ಖಾಸಗಿ ಬಸ್‌ನಲ್ಲಿ ಮಹಿಳಾ ಪತ್ರಕರ್ತೆ ಮೇಲೆ ದುರ್ನಡತೆ, ಕಂಡಕ್ಟರ್‌ನಿಂದ ಅನುಚಿತ ಸ್ಪರ್ಶದ ಆರೋಪ – ಭಾರತಿ ಮೋಟರ್ಸ್ ಸಂಸ್ಥೆ ವಿರುದ್ಧ ಆಕ್ರೋಶ.

ಉಡುಪಿ ಅ.07

ದೇಶಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ದೌರ್ಜನ್ಯದ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಕರಾವಳಿ ಭಾಗದಲ್ಲಿ ಸಂಚರಿಸುವ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದರ ಬಸ್‌ನಲ್ಲಿ ಮಹಿಳಾ ಮಾಧ್ಯಮ ಪ್ರತಿನಿ ಧಿಯೊಬ್ಬರ ಮೇಲೆ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಭಾರತಿ ಮೋಟರ್ಸ್ ಸಂಸ್ಥೆಯ ಬಸ್‌ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ಉದ್ಧಟತನವನ್ನು ಪ್ರಶ್ನಿಸಿದ್ದು, ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ವಿವರಣೆ (KA-20 AC 4287 ಬಸ್‌ನಲ್ಲಿ):-

ಘಟನೆಯು ಉಡುಪಿ-ಕುಂದಾಪುರ-ಭಟ್ಕಳ ಮಾರ್ಗದಲ್ಲಿ ಸಂಚರಿಸುತ್ತಿದ್ದ KA-20 AC 4287 ಸಂಖ್ಯೆಯ ಭಾರತಿ ಬಸ್‌ನಲ್ಲಿ ನಡೆದಿದೆ. ಬೆಳಿಗ್ಗೆ ಸುಮಾರು 10:30ಕ್ಕೆ ಉಡುಪಿ ಕಡೆಗೆ ಚಲಿಸುತ್ತಿದ್ದ ಬಸ್ಸಿನಲ್ಲಿ, ಕಂಡಕ್ಟರ್ ಮಹಿಳಾ ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಟಿಕೆಟ್ ನೀಡುವ ನೆಪದಲ್ಲಿ ಮೈ ಮುಟ್ಟಿ ಕರೆದಿದ್ದಾರೆ ಎನ್ನಲಾಗಿದೆ.

ಪತ್ರಕರ್ತೆಯ ಪ್ರತಿಭಟನೆ:-

ಕಂಡಕ್ಟರ್‌ನ ಈ ನಡವಳಿಕೆಯನ್ನು ಮಾಧ್ಯಮ ಪ್ರತಿನಿಧಿ ತೀವ್ರವಾಗಿ ವಿರೋಧಿಸಿದ್ದಾರೆ. “ನಿಮಗೆ ಬಾಯಿದೆ, ಮೂಗನಲ್ಲ. ಮೈ ಮುಟ್ಟಿ ಕರೆಯುವುದು ಸರಿಯಾದ ಕ್ರಮವಲ್ಲ” ಎಂದು ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಯ ಉದ್ಧಟತನ:-

ಪ್ರತಿಕ್ರಿಯೆಯಾಗಿ, ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಅತ್ಯಂತ ಉದ್ಧಟತನದ ಮಾತುಗಳನ್ನು ಆಡಿದ್ದಾರೆ. “ಕರೆದರೆ ಏನಾಗುತ್ತದೆ? ನಾವು ಹಾಗೆಯೇ ಮಾಡುವುದು. ನಿನ್ನ ಬಳಿ ಏನು ಮಾಡಲು ಆಗುತ್ತದೆ, ನಾವು ಮಾಡುವುದೇ ಹಾಗೆ,” ಎಂದು ಅವಮಾನಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮ ಪ್ರತಿನಿಧಿಯು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರೂ, ಸಿಬ್ಬಂದಿಯು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಅಹಂಕಾರ ಪ್ರದರ್ಶಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ ಮತ್ತು ಮಾಧ್ಯಮದ ಆಗ್ರಹ:-

ಇಷ್ಟು ದೊಡ್ಡ ಪ್ರಮಾಣದಲ್ಲಿ (ಉಡುಪಿ, ಮಂಗಳೂರು, ಭಟ್ಕಳದಿಂದ ಬೆಂಗಳೂರಿಗೂ) ಬಸ್ ಸೇವೆ ಒದಗಿಸುವ ಭಾರತಿ ಮೋಟರ್ಸ್‌ನಂತಹ ಸಂಸ್ಥೆ ತನ್ನ ಚಾಲಕರು ಮತ್ತು ನಿರ್ವಾಹಕರಿಗೆ ಶಿಸ್ತು ಮತ್ತು ಕ್ರಮಬದ್ಧತೆಯನ್ನು ಕಲಿಸದೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯೇ ಎಂದು ಮಾಧ್ಯಮ ಪ್ರತಿನಿಧಿಗಳು ಈ ಮೂಲಕ ಪ್ರಶ್ನಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಈ ಕುರಿತು ತೀವ್ರ ಚರ್ಚೆ ಉಂಟಾಗಿದ್ದು, ಹಲವಾರು ಪ್ರಶ್ನೆಗಳು ಎದುರಾಗಿವೆ:

ಸುರಕ್ಷತೆ ಬಗ್ಗೆ ಕಳವಳ:

“ಒಬ್ಬ ಮಾಧ್ಯಮ ಪ್ರತಿನಿಧಿಯೊಂದಿಗೇ ಈ ರೀತಿಯ ದುರ್ನಡತೆ ತೋರಿದರೆ, ಸಾಮಾನ್ಯ ಮಹಿಳಾ ಪ್ರಯಾಣಿಕರ ಪರಿಸ್ಥಿತಿ ಏನಾಗಬಹುದು?” ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಬೇಜವಾಬ್ದಾರಿ:-

“ಈ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತಿರುವುದು ಸರಿಯೇ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಟ:-

ಈಗಾಗಲೇ ಸೌಜನ್ಯಾಳಂತಹ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ನ್ಯಾಯ ಸಿಗದೇ ಇರುವ ಪರಿಸ್ಥಿತಿ ಇರುವಾಗ, ಇಂತಹ ಸಂಸ್ಥೆಗಳಲ್ಲಿ ಇಂಥವರನ್ನು ನೇಮಕ ಮಾಡಿ ತೊಂದರೆ ಮಾಡುತ್ತಿರುವುದು ಬೇಸರ ತಂದಿದೆ. ತಮ್ಮ ಮಾನ ಮರ್ಯಾದೆಗೆ ಅಂಜಿ ಹಲವು ಹೆಣ್ಣು ಮಕ್ಕಳು ಇಂತಹ ಕೃತ್ಯಗಳನ್ನು ಪ್ರತಿಭಟಿಸದೆ ಸುಮ್ಮನೆ ಹೋಗುತ್ತಿರಬಹುದು ಎಂದು ಸಹ ಅಭಿಪ್ರಾಯ ವ್ಯಕ್ತವಾಗಿದೆ.

ಕಾನೂನು ಕ್ರಮಕ್ಕೆ ಆಗ್ರಹ:-

ಈ ಹಿನ್ನೆಲೆಯಲ್ಲಿ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಕೂಡಲೇ ಈ ಬಸ್‌ನ ಮಾಲೀಕರು, ಚಾಲಕರು ಮತ್ತು ನಿರ್ವಾಹಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿ, “ಇಂತಹವರಿಗೆ ಕಡಿವಾಣ ಹಾಕುವುದಾದರೂ ಹೇಗೆ, ಯಾರು?” ಎಂದು ಪ್ರಶ್ನಿಸಿದ್ದು, ಕೂಡಲೇ ಎಚ್ಚೆತ್ತುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳಿಂದಾಗಿ, ಭಾರತಿ ಮೋಟರ್ಸ್‌ನಂತಹ ಸಂಸ್ಥೆಯ ಬಸ್ಸುಗಳನ್ನು ಹತ್ತುವ ಮೊದಲು ಎರಡು ಬಾರಿ ಯೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button