ಅಡಿಕೆ ಕಳವು ಪ್ರಕರಣ, ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ- ಪೋಷಕರಿಗೆ ಶಾಕ್..!
ಕಾರ್ಕಳ ಸ.11





ಇತ್ತೀಚೆಗೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದಲ್ಲಿ ನಡೆದ 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ಒಂದು ದಿಗ್ಭ್ರಮೆ ಗೊಳಿಸುವ ಸಂಗತಿ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಭಾಗಿ ಯಾಗಿದ್ದವರು ವೃತ್ತಿಪರ ಕಳ್ಳರಲ್ಲ, ಬದಲಾಗಿ 12 ಮಂದಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಎಂಬುದು ಪೊಲೀಸರ ವಿಚಾರಣೆಯಲ್ಲಿ ದೃಢಪಟ್ಟಿದೆ.
ಘಟನೆ ಹಿನ್ನೆಲೆ
ಮುಂಡ್ಕೂರು ಗ್ರಾಮದ ನಿವಾಸಿ ರವೀಂದ್ರ ಎಂಬವರಿಗೆ ಸೇರಿದ ಅಡಿಕೆ ತೋಟದ ಶೆಡ್ನಿಂದ ಸುಮಾರು 5 ಲಕ್ಷ ರೂ. ಮೌಲ್ಯದ 34 ಅಡಿಕೆ ಗೋಣಿ ಚೀಲಗಳು ಕಳವಾಗಿದ್ದವು. ದೂರು ದಾಖಲಾದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಕಳ್ಳರು ಅಡಿಕೆಯ ಜೊತೆಗೆ ಸುಮಾರು 6,000 ರೂ. ಮೌಲ್ಯದ ಸಿ.ಸಿ ಕ್ಯಾಮೆರಾವನ್ನು ಸಹ ಕಳವು ಮಾಡಿ ಕೊಂಡು ಹೋಗಿರುವುದು ಕಂಡು ಬಂದಿತ್ತು.
ಆರೋಪಿಗಳ ಬಂಧನ ಮತ್ತು ವಿಚಾರಣೆ
ಪ್ರಕರಣದ ಗಂಭೀರತೆ ಅರಿತು ತನಿಖೆ ಚುರುಕು ಗೊಳಿಸಿದ ಪೊಲೀಸರು, ತಾಂತ್ರಿಕ ಹಾಗೂ ಸ್ಥಳೀಯ ಮಾಹಿತಿ ಆಧಾರದ ಮೇಲೆ ಶಂಕಿತರನ್ನು ಪತ್ತೆ ಹಚ್ಚಿದರು. ನಂತರ ಬಂಧಿತರಾದ 12 ಮಂದಿ ಅಪ್ರಾಪ್ತ ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಸಂಪೂರ್ಣ ವಿವರ ಬಯಲಾಗಿದೆ. ಅಪ್ರಾಪ್ತರು ಕದ್ದ ಅಡಿಕೆಯನ್ನು ಬೇರೆಡೆಗೆ ಮಾರಾಟ ಮಾಡಿರುವುದು ಕೂಡ ತಿಳಿದು ಬಂದಿದೆ.
ಕಾನೂನಾತ್ಮಕ ಕ್ರಮಗಳು ಕಾನೂನಿನ ಪ್ರಕಾರ, ಅಪ್ರಾಪ್ತರು ಎಸಗುವ ಅಪರಾಧಗಳನ್ನು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಈ ಕಾಯಿದೆ ಅನ್ವಯ, ಅಪ್ರಾಪ್ತರನ್ನು ಜೈಲಿಗೆ ಕಳುಹಿಸುವ ಬದಲು ಸುಧಾರಣಾ ಗೃಹಕ್ಕೆ (Juvenile Home) ಕಳುಹಿಸಲಾಗುತ್ತದೆ. ಪೊಲೀಸರು ಬಂಧಿಸಿರುವ ಈ ಅಪ್ರಾಪ್ತ ವಿದ್ಯಾರ್ಥಿಗಳನ್ನು ಸಹ ಕಾನೂನು ಪ್ರಕ್ರಿಯೆಗಳ ನಂತರ ಬಾಲ ನ್ಯಾಯ ಮಂಡಳಿ (Juvenile Justice Board) ಮುಂದೆ ಹಾಜರು ಪಡಿಸಲಾಗುತ್ತದೆ. ಮಂಡಳಿಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರವೃತ್ತಿಯ ಬಗ್ಗೆ ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆ ಬಾರಿಸಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಕಳುವಾದ ಅಡಿಕೆ ಮತ್ತು ಸಿ.ಸಿ ಕ್ಯಾಮೆರಾವನ್ನು ವಶಪಡಿಸಿ ಕೊಳ್ಳುವ ಕಾರ್ಯ ನಡೆಯುತ್ತಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ