ಶ್ರೀಮಾತೆ ಶಾರದಾದೇವಿ ಅವರ ಮಾತೃ ವಾತ್ಸಲ್ಯ ಅನಂತವಾದದ್ದು – ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್.ಕುಮಾರ್ ಅಭಿಮತ.
ಚಳ್ಳಕೆರೆ ಮೇ.16

ಶ್ರೀಮಾತೆ ಶಾರದಾದೇವಿ ಅವರ ಮಾತೃ ವಾತ್ಸಲ್ಯ ಅನಂತವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್. ಕುಮಾರ್ ತಿಳಿಸಿದರು. ತಾಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ದೇವರಹಟ್ಟಿಯಲ್ಲಿ ಸದ್ಭಕ್ತರಾದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ ಅವರ ಮನೆಯ ಅಂಗಳದಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕರ ನೇತೃತ್ವದಲ್ಲಿ ಆಯೋಜಿಸಿದ್ದ ತಿಂಗಳ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ವಿಶ್ವ ತಾಯಂದಿರ ದಿನ” ದ ಹಿನ್ನೆಲೆಯಲ್ಲಿ “ತಾಯಿ” ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬದುಕಿನಲ್ಲಿ ಅಮ್ಮನ ಪಾತ್ರ ಮಹತ್ವದ್ದಾಗಿದ್ದು ಆಕೆ ಕರುಣಾಮಯೀ, ವಾತ್ಸಲ್ಯಮಯೀ ಯಾಗಿ ತನ್ನ ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ರೀತಿ ಬೆರಗು ಮೂಡಿಸುತ್ತದೆ.

ಆದ್ದರಿಂದ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಸಹಧರ್ಮಿಣಿ ಶ್ರೀಮಾತೆ ಶಾರದಾದೇವಿ ಅವರ ಸಮಗ್ರ ಜೀವನವನ್ನು ಅಧ್ಯಯನ ಮಾಡಿದಾಗ ನಮಗೆ ಅವರ ವಿಶ್ವವ ತಬ್ಬುವ ವಾತ್ಸಲ್ಯ ಗಮನ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸ ಬೇಕು ಎಂದರು. ಸಮಾಜ ಸೇವಕಿ ಡಾ, ಭೂಮಿಕ ಮಾತನಾಡಿ ಶ್ರದ್ಧಾ ಪೂರ್ವಕ ಪ್ರಾರ್ಥನೆಯಿಂದ ಭಗವಂತನ ಪ್ರೀತಿಗೆ ನಾವು ಪಾತ್ರರಾಗಬಹುದು. ಮಹಾತ್ಮರ ಸರಳ ಜೀವನ ಮತ್ತು ಸಂದೇಶಗಳು ಸಾರ್ಥಕ ಬದುಕಿಗೆ ಸುಲಭ ಸೂತ್ರಗಳಾಗಿವೆ. ಆದ್ದರಿಂದ ಅವುಗಳ ಅನುಸರಣೆ ಯಿಂದ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು. ಈ ಸತ್ಸಂಗದ ಆರಂಭದಲ್ಲಿ ವಿಶೇಷ ಭಜನೆಯನ್ನು ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮದ ಜಾನಪದ ಮಹಿಳೆ ಬೊಮ್ಮಕ್ಕ ಅವರು ತತ್ವ ಪದಗಳನ್ನು ಹಾಡಿ ರಂಜಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಸಂತೋಷಕುಮಾರ, ಋತಿಕ್,ಲಕ್ಷ್ಮೀ ಚೆನ್ನಕೇಶವ, ಎತ್ತಿನ ಕಾಟಯ್ಯ, ಅಶ್ವಿನಿ, ಭಾವನಾ, ಭೂಮಿಕ, ಶಾರದಾ, ಇಂದು, ರಕ್ಷಿತ, ಹೇಮಲತಾ, ತಿಪ್ಪಮ್ಮ, ಭಾಗ್ಯಮ್ಮ, ಮಂಗಳಮ್ಮ, ಬೊಮ್ಮಕ್ಕ ಸೇರಿದಂತೆ ಗ್ರಾಮದ ಮಕ್ಕಳು ಮತ್ತು ನಾಗರೀಕರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ,ಚಳ್ಳಕೆರೆ.