ಅಕ್ರಮವಾಗಿ ಭೂ ಬಗೆದು ಗಣಿಗಾರಿಕೆ ಮಾಡುವವರ ವಿರುದ್ಧ – ಸರ್ಕಾರದ ಕ್ರಮ ಯಾವಾಗ….?
ದ್ಯಾಂಪುರ ಮಾ .19

ತರೀಕೆರೆ ತಾಲೂಕಿನ ಕಸಬಾ ಹೋಬಳಿಯ ದ್ಯಾಂಪುರ ಗ್ರಾಮ (ಅತ್ತಿಗನಾಳು) ಸರ್ವೆ ನಂಬರು 13 ರಲ್ಲಿ ಅರಣ್ಯ ಮತ್ತು ಸರ್ಕಾರಿ ಗೋಮಾಳ ಇದ್ದು. ಸದರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ರಾಜಕೀಯ ಪ್ರಭಾವಿ ವ್ಯಕ್ತಿಗಳು ಸೇರಿ ಸುಮಾರು ಐದು-ಆರು ತಿಂಗಳಿನಿಂದ ಆಕ್ರಮವಾಗಿ ಜೆ.ಸಿ.ಬಿ. ಮತ್ತು ಇಟಾಚಿಯಿಂದ ಸುಮಾರು ಹತ್ತರಿಂದ ಹದಿನೈದು ಅಡಿ ಆಳದವರೆಗೆ ಮಣ್ಣು ಅಗೆದು 6 ವೀಲ್, 10 ವೀಲ್ ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುತ್ತಾರೆ. ಇವರುಗಳು ಸರ್ಕಾರಕ್ಕೆ ವಂಚನೆ ಮಾಡಿ, ಸರ್ಕಾರಕ್ಕೆ ರಾಯಲ್ಟಿ ಕಟ್ಟದೇ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿರುತ್ತಾರೆ. ಅಕ್ಕ-ಪಕ್ಕದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿಯಾಗಿದ್ದು, ಗೋಮಾಳಕ್ಕೆಂದು ಬಿಟ್ಟಿರುವ ಜಾಗದಲ್ಲಿ ಇವರುಗಳು ಹದಿನೈದು ಅಡಿ ಆಳದವರೆಗೆ ಮಣ್ಣು ಅಗೆಯುವುದರಿಂದ ದನಕರುಗಳಿಗೆ ಮೇಯಲು ಮೇವು ಇರುವುದಿಲ್ಲ.
ಫಲವತ್ತಾದ ಮಣ್ಣನ್ನು ಅರಣ್ಯದಿಂದ ಇದೇ ರೀತಿ ಸಾಗಾಟ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಆರಣ್ಯ ಸವಕಳಿ ಉಂಟಾಗಿ ಅರಣ್ಯವೇ (ಕಾಡು) ಇರುವುದಿಲ್ಲ.ನಾನು ಈ ವಿಚಾರವಾಗಿ ದಿ:16-03-2025 ರಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಅವರು ತಕ್ಷಣವೇ ಸ್ಥಳ ತನಿಖೆ ಮಾಡುವಂತೆ ಆದೇಶಿಸಿರುತ್ತಾರೆ. ನಂತರ ತರೀಕೆರೆ ತಾಲೂಕಿನ ಕಸಬಾ ಹೋಬಳಿಯ ಆರ್.ಐ. ರೇವಣ್ಣ ಮತ್ತು ಗ್ರಾಮ ಲೆಕ್ಕಿಗರು ವಿನಯ್ ರವರು ಸ್ಥಳಕ್ಕೆ ಬಂದು ಅಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದವರಿಗೆ ನಿಮ್ಮ ಬಳಿ ಇರುವ ಪರವಾನಗಿ ನೀಡಿ ಎಂದಾಗ ಅವರು ನಮ್ಮ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂದು ಮಾಹಿತಿ ನೀಡಿರುತ್ತಾರೆ. ತಕ್ಷಣವೇ ಆರ್.ಐ. ಮತ್ತು ಗ್ರಾಮ ಲೆಕ್ಕಿಗರು ಸೇರಿ ಅಲ್ಲಿರುವ 6 ವೀಲ್, 10 ವೀಲ್ ಟಿಪ್ಪರ್ ಲಾರಿ, ಜೆ.ಸಿ.ಬಿ., ಜಪ್ತಿ ಮಾಡಿರುತ್ತಾರೆ. ಇಟಾಚಿ ಮತ್ತು ಮತ್ತು ಇತರೆ ವಾಹನಗಳು ಮಾಹಿತಿ ತಿಳಿದ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿರುತ್ತಾರೆ.
ತಕ್ಷಣವೇ ನಾನು ತರೀಕೆರೆ ತಾಲೂಕಿನ ತಹಶೀಲ್ದಾರ್ ರವರಿಗೆ ಫೋನ್ ಕರೆ ಮಾಡಿ ನೀವು ತಕ್ಷಣವೇ ಸ್ಥಳ ತನಿಖೆ ಮಾಡಿ ಇವರುಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಮಾಹಿತಿ ನೀಡಿದಾಗ ಅವರು ನನಗೂ ಇದಕ್ಕೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಉಡಾಫೆ ಮಾತುಗಳನ್ನು ಆಡುತ್ತಾರೆ ಇದರಿಂದಲೇ ತಿಳಿಯುತ್ತದೆ ಈ ರೀತಿಯ ಅಕ್ರಮ ಗಣಿಗಾರಿಕೆಯಲ್ಲಿ ತಹಶೀಲ್ದಾರ್ ರವರು ಸಹ ಶಾಮೀಲಾಗಿದ್ದಾರೆ ಎಂದು. ಅವರು ನೀವು ಬೇಕಾದರೆ ಎ.ಸಿ./ಡಿ.ಸಿ. ಬೇಕಾದ್ರೂ ದೂರು ನೀಡಿ ನನಗೇನು ಮಾಡಲು ಆಗುವುದಿಲ್ಲ ಎಂದು ಹೇಳಿರುತ್ತಾರೆ ಇದು ರೆಕಾರ್ಡ್ ಆಗಿದ್ದು ಇದರೊಂದಿಗೆ ಸಿ.ಡಿ ಮಾಡಿ ಲಗತ್ತಿಸಿರುತ್ತೇನೆ. ತಹಶೀಲ್ದಾರ್ ರವರು ಹೆಡ್ ಕ್ವಾರ್ಟ್ರನಲ್ಲಿ ಇರುವುದಿಲ್ಲ. ನಂತರ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದು, ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡುವಂತೆ ಸೂಚಿಸಿದರು ಸಹ ಮಾನ್ಯ ಉಪ ವಿಭಾಗಾಧಿಕಾರಿಗಳು ಮತ್ತು ಮಾನ್ಯ ತಹಶೀಲ್ದಾರ್ ರವರು ಅವರ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ದಿಂದ ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ವೆಸಗಿರುತ್ತಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಇಲ್ಲದೇ ಈ ರೀತಿ ಮಣ್ಣು ತುಂಬುತ್ತಿದ್ದಾರೆ. ಮಣ್ಣನ್ನು ಗುತ್ತಿಗೆದಾರರಿಗೆ ಮಾರಾಟ ಮಾಡುವವರಿಂದ, ಗೋಮಾಳ ಮತ್ತು ಅರಣ್ಯ ಸವಕಳಿ ಆಗುತ್ತಿದ್ದು, ಈ ರೀತಿ ಆಗುವುದನ್ನು ತಡೆಗಟ್ಟಬೇಕು ಮತ್ತು ಸರ್ಕಾರಕ್ಕೆ ಆಗಿರುವ ನಷ್ಟವನ್ನು ಭರ್ತಿ ಮಾಡಿ ಕೊಳ್ಳಬೇಕು ಹಾಗೂ ತಾವುಗಳು ದಯ ಮಾಡಿ ಇವರುಗಳು ಮೇಲೆ ಕಾನೂನು ಕ್ರಮ ಕೈಗೊಂಡು ಈ ರೀತಿ ಅಕ್ರಮ ಗಣಿಗಾರಿಕೆ ಮಾಡದಂತೆ ಕ್ರಮ ಜರುಗಿಸ ಬೇಕೆಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಮೂಲಕ ತಿಳಿಸಿದ್ದಾರೆ.
ವರದಿ:ಟಿ.ಎನ್ ಕುಮಾರ್ ತರೀಕೆರೆ