“ಅಂತರಾಳ” …..

ಎದೆಯ ದನಿಯೇಕೊ ಮೂಕವಾಗಿರಲು
ಪದಗಳು ಸೇರಲು ಹಠವ ಮಾಡುತಿವೆ
ಮನದಾಳದಲಿ ಹುದುಗಿಹ ತಲ್ಲಣಗಳು
ನೆನಪುಗಳಿಗೆ ಜೀವ ತುಂಬಿ ಕಾಡುತಿವೆ
ಬದುಕ ಬವಣೆಗಳ ಮೆಟ್ಟಿ ನಿಂತು ಬದುಕ ದಾರಿ
ಕಂಡು ಕೊಂಡೆನೆಂದು ಹೆಮ್ಮೆಪಡಲಾ?
ಬಾಳಲಿ ಬಯಸದ ಸೌಭಾಗ್ಯವ ಕರುಣಿಸಿ
ಧನ್ಯತಾ ಭಾವವ ತಂದಿಹ ದೈವವ ನೆನೆಯಲಾ?
ನನ್ನಂತರಾತ್ಮವ ತಿಳಿಯದ ದುರುಳರು ಕೊರಳ
ಬಿಗಿದು ಅಟ್ಟಹಾಸ ಮೆರೆದುದ ಹೇಳಲಾ ?
ಎದುರಲ್ಲಿ ಸ್ತುತಿಸುತ್ತಾ ಬೆನ್ನ ಹಿಂದೆ
ದೂರುವ ದುಷ್ಟ ಮನುಜರ ಕಂಡು
ಮರುಕಪಡಲಾ ?
ನಂಬಿದ ಆಪ್ತರು ಬದುಕಿಗೆ ಕೊಳ್ಳಿಯಿಟ್ಟುದುದ
ನೆನೆದು ದುಃಖಪಡಲಾ ?
ಮಾಡದ ತಪ್ಪಿಗೆ ನೋವು ಅವಮಾನಗಳ
ತಂದೊಡ್ಡಿದ ವಿಧಿಯ ಶಪಿಸಲಾ ?
ಬೇಕು ಬೇಡಗಳ ನಡುವಿನ
ಗೊಂದಲದ ಅಂತರಾಳದ ಸಮರಕ್ಕೆ ನಾಂದಿ
ಹಾಡಲಾ?
ಮಡುಗಟ್ಟಿದ ಮನದ ದುಗುಡವ ಮರೆತು ಮೈ
ಕೊಡವಿ ಎದ್ದು ಬರಬೇಕಿದೆ
ಮತ್ತೆ ಬರೆಯಬೇಕಿದೆ
ಅಳಿದುಳಿದ ಬದುಕಿಗೆ ಬಣ್ಣ ತುಂಬಿಸಲು

ರಚನೆ:ಡಾ, ಆರ್.ಗೌರಮ್ಮ,ಚಿತ್ರದುರ್ಗ.