“ಸಾರಂಗ ಮಠದ ಜಾತವೇದಮುನಿ ಶಿವಾಚಾರ್ಯರಿಗೆ ಕೋಟಿ ನಮನ”…..

ಸುಕ್ಷೇತ್ರ ಕೂಡಲಸಂಗಮ ತ್ರಿವೇಣಿ ನದಿಗಳ ಸಂಗಮವಾಗಿದೆ. ಗುರು-ಲಿಂಗ- ಜಂಗಮರ ಸಂಗಮವನ್ನು ಕ್ಷೇತ್ರದ ಪರಂಪರೆಯಲ್ಲಿ ಗುರುತಿಸುವಾಗ ವೀರಶೈವ ಗುರುಕುಲ ಪರಂಪರೆಯ ಜಾಗೃತ ಮಠವಾಗಿ ಸಾರಂಗಮಠ ಗೋಚರಿಸುತ್ತದೆ. ಸಾರಾಯ ತತ್ವಗಳ ಸಂಗಮದಂತಿದ್ದ ಸಾರಂಗ ಮಠದ ಜಾತವೇದ ಮುನಿಗಳು ಕೂಡಲ ಸಂಗಮ ಕ್ಷೇತ್ರದ ಪರಂಪರೆಯಲ್ಲಿ ಪೂಜ್ಯನೀಯ ಸ್ಥಾನವಹಿಸಿದವರು. ಬಸವಣ್ಣನವರಿಗೆ ವಿದ್ಯಾಗುರುಗಳಾಗಿ ಕ್ಷೇತ್ರದ,ಭಕ್ತ ಸಮೂಹದ ಉದ್ಧಾರಗೈದ ಪೂಜ್ಯರ ಮಠ ಪರಂಪರೆಯ ಪೀಠಾಧಿಪತಿಗಳಾಗಿ ಪಟ್ಟಾಧಿಕಾರ ಹೊಂದಿ ಕಳೆದ ಮೂರು ದಶಕಗಳಿಂದ ಸಂಗಮ ಸೇರಿದಂತೆ ನಾಡಿನ ಅನೇಕ ಕಡೆಗಳಲ್ಲಿ ತಮ್ಮ ಜ್ಞಾನ, ಸುಜ್ಞಾನದ ಚಿಂತನೆಗಳ ಮೂಲಕ ಭಕ್ತರ ಮನೆ ಮನಗಳಲ್ಲಿ ದೈವಿ ಸ್ವರೂಪದ ಸ್ಥಾನ ಪಡೆದಿದ್ದ ಅಭಿನವ ಜಾತವೇದ ಮುನಿ ಶಿವಾಚಾರ್ಯರು ದಿನಾಂಕ ೩೦-೧೧-೨೦೨೪ ರಂದು ಅನಾರೋಗ್ಯದ ಕಾರಣದಿಂದಾಗಿ ಭಕ್ತ ಕುಲಕೋಟಿಯನ್ನು ಅಗಲಿದ್ದು ನಾಡಿನ ಧಾರ್ಮಿಕ, ಆದ್ಯಾತ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಪೂಜ್ಯರ ಅಗಲಿದ ಆತ್ಮಚೇತನಕ್ಕೆ ಭಕ್ತಿಯ ಪುಷ್ಪಗಳನ್ನು ಸಮರ್ಪಿಸಿ ಶ್ರೀಗಳ ಸ್ಮರಣೆಯಲ್ಲಿ ಅಕ್ಷರ ನುಡಿ ನಮನ ಈ ಲೇಖನದ ಮೂಲಕ ಸಲ್ಲಿಸಲಾಗುತ್ತಿದೆ.

ಮಲ್ಲಿಕಾರ್ಜುನಯ್ಯನವರ ಪೂರ್ವಾಶ್ರಮ ಜೀವನ:-

ಕೂಡಲಸಂಗಮದ ಧಾರ್ಮಿಕ ಪರಂಪರೆಯ ಮಠ ಎನಿಸಿದ ಸಾರಂಗಮಠದ ದಂಪತಿಗಳಾದ ಪೂಜ್ಯಶ್ರೀ ಸಂಗಯ್ಯನವರು, ಮಾತ್ರೋಶ್ರೀ ಶಶಿಯವ್ವ ತಾಯಿಯವರ ಪುತ್ರ ರತ್ನರಾಗಿ ಜನಿಸಿದ ಇವರು ಬಾಲ್ಯದಿಂದಲೂ ಶಿವತತ್ವ, ಶರಣ ಚಿಂತನೆ ಆಧ್ಯಾತ್ಮಿಕ ತತ್ವಗಳಲ್ಲಿ ಆಸ್ತಕರಾಗಿದ್ದವರು. ಸಹೋದರರಾದ ಶಿದ್ದಯ್ಯ, ವೀರಯ್ಯ ಸೇರಿದಂತೆ ಮೂವರು ಸಹೋದರಿಯರ ಬಂಧುತ್ವದ ಭಾವ ಸವಿಯನ್ನು ಸವಿಯುತ್ತಾ ಬಾಲ್ಯವನ್ನು ಸ್ವಚ್ಚಂದವಾಗಿ ಕಳೆದಿದ್ದರು. ಅವರೊಳಗಿನ ಜ್ಞಾನದ ಹಂಬಲ ನಿರಂತರ ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡಿತ್ತು. ಸಂಗಮ ಕ್ಷೇತ್ರದ ಭಕ್ತಿ- ಭಾವಗಳ ಚಿಂತನೆಗಳ ಬಲ ಮಲಿಕಾರ್ಜುನಯ್ಯನವರನ್ನು ಅಭಿನವ ಜಾತವೇದ ಶಿವಾಚಾರ್ಯರನ್ನಾಗಿ ಮಾಡಿತ್ತು.

ಅಭಿನವ ಜಾತವೇದ ಶ್ರೀಗಳ ಶಿಕ್ಷಣ:-

ಮೃದು ವಚನಗಳೆ ಸಕಲ ಜಪ-ತಪಂಗಳಯ್ಯಾ ಎಂಬಂತೆ ನಡೆ, ನುಡಿ, ಸಂಸ್ಕಾರಗಳಲ್ಲಿ ಹರಳುಗಟ್ಟಿದ ವಜ್ರದಂತಿದ್ದ ಪೂಜ್ಯರ ಆದ್ಯಾತ್ಮಿಕ ಬದುಕಿಗೆ ಕೂಡಲಸಂಗಮದ ಪವಿತ್ರ ನೆಲ ಜನ್ಮಭೂಮಿ ಹಾಗೂ ಆರಂಭಿಕ ಶಿಕ್ಷಣದ ವಿದ್ಯಾಭೂಮಿಯಾಗಿ ಅನುಕೂಲ ಒದಗಿಸಿತು. ಹೊನ್ನಳ್ಳಿ, ಮುಡಪತೊರೆ ಮುಂತಾದ ಕಡೆಗಳಲ್ಲಿ ಧಾರ್ಮಿಕ ನೆಲೆಯ ಶಿಕ್ಷಣ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ವಿಶೇಷ ಜ್ಞಾನಾರ್ಜನೆಯನ್ನು ಪಡೆದರು. ಅನೇಕ ಪೂಜ್ಯರ ಸಲಹೆ ಮಾರ್ಗದರ್ಶನದಂತೆ ಮೈಸೂರಿಗೆ ತೆರಳಿ ಅಲ್ಲಿಯೂ ಕೂಡಾ ಸಂಸ್ಕೃತದಲ್ಲಿ ಹೆಚ್ಚಿನ ವ್ಯಾಸಂಗ ಗೈದು ಸ್ವಾಮಿತ್ವದ ಸ್ಥಾನಕ್ಕೆ ಜ್ಞಾನದ ಕವಚವನ್ನು ಧರಿಸಿದರು. ಸದಾ ಜ್ಞಾನದ ಹಂಬಲ ಉಳ್ಳವರಾಗಿ ನಾಡಿನ ಹರ ಗುರು ಚರಮೂರ್ತಿಗಳ ಕರಸಂಜಾತರಾಗಿ ವೀರಶೈವ ಧರ್ಮದ ಚಿಂತನೆ, ಶರಣ ಸಂಸ್ಕೃತಿಯ ವಚನಗಳ ಅವಲೋಕನ ಸೇರಿದಂತೆ ಸಮಕಾಲೀನ ಕಾಲಘಟ್ಟಕ್ಕೆ ಭಕ್ತರ ಮನವನ್ನು ಬೆಳಗಬಲ್ಲ ವೈಚಾರಿಕ ನಿಲುವಿನ ಚಿಂತನೆಗಳನ್ನು ಪಡೆದುಕೊಂಡಿದ್ದರು.

ಪೂಜ್ಯರು ಸ್ಮರಿಸುತ್ತಿದ್ದ ನುಡಿ:-

ಲಿಂ. ಅಭಿನವ ಜಾತವೇದ ಶಿವಾಚಾರ್ಯರು ಪ್ರತಿಯೊಂದು ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮಗಳ ಸಾನಿಧ್ಯವಹಿಸಿದ ಸಂದರ್ಭಗಳಲ್ಲಿ ಅವರ ಸರಳ ನುಡಿ ವಿಚಾರಧಾರೆಗಳು ಪ್ರಾರಂಭವಾಗುವ ಪೂರ್ವದಲ್ಲಿ ತಪ್ಪದೇ ಸ್ಮರಿಸುತ್ತಿದ್ದ ಸಾಲುಗಳು “ತ್ರೆಂಲೋಕ್ಯ ಸಂಪಾದಾಲೇಕ್ಯ ಸಮುಲ್ಲೇಖನ ಭಿತ್ತಯೇ! ಸಚ್ಚಿದಾನಂದ ರೂಪಾಯ ಶಿವಾಯ ಬ್ರಹ್ಮಣೆ ನಮಃ! ಶಿವಾಚಾರ್ಯರ ಈ ನುಡಿಗಳು ಹೊರಹೊಮ್ಮುತ್ತಲೆ ತುಂಬಿದ ಸಭೆ ಮೌನವನ್ನು ಜಪಿಸಿ ಶ್ರೀಗಳ ಅಮೃತವಾಣಿಗೆ ಕಾತರರಾಗುತ್ತಿದ್ದರು. ಕಥೆ, ದೃಷ್ಠಾಂತಗಳು, ಲೀಲೆಗಳನ್ನು ಸಾದ್ಯಂತವಾಗಿ ಬಳಸಿಕೊಳ್ಳುತ್ತಾ ಶಿವಧರ್ಮದ ಸಂಗತಿಗಳನ್ನು ಬಸವಾದಿ ಶರಣರ ಬದುಕನ್ನು ಭಕ್ತರ ಮನಕ್ಕೆ ತಲುಪಿಸುತ್ತಿದ್ದರು. ಪ್ರಚಾರದ ಗೋಡವೆಗೆ,ಆಡಂಬರದ ಹಂಬಲಕ್ಕೆ ಎಂದೂ ಬೆಲೆಕೊಡದೆ ಕಾವಿಧಾರಿಗಳ ಕಾರ್ಯಕ್ಷೇತ್ರ; ಸಮಾಜವನ್ನು ಮಕ್ಕಳಂತೆ ಸಲುಹುತ್ತಾ ಸಂಸ್ಕಾರ ಮಾರ್ಗವನ್ನು ತೋರುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿದ್ದರು. ಪೂಜ್ಯರು ತಮ್ಮ ನುಡಿ ಆಶೀರ್ವಚನಗಳಿಗೆ ಎಂದೂ ಟಿಪ್ಪಣೆ ಕಾಗದ ಬಳಸದೇ ನೇರವಾಗಿ ಆಯಾ ವೇದಿಕೆಗಳ ಮೌಲ್ಯ ಸಮಯ ಅರಿತು ಸಭಿಕರ ಆತ್ಮಾನಂದಕ್ಕೆ ಕಾರಣ ಎನಿಸಬಲ್ಲ ಉತ್ತಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಿದ್ದರು.

ಬಾಲಕ ಪೂಜ್ಯರ ಪಟ್ಟಾಧಿಕಾರದ ನೆನಹುಗಳು:-

ಕೂಡಲಸಂಗಮದ ಅಭಿನವ ಜಾತವೇದ ಮುನಿಗಳು ೧೯೮೫ ರ ಕಾಲಘಟ್ಟದಲ್ಲಿ ಸಾರಂಗಮಠದ ಪಟ್ಟಾಧಿಕಾರ ವಹಿಸಿಕೊಂಡಾಗ ವಯೋಮಾನದ ನೆಲೆಯಲ್ಲಿ ಪೂಜ್ಯರು ಬಾಲ್ಯವಸ್ಥೆಯಲ್ಲಿದ್ದವರು. ಅಂದಿನ ಗುರು ಹಿರಿಯರು ಸಮಸ್ತ ದೈವ ಮಂಡಳಿಯವರ ಒಪ್ಪಿಗೆ ಮೇರೆಗೆ ನಾಡಿನ ಹರಗುರು ಚರಮೂರ್ತಿಗಳ ಸಮುಖದಲ್ಲಿ ಪಟ್ಟಾಧಿಕಾರ ಮಹೋತ್ಸವ ಜರುಗಿದ ನೆನಪುಗಳು ಇಂದಿಗೂ ಈ ಭಾಗದ ಹಿರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಕೂಡಲಸಂಗಮದ ಹಿರಿಯ ನಾಗರಿಕರಾದ ಶ್ರೀಯುತ ಗಂಗಪ್ಪ ಬಾಗೇವಾಡಿಯವರು ಅಂದಿನ ಪಟ್ಟಾಧಿಕಾರದ ಸಂದರ್ಭದ ನಂತರ ಶಿವಸ್ವರೂಪಿ ಬಾಲ ಪೂಜ್ಯರನ್ನು ತಮ್ಮ ಹೆಗಲಮೇಲೆ ಹೊತ್ತು ಮೆರೆಸಿದ ನೆನಪುಗಳು ಚಿರಸ್ಮರನೀಯವಾಗಿವೆ. ಅಕಾಲಿಕವಾಗಿ ಪೂಜ್ಯರು ಅಗಲಿದ್ದು ಸಂಗಮಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸೇವೆಯ ಕಾರ್ಯಗಳು ಶಾಶ್ವತ ಸ್ಥಾನ ಪಡೆದು ಕೊಂಡಿವೆ.

ಸಂಗಮನಾಥನ ಬಂಗಾರದ ಕಳಸಕ್ಕೆ ಪೂಜ್ಯರಿಂದ ಭಕ್ತಿ ಗೌರವ:-

ಪ್ರತಿವರ್ಷ ಜಾತ್ರೆಗೆಂದು ಜಿಲ್ಲಾ ಖಜಾನೆಯಲ್ಲಿನ ಬಂಗಾರದ ಕಳಸ ರಥೋತ್ಸವಕ್ಕೆಂದು ಪೋಲಿಸ ಬಿಗಿ ಪಹರೆಯಲ್ಲಿ ಬರುವುದು ವಾಡಿಕೆ. ಸಂಪ್ರದಾಯದ ಭಾಗವಾಗಿ ರಥ ಏರುವ ಮುನ್ನ ಕಳಸವನ್ನು ದೇವಾಲಯದ ಆವರಣದಲ್ಲಿನ ಸಾರಂಗಮಠದಲ್ಲಿ ಸಾಯಂಕಾಲ ಪ್ರತಿಷ್ಠಾಪಿಸಿ ಅಭಿನವ ಜಾತವೇದ ಮುನಿ ಶಿವಾಚಾರ್ಯರು ಸಾರಂಗಮಠದ ಭಕ್ತ ಪರಂಪರೆಯವರು ಭಕ್ತಿ ಗೌರವ ಸಮರ್ಪಿಸಿ ಅಪ್ಪಣೆಯನ್ನು ನೀಡಿದ ನಂತರವೇ ಬಂಗಾರದ ಕಳಸ ರಥ ಏರುವ ಜಾತ್ರಾಮಹೋತ್ಸವದ ಆಚರಣೆಗಳು ನಿರಂತರವಾಗಿ ಜರುಗುತ್ತಾ ಬಂದಿವೆ.

ಮಾಲಾಧಾರಿಗಳಿಗೆ ಸಂಸ್ಕಾರ ದೀಕ್ಷೆ:-

ಚೈತ್ರ ಮಾಸದ ಜಾತ್ರೆಯ ನಿಮಿತ್ತ ಸಂಗಪ್ಪಸ್ವಾಮಿಗಳು ಒಂಬತ್ತು ದಿವಸದ ವ್ರತಚಾರಣೆ ಕೈಗೊಳ್ಳುವ ಪೂರ್ವದಲ್ಲಿ ಇದೇ ಸಾರಂಗಮಠದ ಅಭಿನವ ಶ್ರೀಗಳು ಎಲ್ಲಾ ವ್ರತಧಾರಿಗಳಿಗೆ ರುದ್ರಾಕ್ಷಿ, ಲಿಂಗಧಾರೆಣೆ ಮಾಡಿ ಬದುಕಿನ ಸಾರ್ಥಕತೆಗೆ ವ್ರತ ಆಚರಣೆಗಳ ಮೌಲ್ಯವನ್ನು ತಿಳಿಸುತ್ತಾ ಬಂದಿದ್ದರು. ಕೂಡಲಸಂಗಮದ ಸುತ್ತಮುತ್ತಲ ಗ್ರಾಮಗಳ ಜಾತ್ರೆ- ಉತ್ಸವ ಪುರಾಣ ಪ್ರವಚನಗಳ ಉದ್ಘಾಟನೆ ಮಂಗಲ ಸಮಾರಂಭಗಳಲ್ಲಿ ಕೂಡಲಸಂಗಮದ ಸಾರಂಗಮಠದ ಶ್ರೀಗಳು ತಪ್ಪದೇ ಭಾಗವಹಿಸಿ ಕಾರ್ಯಕ್ರಮಗಳ ಯಶಸ್ವಿಗೆ ಆಶಿರ್ವಾದ ದಯಪಾಲಿಸುತ್ತಿದ್ದರು. ಸಾರಂಗಮಠದ ಶ್ರೀಗಳ ಸ್ಮರಣೆಯ ಜಾತ್ರೆಯ ಹಾಡುಗಳು ಈ ಭಾಗದಲ್ಲಿ ಪ್ರಚಲಿದಲ್ಲಿವೆ.

ಮಠದ ಲೋಕಾರ್ಪಣೆ, ಸರ್ವಧರ್ಮ ಸಾಮೂಹಿಕ ವಿವಾಹ ನೆನಹು:-

ಚಾಲುಕ್ಯ ಮಹಾದ್ವಾರದ ಬಲಭಾಗದಲ್ಲಿ ಸಾರಂಗ ಮಠದ ನೂತನ ಭವ್ಯ ಕಟ್ಟಡ ನಿರ್ಮಾಣಗೊಂಡಿದ್ದು ೨೨-೨-೨೦೧೩ರಂದು ಬೃಹತ್ ಸಮಾರಂಭ ಜರುಗಿ ಪಂಚಪೀಠಗಳ ಪೂಜ್ಯರ ಸಾನಿಧ್ಯದದಲ್ಲಿ ನೂತನ ಮಠ ಉದ್ಘಾಟನೆಗೊಂಡು ಸಾಮೂಹಿಕ ವಿವಾಹ ಜರುಗಿ ಭಕ್ತರ ಹರ್ಷಕ್ಕೆ ಕಾರಣ ಎನಿಸಿತ್ತು. ಅಭಿನವ ಜಾತವೇದ ಶ್ರೀಗಳು ಭವಿತವ್ಯದ ದಿನಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ನೆಲೆಯಲ್ಲಿ ಇನ್ನಷ್ಟು ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಭಕ್ತರ ಉದ್ಧಾರಗೈಯುವ ಕನಸುಹೊಂದಿದ್ದರು. ಸಾರಂಗಮಠದ ವತಿಯಿಂದ ಜರುಗಿದ ನೂರಾರು ಕಲ್ಯಾಣ ಕಾರ್ಯಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಈ ಅಮೋಘಕಾರ್ಯಗಳಿಗೆ ಅಭಿನವ ಜಾತವೇದ ಮುನಿ ಶಿವಾಚಾರ್ಯರು ಹಣತೆ, ತೈಲ, ಭತ್ತಿಯಾಗಿ ತಾವೇ ಸಮರ್ಪಣಾಭಾವದಿ ಕಾವಿ ಉಡಿಗೆಯ ಮೌಲ್ಯವನ್ನು ಇಮ್ಮಡಿಗೊಳಿಸಿದ್ದರು.

ಸಾರಂಗ ಮಠದ ಶ್ರೀಗಳ ಹೆಸರು ಶಾಶ್ವತವಾಗಲಿ:-

ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮ ದೇವನ ಎಂಬ ಶರಣರ ವಾಣಿಯಂತೆ ಪೂಜ್ಯರು ಭೂಮಿಯ ಮೇಲೆ ೪೪ ವಯೋಮಾನದ ವರಗೆ ಜೀವಿಸಿದ್ದರೂ ಅಲ್ಪ ಅವಧಿಯಲ್ಲಿಯೇ ಸಾಕಷ್ಟು ಸಾರ್ಥಕ ಕಾರ್ಯಗಳ ಮೂಲಕ ಭಕ್ತರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಪಾವನ ಕ್ಷೇತ್ರ ಸಂಗಮ ತಾಣದ ಆಧ್ಯಾತ್ಮಿಕ ಮೆರಗು ಮತ್ತಷ್ಟು ಹೊಳಪು ಪಡೆಯಲು, ಸಾರಂಗಮಠದ ಪರಂಪರೆ ದಿವ್ಯಜ್ಯೋತಿಯಾಘು ಬೆಳಗಲು ಕಾರಣ ಎನಿಸಿದ ಪೂಜ್ಯರ ಹೆಸರು ಶಾಶ್ವತವಾಗಿ ಭಕ್ತರ ಮನೆ ಮನದಲ್ಲಿ ಇದ್ದೆ ಇರುತ್ತದೆ. ಅವರ ಸ್ಮರಣೆಯ ಭಾಗವಾಗಿ ಅವರ ಸೇವೆಗಳನ್ನು ಗೌರವಿಸುವ ಭಾಗವಾಗಿ ಈ ಭಾಗದಲ್ಲಿ ಅವರ ಭಕ್ತ ಪರಂಪರೆ, ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಶಿಕ್ಷಣ ಸಂಸ್ಥೆ,ಕಲ್ಯಾಣ ಮಂಟಪ, ದಾಸೋಹ ಭವನ, ನಿರ್ಮಾಣ ಸೇರಿದಂತೆ ಅನೇಕ ಉನ್ನತ ವಿಚಾರದ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಪೂಜ್ಯರು ಸಮಾಜಕ್ಕಾಗಿ ನೀಡಿದ ಕೊಡುಗೆಗಳನ್ನು ಅವರ ಭಕ್ತ ಪರಂಪರೆ ನಿತ್ಯ ಸ್ಮರಿಸುವಂತಾಗಬೇಕು.ಲೋಕದಂತೆ ಬಾರರು, ಲೋಕದಂತೆ ಇರರು ಎಂಬ ಉರಿಲಿಂಗ ದೇವರ ವಚನಗಳ ಸಾಲುಗಳನ್ನು ಅವಲೋಕಿಸುವಾಗ ಪೂಜ್ಯರ ಸಾರ್ಥಕ ಜೀವನ ವಚನೋಕ್ತಿಯ ಸಂಪೂರ್ಣ ಚಿಂತನೆಗಳಿಗೆ ಅನ್ವಯ ಎನಿಸುತ್ತದೆ. ಬಸವಣ್ಣನವರ ವಚನವಾಣಿಯಲ್ಲಿ “ ಎಮ್ಮವರಿಗೆ ಸಾವಿಲ್ಲ ಎಮ್ಮವರು ಸಾವನರಿಯರು ಸಾವೆಂಬುದು ಸಯವಲ್ಲ” ಶರಣರು ಅಮರರು ಅವರಿಗೆ ಮರಣವೇ ಮಹಾನವಮಿ ಎಂಬುದನ್ನು ತಿಳಿಯುವಾಗ ಅಭಿನವ ಜಾತವೇದ ಶಿವಾಚಾರ್ಯರು ಭಕ್ತರ ಮನೆಯಂಗಳದಲ್ಲಿ, ಮನದಂಗಳದಲ್ಲಿ ಲಿಂಗಸ್ವರೂಪಿ, ಶಿವಸ್ವರೂಪಿಯಾಗಿ ಸದಾ ಚೈತನ್ಯದಾಯಕ ಮಂಗಲಮೂರ್ತಿಯಾಗಿ ಉಳಿಯಲಿದ್ದಾರೆ. ಅವರ ಲಿಂಗೈಕ್ಯ ಶರೀರವನ್ನು ಸಂಗಮನಾಥನ ಕ್ಷೇತ್ರದ ಅಂಗಳದ ಅವರ ಕಾರ್ಯಕ್ಷೇತ್ರದ ಸಾರಂಗಮಠದ ಆವರಣದಲ್ಲಿ ವೀರಶೈವ ವಿಧಿವಿಧಾನಗಳ ಅನ್ವಯ ಸಂಸ್ಕಾರ ಕಾರ್ಯವನ್ನು ಭಕ್ತಕುಲಕೋಟಿ ನಾಡಿನ ಹರಗುರು ಚರಮೂರ್ತಿಗಳು ಸಮ್ಮುಖದಲ್ಲಿ ನೇರವೇರಿಸಿದ್ದಾರೆ. ಪೂಜ್ಯರ ಲಿಂಗಸ್ವರೂಪಿ ಶರೀರವು ಶಾಶ್ವತವಾಗಿ ವಿಶ್ರಾಂತಿ ಗೈಯುವ ತಾಣದಿ ಭಕ್ತಿ ಭಾವ ಅರಳಿಸುವ ಗದ್ದುಗೆ ನಿರ್ಮಾಣಗೊಂಡು ಕರ ಮುಗಿದು, ಹಣೆಬಾಗಿ ಬರುವ ಭಕ್ತರ ಇಷ್ಟಾರ್ಥಗಳ ಕಾರ್ಯಗಳಿಗೆ ಬೇಡಿದ್ದನ್ನು ಕರುಣಿಸುವ ಮಮತೆಯ ಗದ್ದುಗೆಯಾಗಿ ಹೆಸರುವಾಸಿಯಾಗಲಿ ಕನ್ನಡ ನೆಲದ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರದ ಪರಂಪರೆಯಲ್ಲಿ ಅಭಿನವ ಜಾತವೇದ ಮುನಿ ಶಿವಾಚಾರ್ಯರ ಹೆಸರು ಅಮರತ್ವವವನ್ನುಗಳಿಸಲಿ. ಭಕ್ತಕುಲಕೋಟಿಯ ವತಿಯಿಂದ ಶಿವಾಚಾರ್ಯರಿಗೆ ಬಾಗಿದ ತಲೆ ಮುಗಿದ ಕೈಗಳಿಂದ ಕೋಟಿ ನಮನಗಳು.

ನುಡಿ ನಮನ ಲೇಖನ:-

ಡಾ, ಆದಪ್ಪ ಮಲ್ಲಪ್ಪ ಗೊರಚಿಕ್ಕನವರ (ಕೂಡಲಸಂಗಮ)ಇತಿಹಾಸ ಉಪನ್ಯಾಸಕರು ಪಿ.ಎಸ್.ಎಸ್. ಕಾಲೇಜು, ಬೇವೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button