ಧಾರ್ಮಿಕ ಕಾರ್ಯಕ್ರಮಗಳು ಧರ್ಮ ಜಾಗೃತಿ ಮತ್ತು ಸಾಮರಸ್ಯದ ಬದುಕಿಗೆ ಸಹಕಾರಿ – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ಫೆ.24

ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿದ ಕ್ಷಣ
ಶ್ರೀಕ್ಷೇತ್ರ ಧರ್ಮ ಗ್ರಾಮಾಭಿವೃದ್ಧಿ ಯೋಜನೆಯ ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯದ ಬದುಕು ಮತ್ತು ಧರ್ಮ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಸಹಕಾರಿ ಯಾಗಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು.

ಚಳ್ಳಕೆರೆಯ ತಾಲೂಕಿನ ದುರ್ಗಾವರದ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವರು
ತಾಲೂಕಿನ ದುರ್ಗಾವರದ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಾಯಕನಹಟ್ಟಿ ಇದರ ಸಹಯೋಗದಲ್ಲಿ ಆಯೋಜಿಸಿದ್ದ “ಶ್ರೀಲಕ್ಷ್ಮೀ ಪೂಜೆ, ಶ್ರೀಲಕ್ಷ್ಮೀ ರಂಗನಾಥಸ್ವಾಮಿಗೆ ಎಲೆ ಪೂಜೆ ಹಾಗೂ ಧಾರ್ಮಿಕ ಸಭಾ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು. ಧಾರ್ಮಿಕ ಸಭೆಗಳು ಜನರಲ್ಲಿ ಸಂಘಟನೆ, ಶ್ರದ್ಧೆ, ದೇವರಲ್ಲಿ ಭಕ್ತಿಯನ್ನು ಬೆಳೆಸುತ್ತವೆ ಎಂದರು.

ಶ್ರೀಲಕ್ಷ್ಮೀ ಪೂಜೆ 💐
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಚಳ್ಳಕೆರೆಯ ಖ್ಯಾತ ವಕೀಲರಾದ ಕೆ.ಎಂ ನಾಗರಾಜ್ ಅವರು ಸ್ವ ಸಹಾಯ ಸಂಘಗಳು ಸದಸ್ಯರಿಗೆ ಕಡಿಮೆ ದರದಲ್ಲಿ ಸಾಲ ನೀಡುವುದರ ಜೊತೆಗೆ ಸ್ನೇಹ, ಸಾಮರಸ್ಯ, ಭ್ರಾತೃತ್ವದ ಭಾವನೆಗಳನ್ನು ಬೆಳೆಸುತ್ತವೆ. ಸಂಘದ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಕಡೆಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ಸಂಘದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಜಯಂತ್,ಗಿರಿಜಾ, ಗಿಡ್ಡ ರಂಗಪ್ಪ, ತಿಪ್ಪೇಸ್ವಾಮಿ, ಶಿವಣ್ಣ ಸೇರಿದಂತೆ ವಿವಿಧ ಗಣ್ಯರು, ಸಂಘದ ಮಹಿಳಾ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

