ದಲಿತರ ಭೂಮಿಯ ಹಕ್ಕಿಗಾಗಿ – ಆಗ್ರಹಿಸಿ ಪ್ರತಿಭಟನಾ ಧರಣಿ.

ಶಿವಮೊಗ್ಗ ಜು.16

ಭೂಮಿ ಒಂದು ಉತ್ಪಾದನ ಸಾಧನವಾಗಿದೆ. ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಅಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ವೈದಿಕ ಧರ್ಮ ಆರ್ಥಾತ್ ‘ಬ್ರಾಹ್ಮಣ ಧರ್ಮ’ ತಲಾ ತಲಾಂತರಗಳಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ. ಸ್ವತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್’ ರವರ ಅಂದೋಲನದಿಂದಾಗಿ ದಲಿತ-ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಾಹ್ಮಣ ಶಾಹಿ/ಬಂಡವಾಳ ಶಾಹಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಡಾ, ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳವಳಿ, ಭೂಮಿ, ಶಿಕ್ಷಣ, ಉದ್ಯೋಗ, ಮುಂತಾದ ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ಆಳುವ ಪ್ರಭುತ್ವ ದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಾ ಬಂದಿದೆ.

ಕಳೆದ ನಾಲ್ಕು ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. ಇಂದಿಗೂ ಸಹ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ 11% ಭೂಮಿ ಮಾತ್ರ ಹೊಂದಿರುತ್ತಾರೆ.

ಇದರಲ್ಲಿ ನೀರಾವರಿ ಪ್ರದೇಶದ ಭೂಮಿ ಅತ್ಯಲ್ಪವಾಗಿದೆ.

70 ರ ದಶಕದಲ್ಲಿ ಮಾನ್ಯ ಬಿ.ಬಸವಲಿಂಗಪ್ಪ ನವರ ದೂರದೃಷ್ಟಿಯ ಫಲವಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರ ಶಾಹಿಯ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರ ದಿಂದ ಪಿ.ಟಿ.ಸಿ.ಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು. ಕೋರ್ಟ್‌ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದ.ಸಂ.ಸ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ‘ಹೆಂಡ ಬೇಡ ಭೂಮಿ ಬೇಕು’ ಎನ್ನುವ ಘೋಷಣೆಯನ್ನು 80 ರ ದಶಕದಲ್ಲಿ ಮೊಳಗಿಸಿತು. ಆದೇ ರೀತಿ, ಬಗ‌ರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ/ಸಾಮಾಜಿಕ ಆರಣ್ಯಕರಣ/ ಗೋವುಗಳ ಗೋಮಾಳಗಳಿಗೆ ಕಾಯ್ದಿಸಿರುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತೇವೆ. ಹಾಗೂ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಗಾಗಿ ವಿದೇಶಿ ಬಂಡವಾಳಗಾರರಿಗೆ ಈ ಭೂಮಿಯನ್ನು ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದು ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರ ದಬ್ಬುವ ಕುತಂತ್ರವಾಗಿದೆ.

ದರಕಾಸ್ತು ಭೂಮಿ ಸಕ್ರಮೀಕರಣ ಶಾಸಕರುಗಳ ಅಧ್ಯಕ್ಷತೆ ಯಲ್ಲಿರುವ ಸಮಿತಿಗಳು ನಿರ್ಲಕ್ಷ್ಯದಿಂದ ಸಭೆಗಳು ನಡೆಯದೇ ಫಾರಂ 50, 53, 57 ಸಲ್ಲಿಸಿರುವ ದಲಿತ/ತಳ ಸಮುದಾಯಗಳ ಅರ್ಜಿಗಳು ರಾಶಿ ಗಟ್ಟಲೆ ಕೊಳೆಯುತ್ತ ಬಿದ್ದಿವೆ. ಅವುಗಳಲ್ಲಿ ಜಿ.ಪಿ.ಎಸ್ ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾ ಗೊಳಿಸಲಾಗಿದೆ.

ಸರ್ಕಾರದ ಈ ಧೋರಣೆಯ ದಲಿತರ ಭೂಮಿಯ ಹಕ್ಕಿಗಾಗಿ ದಿನಾಂಕ 18 ಜುಲೈ 2025 ರಂದು ಪ್ರಥಮ ಹಂತವಾಗಿ ತಾಲ್ಲೂಕು ಕಚೇರಿಗಳ ಮುಂದೆ ಭೂಮಿ ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಹಮ್ಮಿ ಕೊಳ್ಳಲಾಗಿದೆ. ಸರ್ಕಾರದ ಮುಂದಿನ ನಡೆಯನ್ನು ಗಮನಿಸಿ ಮುಂದಿನ ಹೋರಾಟವನ್ನು ರಾಜ್ಯ ಮಟ್ಟದಲ್ಲಿ ಹಮ್ಮಿ ಕೊಳ್ಳಲಾಗುವುದು.

-:ಬೇಡಿಕೆಗಳು:-

* ಪರಿಶಿಷ್ಟ ಜಾತಿ/ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗ‌ರ್ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿ ಯೊಳಗಾಗಿ ಇತ್ಯರ್ಥ ಗೊಳಿಸ ಬೇಕು. ವಿನಾಕಾರಣ ವಜಾ ಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರು ಪರಿಶೀಲಿಸ ಬೇಕು.

* ಪರಿಶಿಷ್ಟರ ಪಿ.ಟಿ.ಸಿ.ಎಲ್ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.

* ಹೈಕೋರ್ಟ್‌ಗಳಲ್ಲಿ ಪಿ.ಟಿ.ಸಿ.ಎಲ್ ಪ್ರಕರಣಗಳು ವಜಾ ಗೊಳ್ಳುತ್ತಿದ್ದು. ನುರಿತ ಹಿರಿಯ ವಕೀಲರನ್ನು ನೇಮಿಸಿ ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು.

* ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್ ನಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಜೂರಾಗಿರುವ ಭೂಮಿಯಲ್ಲಿ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವುದನ್ನು ಕೂಡಲೇ ತಡೆಗಟ್ಟ ಬೇಕು. ಅಧಿಕಾರಿಗಳ ವಿರುದ್ಧ ಎಸ್.ಸಿ/ಎಸ್.ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸ ಬೇಕು.

* ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಕೆಐಎಡಿಬಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಗುರುತಿಸಿರುವ 1777 ಎಕರೆ. ಫಲವತ್ತಾದ ಕೃಷಿ ಭೂಮಿಯ ಭೂಸ್ವಾದೀನ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯ ಬೇಕು.ಅರಣ್ಯ ಭೂಮಿಯಲ್ಲಿ 1978 ಕ್ಕಿಂತ ಹಿಂದಿನಿಂದ ಸಾಗುವಳಿ ಮಾಡುತ್ತಿರುವ ಭೂ ಹೀನ ದಲಿತರ ಜಂಟಿ ಸರ್ವೇ ಮಾಡಿಸಿ ಭೂ ಹೀನ ದಕಲಿತರ ಜಂಟಿ ಸರ್ವೇ ಮಾಡಿಸಿ ಸಾಗುವಳಿ ಕೊಡಿಸಿ ಕೊಡಬೇಕು.

* ರಾಜ್ಯದ್ಯಂತ 30,40 ವರ್ಷಗಳ ಹಿಂದೆ ಮಂಜೂರು ಮಾಡಿ ಸಾಗುವಳಿ ನೀಡಿರುವ ಭೂಮಿಗೆ ಈಗ ಅರಣ್ಯ ಭೂಮಿಯೆಂದು ನೋಟೀಸ್ ನೀಡಿ ಖಾತೆ ವಜಾ ಮಾಡಲು ನೀಡಿರುವುದನ್ನು ಸರ್ಕಾರ ಯವುದೇ ಕಾರಣಕ್ಕೂ ಖಾತೆ ವಜಾ ಮಾಡ ಬಾರದು. ಸಾಗುವಳಿದಾರರಿಗೆ ತೊಂದರೆ ಯಾಗದಂತೆ ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು.

* ಭೂ ಹೀನ ದಲಿತರಿಗೆ ಮಂಜೂರಾದ ಭೂಮಿಯನ್ನು ಎಂ.ಪಿ.ಎಂ ನವರು ಅತಿಕ್ರಮಿಸಿ ದಲಿತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿರುವುದನ್ನು ಸರ್ಕಾರ ಹಿಂಪಡೆದು, ಭೂಮಿಯನ್ನು ಮಂಜೂರುದಾರರಿಗೆ ಬಿಡಿಸಿ ಕೊಡಬೇಕೆಂದು ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕರು ಮಾವಳ್ಳಿ ಶಂಕರ್, ಟಿ.ಎಚ್ ಹಾಲೇಶಪ್ಪ ವಿಭಾಗೀಯ ಸಂಚಾಲಕರು ಮೈಸೂರು, ಶೇಷಪ್ಪ.ಹುಣಸೋಡು ಜಿಲ್ಲಾ ಸಂಚಾಲಕರು ಶಿವಮೊಗ್ಗ, ಪರಮೇಶ್.ಸೂಗೂರು ತಾಲೂಕ ಸಂಚಾಲಕರು ಶಿವಮೊಗ್ಗ. ಹಾಗೂ ಟಿ.ಹನುಮಂತಪ್ಪ ಕಲ್ಲಿಹಾಳ್ ಶಿವಮೊಗ್ಗ ಗ್ರಾಮಾಂತರ ಪ್ರಧಾನ ಸಂಚಾಲಕರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button