“ವಯಸ್ಸಿಗೆ ಸಾಧನೆ ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ”…..

ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಒಂದು ಕ್ಷಣವಾದರೂ ವಿಚಾರ ಮಾಡಿಯೇ ಬಿಟ್ಟಿರುತ್ತಾನೆ. ಆ ಸಾಧನೆ ಒಂದೇ ರಂಗದಲ್ಲಿ ಇಲ್ಲ, ಹಲವಾರು ರಂಗಗಳಲ್ಲಿ ಸಾಧನೆ ಮಾಡಿದವರನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಸಾಮಾನ್ಯ ವ್ಯಕ್ತಿಯಾಗಿ ಸತ್ತರೆ ಆ ಬದುಕಿಗೆ ಅರ್ಥವೇ ಇಲ್ಲ. ಜೀವನ ಎಂಬ ಪುಸ್ತಕದಲ್ಲಿ ಜನನ ಮತ್ತು ಮರಣ ಎಂಬ ಮೊದಲ ಹಾಗೂ ಕೊನೆಯ ಪುಟಗಳು ಮಾತ್ರ ನಮ್ಮದಲ್ಲ,ಉಳಿದೆಲ್ಲಾ ಪುಟಗಳು ನಮಗೆ ಸಂಬಂಧಿಸಿವೆ. ಆ ಪುಟಗಳನ್ನು ನಾವು ಹೇಗೆ ಬರೆಯುತ್ತೇವೆ ಎಂಬುದು ನಮಗೆ ಬಿಟ್ಟ ವಿಚಾರ. ನಮ್ಮ ಬದುಕು ಚರಿತ್ರೆಯಾಗಬೇಕು ಮತ್ತೊಬ್ಬರಿಗೆ ಸ್ಪೂರ್ತಿಯಾಗಬೇಕು, ಮಾದರಿಯಾಗಬೇಕು. ಆ ರೀತಿಯ ಬದುಕಿಗೆ ಸಮಯ ಪಾಲನೆ, ಶಿಸ್ತು ಹಾಗೂ ಪ್ರಾಮಾಣಿಕ ಪ್ರಯತ್ನ ಬಹಳ ಮುಖ್ಯವಾಗಿದೆ. ಸಾಧನೆ ಸಾಧಕನ ಸೊತ್ತು ವಿನಹ ಸೋಮಾರಿಯ ಸ್ವತ್ತಲ್ಲ.

ನಾವು ಒಬ್ಬರೇ ಸಾಧಕರಾಗುವುದಕ್ಕೂ ನಮ್ಮವರನ್ನು ಸಾಧಕರನ್ನಾಗಿ ಮಾಡಿ ನಾವು ಸಾಧಕರಾಗುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ನಿತ್ಯ ಸಾಧನೆಯ ಕನಸು ಕಾಣುವ ನಿದ್ರೆ ನಮ್ಮದಾಗಬೇಕು ವಿನಃ ರಾತ್ರಿ ಆಯಿತು ಎಂಬ ವಿಚಾರಕ್ಕೆ ಬರುವ ನಿದ್ದೆ ನಮ್ಮದಾಗಬಾರದು. ಯಾವ ಕಾರಣಕ್ಕೂ ಸಾಧನೆಯ ದಿನವನ್ನು ಮುಂದೂಡಬಾರದು ಕಾರಣ ಆ ದಿನ ನಾವೇ ಇರದಿದ್ದರೆ ?. ಇರುವ ಅಲ್ಪ ದಿನಗಳಲ್ಲಿಯೇ ನಾವು ಸಾಧಕರಾಗೋಣ. ಸಾಧಕರಾಗಲು ಯಾವುದೇ ವಯಸ್ಸಿನ ಮಿತಿ ಇಲ್ಲ. ದಿನಗಳು ಬರಲಿ ಮುಂದೆ ನೋಡೋಣ ಎಂದು ಕಾಲಹರಣ ಮಾಡುತ್ತಾ ಹೋದರೆ ಆ ದಿನ ಬೇರೆಯವರ ಪಾಲಾಗುವುದು. ಯಾವ ಕ್ಷೇತ್ರದಲ್ಲಿಯೇ ಆಗಲಿ ಸಾಧನೆ ಮಾಡಬೇಕೆಂದರೆ ಪರಿಶ್ರಮದ ಪ್ರಯತ್ನಗಳು ಬೇಕೇ ಬೇಕು. ರಾತ್ರೋರಾತ್ರಿ ಸಾಧಕರಾದ ಇತಿಹಾಸ ಎಲ್ಲೂ ಇಲ್ಲ ಆ ಸಾಧನೆಯ ಹಿಂದೆ ಎಷ್ಟೋ ದಿನಗಳ, ಗಂಟೆಗಳ ತಮ್ಮದೇ ಆದ ಶ್ರಮವಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ 23 ವರ್ಷ ಬದುಕಿ ತನ್ನ ಪ್ರಾಣವನ್ನೇ ಪಣಕಿಟ್ಟ ಭಗತ್ ಸಿಂಗ್. 24 ವರ್ಷ ಬದುಕಿದರು ಸ್ವಾತಂತ್ರ್ಯಕ್ಕಾಗಿಯೇ ಹೋರಾಡಿ ಹುತಾತ್ಮರಾದ ಚಂದ್ರಶೇಖರ ಅಜಾದ್. 23 ವರ್ಷಕ್ಕೆ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಸುಖದೇವ್. 22 ವರ್ಷದಲ್ಲಿ ಸ್ವಾತಂತ್ರ್ಯಕ್ಕಾಗಿ ನೇಣು ಗಂಬಕ್ಕೆ ಮುತ್ತು ಕೊಟ್ಟ ರಾಜ್ ಗುರು. ಏಳನೇ ತರಗತಿಯಲ್ಲಿ ಓದುತ್ತಿರುವಾಗಲೇ ಸಿನಿಮಾ ನಿರ್ದೇಶಕನಾದ ಮಾಸ್ಟರ್ ಕಿಶನ್. 39 ವರ್ಷ ಬದುಕಿದರೂ ಕೂಡ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರು. 29 ವರ್ಷದ ಕೆಚ್ಚೆದೆಯ ಹುಡುಗ ಬ್ರಿಟಿಷರ ಗುಂಡಿಗೆ ಬಲಿಯಾದ ಮಂಗಲ್ ಪಾಂಡೆ . ಇಂತಹ ಹಲವಾರು ಸಾಧಕರ ಕುರಿತು ಓದಿದ್ದೇವೆ,ಓದುತ್ತಲೂ ಇದ್ದೇವೆ ಇವರ ಈ ಸಾಧನೆಗೆ ಮುಖ್ಯವಾದದ್ದು ಪ್ರಾಮಾಣಿಕ ಪ್ರಯತ್ನ.

ಮೇಲಿನ ಸಾಧಕರನ್ನು ನೋಡಿದರೆ ಸಾಧನೆಗೆ ಯಾವುದೇ ರೀತಿಯ ವಯಸ್ಸು ಮುಖ್ಯವಲ್ಲ. ನಾವು ಸಾಧಕರು ಆಗಬೇಕೆಂಬ ಹಠ ಇರಬೇಕು. ಆ ಹಠಕ್ಕೆ ತಕ್ಕ ಹಾಗೆ ಪರಿಶ್ರಮವಂತು ಮೊದಲೇ ಬೇಕು. ನಿಮ್ಮವರಿಗೆ ನೀವು ಯಾರೆಂಬುದು ಗೊತ್ತಾಗಬೇಕಾದರೆ ನಿಮ್ಮಲ್ಲಿರುವ ಸಾಧನೆ ಇಡೀ ಜಗತ್ತಿಗೆ ಗೊತ್ತಾಗಬೇಕು. ಇವರು ಯಾರು ನಮಗೆ ಗೊತ್ತಿಲ್ಲ ಅಂದವರು ಇವನು ನಮ್ಮವನು ಅನ್ನುವ ಮಟ್ಟಕ್ಕೆ ನಾವು ಬೆಳೆಯಲೇಬೇಕು. ಸಾಧಿಸುವ ಹಂಬಲ ಈ ಕ್ಷಣದಿಂದಲೇ ಪ್ರಾರಂಭವಾಗಲಿ ಸಾಧಕರ ಪಟ್ಟಿಗೆ ನಮ್ಮ ಹೆಸರು ಸೇರುವಂತಾಗಲಿ. ಮತ್ತೊಮ್ಮೆ ಮಗದೊಮ್ಮೆ ಹೇಳುವೆ ನಾವು ಸಾಧಕರಾಗೋಣ ಏಕೆಂದರೆ ಶಾಶ್ವತವಾಗಿರದ ಜೀವನದಲ್ಲಿ ಶಾಶ್ವತವಾಗಿರುವಂತಹ ಸಾಧನೆ ಮಾಡು.

ಶ್ರೀ ಮುತ್ತು ಯ.ವಡ್ಡರ ಶಿಕ್ಷಕರು

HPS ಹಿರೇಮಳಗಾವಿ

ಬಾಗಲಕೋಟ-ಜಿಲ್ಲೆ

mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button