ಜೀವ ಶಿವ ಸೇವೆಯೇ ನಿಜವಾದ ಶಿವನ ಪೂಜೆ – ಮಾತಾಜೀ ತ್ಯಾಗಮಯೀ ಅಭಿಮತ.

ಚಳ್ಳಕೆರೆ ಜ.17

ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಜೀವ ಶಿವ ಸೇವೆಯೇ ನಿಜವಾದ ಶಿವನ ಪೂಜೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ಹೊರವಲಯದ ಬನಶ್ರೀ ವೃದ್ಧಾಶ್ರಮದಲ್ಲಿ “ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನ ಹಣ ದಾನ ಮಾಡುವುದರಿಂದ ಪವಿತ್ರವಾಗುತ್ತದೆ. ವ್ಯಾಸ ಮಹರ್ಷಿಗಳು ಮತ್ತು ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಕಲಿಯುಗಕ್ಕೆ ಅತ್ಯಂತ ಶ್ರೇಷ್ಠವಾದ ಮಾರ್ಗವೆಂದರೆ ದಾನ ಮಾಡುವುದು, ಇದರ ನಾಲ್ಕು ಪ್ರಕಾರಗಳಾದ ಅನ್ನದಾನ, ಪ್ರಾಣ ದಾನ, ವಿದ್ಯಾದಾನ, ಆಧ್ಯಾತ್ಮ ವಿದ್ಯಾದಾನಗಳ ಬಗ್ಗೆ ತಿಳಿಸುತ್ತಾ ಸ್ವಾಮಿ ವಿವೇಕಾನಂದರ ದಾನ ಗುಣಕ್ಕೆ ಸಂಬಂಧಿಸಿದ ಘಟನೆಗಳನ್ನು ಹಂಚಿಕೊಂಡು ಮಂಜುಳಮ್ಮನವರ ಸೇವಾ ಕಾರ್ಯವನ್ನು ಪ್ರಶಂಸಿ ಎಲ್ಲಾ ಸದ್ಭಕ್ತರೂ ಅವರಿಗೆ ಅಗತ್ಯ ನೆರವು ನೀಡುವಂತೆ ವಿನಂತಿಸಿದರು.

ಬನಶ್ರೀ ವೃದ್ಧಾಶ್ರಮದ ಮುಖ್ಯಸ್ಥರಾದ ಶ್ರೀಮತಿ ಮಂಜುಳಮ್ಮ ಮಾತನಾಡಿ ಸ್ವಾಮಿ ವಿವೇಕಾನಂದರಂತಹ ವೀರ ಸಂನ್ಯಾಸಿಯನ್ನು ಪಡೆದ ಭಾರತ ಭೂಮಿ ಅತ್ಯಂತ ಪವಿತ್ರವಾದದ್ದು ಇಂತಹ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಮ್ಮ ವೃದ್ಧಾಶ್ರಮದಲ್ಲಿ ಆಯೋಜಿಸಿ ವೃದ್ಧರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಅನ್ನ ಪ್ರಸಾದವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಸೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಸ್ವಾಮಿ ವಿವೇಕಾನಂದರ ಭಜನಾ ಕಾರ್ಯಕ್ರಮ ನಡೆದರೆ ಭಜನೆಗೆ ಗೋವಿಂದರಾಜು ತಬಲಾ ಸಾಥ್ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತಾಜೀ ತ್ಯಾಗಮಯೀ ಅವರು ವೃದ್ಧಾಶ್ರಮದ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರೆ ಎಲ್ಲರಿಗೂ ವಿಶೇಷ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಎಚ್ ಲಕ್ಷ್ಮೀದೇವಮ್, ಶಾಂತಮ್ಮ, ಜಿ.ವಿ.ಎಸ್. ಪ್ರಕಾಶ್,ಎಂ ಗೀತಾ ನಾಗರಾಜ್, ವಿಜಯಲಕ್ಷ್ಮೀ, ನಾಗರತ್ನಮ್ಮ, ಶಾರದಾಮ್ಮ, ವೀರಮ್ಮ, ಸರಸ್ವತಿ, ಸರ್ವಮಂಗಳಾ ಶಿವಣ್ಣ, ಸುವರ್ಣಮ್ಮ, ಪ್ರಿಯಾಂಕ, ಶಾರದಾಮ್ಮ, ಕವಿತಾ ಗುರುಮೂರ್ತಿ, ಅನಿತಾ, ಶಿಲ್ಪಾ, ಕೃಷ್ಣವೇಣಿ, ಕಮಲಮ್ಮ, ಗಂಗಮ್ಮ, ರಶ್ಮಿ ವಸಂತ, ಸರಸ್ವತಿ ರಾಜು, ಸೌಮ್ಯ, ಸುಧಾಮಣಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಸೇರಿದಂತೆ ವೃದ್ಧಾಶ್ರಮದ ನಿವಾಸಿಗಳು ಮತ್ತು ಸದ್ಭಕ್ತರು ಭಾಗವಹಿಸಿದ್ದರು. ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button