“ಶಿಲ್ಪಾ ಶ್ರೀನಿವಾಸ್” – ಚಿತ್ರೀಕರಣ ಆರಂಭ.
ಬೆಂಗಳೂರು ಜು.24

ಸ್ನೇಹಾಲಯಂ ಕ್ರಿಯೇಶನ್ಸ್ ಅರ್ಪಿಸುವ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ “ಶಿಲ್ಪಾ ಶ್ರೀನಿವಾಸ್” ಎಂಬ ಕನ್ನಡ ಚಲನ ಚಿತ್ರದ ಚಿತ್ರೀಕರಣ ಹೊಸಕೋಟೆಯ ಗಟ್ಟಿಗನಬ್ಬೆ ಸುತ್ತಮುತ್ತ ಭರದಿಂದ ಸಾಗಿದೆ.ಖ್ಯಾತ ನಿರ್ಮಾಪಕರೂ, 800 ಕ್ಕೂ ಮಿಕ್ಕಿ ಚಲನ ಚಿತ್ರಗಳ ವಿತರಕರೂ, ಪ್ರಸ್ತುತ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆದ ಶಿಲ್ಪಾ ಶ್ರೀನಿವಾಸ್ ಅವರದೇ ಹೆಸರಿನ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಅವರು ಕ್ಯಾಮರಾ ಗುಂಡಿ ಒತ್ತಿದರೆ, ನಟ ಹಾಗೂ ಸಂಕಲನಕಾರ ನಾಗೇಂದ್ರ ಅರಸ್ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಿಷ್ಟು ಜನ ಸಿನಿಮಾ ರಂಗವನ್ನು ತನ್ನ ತಾಯಿ ಎಂದು ಭಾವಿಸುತ್ತಾರೆ. ಕಲಾ ಮಾತೆ ಎಂದು ಆರಾಧಿಸುತ್ತಾರೆ. ಇನ್ನು ಕೆಲವರು ಶೋಕಿಗಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ತನ್ನ ತಾತ ಮುತ್ತಾತ, ಅಪ್ಪ ಅಮ್ಮ ಸಂಪಾದನೆ ಮಾಡಿಕೊಟ್ಟ ಹಣವನ್ನು ನೀರುಪಾಲು ಮಾಡುತ್ತಾರೆ. ಕಲಾ ಮಾತೆಯನ್ನು ಕೀಳಾಗಿ ನೋಡುತ್ತಾರೆ. ಇಂಥವರಿಂದ ಸಿನಿಮಾ ರಂಗ ಅಧೋಗತಿಗೆ ಇಳಿಯುತ್ತಿದೆ. ಇದನ್ನು ಮಟ್ಟ ಹಾಕಲು ಕಲಾ ಮಾತೆಯ ನಿಜವಾದ ಆರಾಧಕ ಏನೆಲ್ಲಾ ಮಾಡುತ್ತಾನೆ ಎಂಬ ಕಥಾ ಹಂದರವಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಗಾಂಧಿ ನಗರದಲ್ಲಿ ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಆರ್.ಕೆ ಗಾಂಧಿ ಹೇಳಿದರು.

ತಾರಾಗಣದಲ್ಲಿ ಕಿಶೋರ್ ಕಾಸರಗೋಡು, ಮಿಸ್ಸೆಸ್ ಇಂಡಿಯಾ ಮತ್ತು ಇಂಟರ್ ನ್ಯಾಷನಲ್ ಕ್ವೀನ್ ಟೈಟಲ್ ಗಳನ್ನು ಗೆದ್ದು ಈಗಾಗಲೇ ಒಂದಿಷ್ಟು ಕನ್ನಡ, ತೆಲಗು ಚಿತ್ರಗಳಲ್ಲಿ ನಾಯಕಿಯಾಗಿರುವ ಸ್ವಾತಿ ಲಿಂಗರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಿಯಾಂಕ, ಶೋಭರಾಜ್, ನಾಗೇಂದ್ರ ಅರಸ್, ಕಿರಣಕುಮಾರ್ ಗಟ್ಟಿಗನಬ್ಬೆ, ಸಿ.ಟಿ ಜಯರಾಮ್, ಹೊಸಕೋಟೆ ಶಿವಕುಮಾರ್, ಲೋಕೇಶ್, ಬೆಂಗಳೂರು ಮನು, ಮಾಸ್ಟರ್ ಮನ್ವಿತ್, ಮಾಸ್ಟರ್ ಅಭ್ಯಂತ್, ಭಕ್ತರಹಳ್ಳಿ ರವಿ, ಮೊದಲಾದವರಿದ್ದು ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಮುಗಿಲ ಮಲ್ಲಿಗೆ’ ‘ಲಿಲ್ಲಿ’ ಸಿನಿಮಾದ ಯುವ ನಿರ್ದೇಶಕ, ಹೊಸ ಪ್ರಯೋಗಗಳಿಗೆ ಹೆಸರಾದ ಆರ್.ಕೆ ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಮೋದ್ ಭಾರತೀಯ ಛಾಯಾ ಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ವಿನಯ್.ಜಿ ಆಲೂರ ಸಂಕಲನ, ಮೋಹನ್ ಕುಮಾರ್ ಪ್ರಸಾಧನ, ಇಂದ್ರಕುಮಾರ್ ಸ್ಥಿರ ಚಿತ್ರ, ಮಲ್ಲಿಕಾರ್ಜನ್ ಕಲಾ ನಿರ್ದೇಶನ, ಎಂ.ಜಿ ಕಲ್ಲೇಶ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಪಿ.ಆರ್.ಓ ಆಗಿದ್ದಾರೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ದೇಶಕರು, ಚಿತ್ರ ತಂಡದ್ದಾಗಿದೆ.
*****
– ಡಾ.ಪ್ರಭು ಗಂಜಿಹಾಳ
– ಮೊ.೯೪೪೮೭೭೫೩೪೬