🚨 ಬ್ರೇಕಿಂಗ್ ನ್ಯೂಸ್ 🚨ಕೆರೆ ನಿರ್ಮಾಣದ ಹೆಸರಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ? ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮಣ್ಣು ಮಾಫಿಯಾ ಅಬ್ಬರ – ಅಧಿಕಾರಿಗಳಿಗೆ ದೂರು.

ಬೈಂದೂರು ಜ.19

ಕೃಷಿ ಭೂಮಿಯಲ್ಲಿ ಕೆರೆ ನಿರ್ಮಾಣ ಮಾಡುವ ನೆಪವನ್ನಿಟ್ಟುಕೊಂಡು ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವ ಗಂಭೀರ ಆರೋಪವೊಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಿಂದ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಕುಲಾಲ್ ಅವರು ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ಘಟನೆಯ ವಿವರ:-

ಬೈಂದೂರು ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಸೂರು ಗ್ರಾಮದ ಸರ್ವೆ ನಂ. 6/9 ರ 0.34 ಎಕರೆ ಜಾಗದಲ್ಲಿ ಶ್ರೀಮತಿ ಜಯಶ್ರೀ ಶೆಟ್ಟಿ ಎಂಬುವವರ ಹೆಸರಿನಲ್ಲಿ ಕೆರೆ ನಿರ್ಮಾಣ ಮಾಡಲು ಇಲಾಖೆಯಿಂದ ನಿರಪೇಕ್ಷಣಾ ಪತ್ರ (NOC) ಪಡೆಯಲಾಗಿದೆ. ಆದರೆ, ಈ ಅನುಮತಿಯನ್ನು ದುರುಪಯೋಗ ಪಡಿಸಿ ಕೊಂಡು ಮಣ್ಣು ಮಾಫಿಯಾದವರು ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು:-

ಅವಶ್ಯಕತೆ ಇಲ್ಲದ ಕೆರೆ:-

ಸದರಿ ಜಾಗವು ಹೊಳೆಯ ಹತ್ತಿರವಿದ್ದು, ನೀರಿನ ಸಮೃದ್ಧಿ ಇರುವುದರಿಂದ ಅಲ್ಲಿ ಕೆರೆಯ ಅವಶ್ಯಕತೆ ಇಲ್ಲ. ಇದು ಕೇವಲ ಮಣ್ಣು ಸಾಗಿಸಲು ಮಾಡಿಕೊಂಡಿರುವ ಸಂಚು ಎಂದು ದೂರುದಾರರು ಆರೋಪಿಸಿದ್ದಾರೆ.

ಕೃಷಿ ಭೂಮಿಗೆ ಹಾನಿ:-

ಮಣ್ಣು ತೆಗೆಯುವುದರಿಂದ ಸುತ್ತಮುತ್ತಲ ಫಲವತ್ತಾದ ಕೃಷಿ ಭೂಮಿಗೆ ಹಾನಿಯಾಗುತ್ತಿದ್ದು, ಆಳವಾದ ಗುಂಡಿಗಳಿಂದ ಸ್ಥಳೀಯ ರೈತರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಅಧಿಕಾರಿಗಳ ನಿರ್ಲಕ್ಷ್ಯ:-

ಈ ಬಗ್ಗೆ ಈಗಾಗಲೇ ಸ್ಥಳೀಯ ತಹಶೀಲ್ದಾರ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ದೂರುದಾರರ ಆಗ್ರಹ:-

ಮಣ್ಣು ಮಾಫಿಯಾದವರ ಅಕ್ರಮಕ್ಕೆ ಕಡಿವಾಣ ಹಾಕಲು ಜಯಶ್ರೀ ಶೆಟ್ಟಿ ಅವರಿಗೆ ನೀಡಿರುವ ಕಾರ್ಯಾದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರವೀಣ್ ಕುಲಾಲ್ ಅವರು ಆಗ್ರಹಿಸಿದ್ದಾರೆ. ಜನವರಿ 17, 2026 ರಂದು ಬೆಂಗಳೂರಿನ ಇಲಾಖಾ ಕಚೇರಿಯಲ್ಲಿ ಈ ದೂರನ್ನು ಸ್ವೀಕರಿಸಲಾಗಿದ್ದು, ಮುಂದಿನ ಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button