಪ್ರತಿಯೊಂದು ಜೀವಿಗೂ ನೂರೆಂಟು ಸಮಸ್ಯೆಗಳು ಪತಂಗಕೊಂದು ಕಷ್ಟ , ರಣಹದ್ದಿಗೊಂದು ಕಷ್ಟ, ಬೆಕ್ಕಿಗೊಂದು ಕಷ್ಟ , ಸಿಂಹಕ್ಕೊಂದು ಕಷ್ಟ ಇಲ್ಲಿ ಅವುಗಳನೋವು ಅವುಗಳಿಗೆ ಗೊತ್ತು. ಶುದ್ಧವಾದ ಗಾಳಿ ಹಣ್ಣನ್ನು ನೀಡಿ ಪ್ರಕೃತಿಯ ಸೌಂದರ್ಯ ಹೆಚ್ಚಿಸಿದ ಸಸ್ಯ ಪ್ರಪಂಚಕ್ಕೂ ಕಷ್ಟ ತಪ್ಪಿದ್ದಲ್ಲ, ಸಿಡಿಲು, ಗುಡುಗು,ಸುನಾಮಿಯ ಜೊತೆಗೆ ಈ ಮನುಷ್ಯನ ದುರಹಂಕಾರವನ್ನು ಸಹಿಸಿಕೊಂಡು ಬದುಕಬೇಕಾದ ಅನಿವಾರ್ಯತೆ ಅವುಗಳದ್ದು. ನಾವುಗಳು ಸಹ ಹಾಗೆ ಸವಾಲುಗಳನ್ನು ಸ್ವೀಕರಿಸಿ ಎದ್ದು ನಿಲ್ಲಬೇಕು ಆಗ ಮಾತ್ರ ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯ ಒಂದು ವೇಳೆ ಸಮಸ್ಯೆಗಳಿಗೆ ಹೆದರಿ ಗೋಳಾಡ ತೊಡಗಿದರೆ ಮುಂದೆ ಸಾಗಲಾಗದು. ಕಷ್ಟಗಳು ಶಾಶ್ವತ ಅಲ್ಲ ಅದು ಕ್ಷಣಿಕ ಒಮ್ಮೆ ಹಗಲು ಮತ್ತೊಮ್ಮೆ ರಾತ್ರಿ ಹೇಗೋ ಹಾಗೆ. ನಾವು ಕಷ್ಟಗಳಿಂದ ಮುಕ್ತರಾಗಲು ಯೋಚಿಸುವುದಕ್ಕಿಂತ ಅವುಗಳನ್ನು ಗೆದ್ದು ಮುಂದೆ ಸಾಗುವುದರ ಕಡೆಗೆ ಗಮನ ಕೊಡೋಣ.
ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ.
ವಿಜಯಪುರ. ಮೊ:-6364111512