ಮಾನವ ಕಳ್ಳ ಸಾಗಾಣಿಕೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ – ಹಿರಿಯ ಸೆಷನ್ಸ್ ನ್ಯಾಯಾಧೀಶ ಮಹದೇವಪ್ಪ.ಎಚ್.
ರೋಣ ಆ.01

ಮಾನವ ಕಳ್ಳ ಸಾಗಾಣಿಕೆ ಅಮಾನವೀಯ ಕೃತ್ಯ. ಮಾನವ ಕಳ್ಳ ಸಾಗಾಣಿಕೆ ತಡೆಯುವ ಅಗತ್ಯವಿದೆ. ಹಲವು ವರ್ಷಗಳ ಹಿಂದೆ ಅಡಿಕೆ ಕಳ್ಳರ ಬಂಧನ ಸುದ್ದಿ ಬರುತಿತ್ತು. ನಂತರ ಬೈಕ್ ಕಳ್ಳರ ಸುದ್ದಿ ಓದುತ್ತಿದ್ದೆವು. ನಂತರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಳ್ಳರ ಬಂಧನದ ಸುದ್ದಿ ನೋಡಿದೆವು. ಇದೀಗ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ನಡೆಯುತ್ತಿದೆ ಎಂದು ಎಂದು ಹಿರಿಯ ಸೆಷನ್ಸ್ ನ್ಯಾಯಾಧೀಶ ಮಹದೇವಪ್ಪ.ಎಚ್ ಹೇಳಿದರು.ರೋಣ ಪಟ್ಟಣದ ಶರಣ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಪೊಲೀಸ್ ಇಲಾಖೆ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಡೆದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು ಆಧುನಿಕ ಗುಲಾಮಗಿರಿಯ ಸಂಕೇತವೇ ಮಾನವ ಕಳ್ಳ ಸಾಗಾಣಿಕೆಗೆ. ಮಾನವ ಕಳ್ಳ ಸಾಗಾಣಿಕೆಗೆ ವಿದ್ಯೆಯ ಕೊರತೆಯೂ ಸಹ ಒಂದು ಕಾರಣವಾಗಿದೆ. ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗೂ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ಥರಿಗೆ ಕಾನೂನು ನೆರವು ನೀಡಲಿದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ಪತ್ತೆಯಾದವರನ್ನು ರಕ್ಷಣೆ ಮತ್ತು ಪುನರ್ವಸತಿ ಮಾಡುವುದು ಮುಖ್ಯವಾಗಿದೆ. ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಒಬ್ಬರಿಂದ ಮಾತ್ರ ಆಗುವ ಕಾರ್ಯವಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನದ ಅವಶ್ಯಕತೆ ಇದೆ. ಎಲ್ಲ ಇಲಾಖೆಗಳು ತಮ್ಮ ಹಂತದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಕೆಲಸ ಮಾಡಬೇಕು ಎಂದರು.ಪಿಎಸ್ಐ ಪ್ರಕಾಶ ಬಣಕಾರ ಮಾತನಾಡಿ ಯಾವುದೇ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಸಾಗಾಣಿಕೆ ಮಾಡಿದರೆ ಅದನ್ನು ಮಾನವ ಕಳ್ಳ ಸಾಗಾಣಿಕೆ ಎಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಮದುವೆಯ ನೆಪದಲ್ಲಿ ಕರೆದೊಯ್ದು ಮಾರಾಟ ಮಾಡುವ ದಂಧೆ ಸಹ ನಡೆಯುತ್ತದೆ. ಅಕ್ರಮ ಜಾಲದಲ್ಲಿ ಸಿಲುಕಿ ಹೊರ ಬಂದ ಮೇಲೆ ಅವರಿಗೆ ಪುನರ್ವಸತಿ ಕಲ್ಪಿಸಿದರೂ ಮಾನಸಿಕ ಹಿಂಸೆ ತಡೆಯಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಹಾಗೂ ಮನೆಗಳ ಪ್ರತಿಯೊಂದು ವಿಚಾರಗಳನ್ನು ಅರಿತಿರುತ್ತಾರೆ. ಕಾಣೆ ಯಾದವರ ಮಾಹಿತಿ ದೊರೆತರೆ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಕೆಲವೊಮ್ಮೆ ಹಳ್ಳಿಗಳಲ್ಲಿ ಕಾಣೆಯಾದವರ ಬಗ್ಗೆ ದೂರು ನೀಡದೆ ಸುಮ್ಮನಾಗುತ್ತಾರೆ. ಎರಡು, ಮೂರು ವರ್ಷ ಕಳೆದ ನಂತರ ದೂರು ನೀಡುತ್ತಾರೆ. ಕಾಣೆಯಾದ ಮರು ದಿನವೇ ದೂರು ಕೊಟ್ಟರೆ ಪತ್ತೆ ಮಾಡಬಹುದು ಎಂದು ಹೇಳಿದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಾಗೂ ವಿಜಯಕುಮಾರ.ಎನ್ ವಕೀಲರಾದ ಎ.ಎಸ್ ಅರಹುಣಸಿ, ಮತ್ತಿಕಟ್ಟಿಜಿ.ಎಚ್ ಹನುಮನಾಳ, ಎಫ್.ಎಂ ಬಾಸಲಾಪುರ, ಕನಕದಾಸ ಶಿಕ್ಷಣ ಸಮಿತಿ ಸ್ಥಾನಿಕ ಮುಖ್ಯಸ್ಥ ಐ.ಬಿ ದಂಡಿನ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಚಂದ್ರಶೇಖರ ಕಂದಕೂರ, ಪ್ರಾಚಾರ್ಯ ಎ.ಎಚ್ ನಾಯ್ಕರ್ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ.ಗದಗ