“ಹೆತ್ತ ತಾಯಿಗೆ ಕೊಟ್ಟಷ್ಟು ಗೌರವ ಕನ್ನಡಕ್ಕೂ ಕೋಡೋಣ”…..

ಮಾತೃಭಾಷೆ ತಾಯಿನುಡಿ ಎಂದರೆ ಮಗುವು ತನ್ನ ಬಾಲ್ಯದಲ್ಲಿ ಪ್ರಪ್ರಥಮವಾಗಿ ಕಲಿತ ಭಾಷೆ. ಹೆಚ್ಚಾಗಿ ಮಗುವು ತನ್ನ ತಾಯಿಯಿಂದಲೇ ಇದನ್ನು ಕಲಿಯುವುದರಿಂದ ಇದಕ್ಕೆ ಮಾತೃಭಾಷೆ ಎಂದು ಕರೆಯಲಾಗುತ್ತದೆ. ಕನ್ನಡಿಗರು ಕನ್ನಡ ಭಾಷೆಯನ್ನು ಪ್ರೀತಿಸಬೇಕು ಮತ್ತು ಇತರ ಭಾಷೆಗಳೊಂದಿಗೆ ಮಿಶ್ರಣವಾಗಿ ಬಳಸುವುದರಿಂದ ಹೊಸ ಪದಗಳನ್ನು ರಚಿಸಬೇಕು. ಕನ್ನಡ ಸಂಸ್ಕೃತಿ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಮರೆಯದೆ ಅದನ್ನು ಉಳಿಸಿ ಕೊಳ್ಳಬೇಕು.
ಕನ್ನಡಿಗನ್ನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವವರೆಗೆ ಕನ್ನಡಿಗನಾಗಿ ಬದುಕಿ ಬಾಳುವುದು ಮನುಷ್ಯತ್ವ ಅಲ್ಲವೇ. ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡದ ವ್ಯಾಪ್ತಿ ಚಿಕ್ಕದು ಎಂಬ ಕೀಳರಿಮೆ ಇಂದ ಹೊರಬನ್ನಿ ಕರ್ನಾಟಕ ಎಂಬುದು ಇಟಲಿ, ಜರ್ಮನಿಯಷ್ಟೇ ದೊಡ್ಡದು, ಅವರಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದೇವೆ. ಜಗತ್ತಿನ 23 ನೇ. ಅತಿ ಹೆಚ್ಚು ಜನರಾಡೋ ಭಾಷೆ ಇದು. ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯ ಬೇಕಾದರೆ ಮಾತೃ ಭಾಷೆಯಿಂದ ಮಾತ್ರ ಸಾಧ್ಯ. ಮಾತೃ ಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಷ್ಟೇ ಸತ್ಯ. ಮನೆ ಮನದಲ್ಲಿ ಕನ್ನಡ ನಾದ ಮೊಳಗಿದಾಗ ಭಾಷೆ ಬೆಳೆಯುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಐತಿಹಾಸಿಕ ಹಿನ್ನೆಲೆ ಇದೆ. ಕನ್ನಡ ಭಾಷೆ ಸರಳ, ಸಹಜ ಭಾಷೆ. ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ. ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿ ಕೊಳ್ಳಬೇಕು ಬದಲಾಗಿ ಯಾವುದೇ ಕಾನೂನು ನಿಯಮದಿಂದ ಬಲವಂತದಿಂದ ಭಾಷೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು.
ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ಪಾಲಕರಾದ ನಾವು ಮನೆಯಲ್ಲಿ ಇರುವ ಎಲ್ಲಾ ಸದಸ್ಯರಿಗೆ ಭಾಷೆಯ ಅರಿವನ್ನು ತಿಳಿಸಿ ಅರಿವನ್ನು ಮೂಡಿಸಬೇಕು ಇದು ಪ್ರತಿಯೊಬ್ಬ ಪಾಲಕರ ಕರ್ತವ್ಯ ಆಗಿದೆ. ಕರ್ನಾಟಕವು ಇಲ್ಲಿನ ಜನಕ್ಕೆ ನೆಲ, ನೀರು, ನೆರಳು ಮತ್ತು ಬದುಕು ಕಟ್ಟಿ ಕೊಳ್ಳಲು ಎಲ್ಲ ಅವಕಾಶಗಳನ್ನು ನೀಡುತ್ತಲೇ ಇದೆ. ಈ ರೀತಿಯ ವಿಷಯಗಳನ್ನು ಪಾಲಕರು ತಮ್ಮ ಮಕ್ಕಳಿಗೆ ತಿಳಿ ಹೇಳಬೇಕು. ಏಕೆಂದರೆ ಇಂದಿನ ಮಕ್ಕಳ ಕಲಿಕೆಯಲ್ಲಿ ಕನ್ನಡ ಕಸ್ತೂರಿಯ ಸುವಾಸನೆ ಕಡಿಮೆ ಆಗುತ್ತಿದೆ. ಭಾಷೆಯೇ ಸೊರಗುತ್ತಿರುವಾಗ ಅದರಿಂದ ಸೃಷ್ಟಿಯಾಗುವ ನಾನಾ ರೀತಿಯ ಸಾಹಿತ್ಯ ಪ್ರಕಾರಗಳು ಜನರಿಂದ ದೂರವಾಗುತ್ತಿವೆ. ಆದರಿಂದ ಈ ಒಂದು ಹಂತದಲ್ಲಿ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಬಳಸಿ ಉಳಿಸ ಬೇಕು ಇದು ನಮ್ಮ ಕರ್ತವ್ಯ. ಒಬ್ಬ ಕನ್ನಡಿಗ ನೀನಾಗು ಈ ತಾಯಿಯ ಋಣವ ತೀರಿಸು ಕನ್ನಡವೇ ಸತ್ಯ ಕನ್ನಡವೇ ನಿತ್ಯ.
– ಕು ಜ್ಯೋತಿ ಆನಂದ ಚಂದುಕರ
ಬಾಗಲಕೋಟ