ಇಲಕಲ್ ಹುಡುಗನ “ನಮ್ಮ ನಾಯಕ”- ಚಲನ ಚಿತ್ರಕ್ಕೆ ಮುಹೂರ್ತ.
ಬೆಂಗಳೂರು ಜ.07

ಮಲೈ ಮಹದೇಶ್ವರ ಎಂಟರ್ಪ್ರೈಸಸ್ ಅವರ ಎ.ಎಂ ಬಾಬು ನಿರ್ಮಾಣದ “ನಮ್ಮ ನಾಯಕ” ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಜರುಗಿತು.
ಬೆಂಗಳೂರಿನ ಬಸವೇಶ್ವರ ನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆದ ಸರಳ ಸಮಾರಂಭದಲ್ಲಿ ನಿರ್ಮಾಪಕರಾದ ಎ.ಎಂ ಬಾಬು ಕ್ಯಾಮರಾ ಗುಂಡಿ ಒತ್ತಿದರೆ, ಕನ್ನಡ ಚಲನ ಚಿತ್ರ ನಟರಾದ ನವೀನ್ ಶಂಕರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು, ಕಲಾವಿದರು, ತಾಂತ್ರಿಕ ವರ್ಗದವರು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು. ಯುವ ನಿರ್ದೇಶಕ ಆರ್.ಜೆ ಮಂಜುನಾಥ್ ಮೂಲತಃ ಬಾಗಲಕೋಟ ಜಿಲ್ಲೆಯ ಇಲಕಲ್ ನವರಾಗಿದ್ದು ಚಿತ್ರಕ್ಕೆ ಕಥೆ-ಸಂಭಾಷಣೆ-ಚಿತ್ರಕಥೆ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ.
ಅಸ್ಪೃಶ್ಯತೆಯ ವಿರುದ್ಧ ಹೋರಾಟದ ಬದುಕು ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕಥೆಯ ಎಳೆಯನ್ನು ಹೊಂದಿರುವ ಸಾಮಾಜಿಕ ಕಳಕಳಿಯ ಚಲನ ಚಿತ್ರವಾಗಿದೆ ಎಂದು ಮಂಜುನಾಥ ತಿಳಿಸಿದರು.
ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ-ಕಿರಿಯ ಕಲಾವಿದರ ಜೊತೆಗೆ ಡ್ರಾಮಾ ಜ್ಯೂನಿಯರ್ಸ ಖ್ಯಾತಿಯ ಬಾಲ ಕಲಾವಿದರಾದ ಮಾಸ್ಟರ್ ಸ್ವದೇಶ್, ಲಿಖಿತ್, ಮೋಹಿತ್ ರಾಜ್ ಅಭಿನಯಿಸುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಹೊಸ ನಿರೀಕ್ಷೆಗಳೊಂದಿಗೆ ಆರಂಭ ಗೊಂಡ ಈ ಚಿತ್ರವು ಹೊಸ ಕಥಾ ಹಂದರದೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಂದೇಶ ನೀಡಲಿದೆ. ಎಂದು ನಿರ್ಮಾಪಕ ಬಾಬು ತಿಳಿಸಿದರು.
ಛಾಯಾಗ್ರಹಣ ಪವನ್ ಪಡಿಯಾರ್, ಸಾಹಿತ್ಯ ಆಕಾಶ ಎ.ಕೆ.೪೭, ಸಂಗೀತ ವಿಜಯ್ ಹರಿತ್ಸಾ, ಅಪ್ಪು ವೆಂಕಟೇಶ ಸಾಹಸ, ಪ್ರಸಾಧನ ಶಿವು, ಕಲೆ ಗಣೇಶ ದಾವಣಗೆರೆ, ವಸ್ತ್ರ ವಿನ್ಯಾಸ ಚಿಕ್ಕೆಗೌಡ್ರು, ಆರ್.ಅನಿಲ್ ಕುಮಾರ ಸಂಕಲನ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ಸಹ ನಿರ್ದೇಶನ ನವೀನ್ ಕುಮಾರ ಅವರದಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಡಾ, ಪ್ರಭು ಗಂಜಿಹಾಳ ಗದಗ

