“ಹೆಣ್ಣಿನ ಮೇಲಾಗುವ ದೌರ್ಜನ್ಯವನ್ನು ಮೊಳಕೆ ಯೊಡದಾಗಲೆ ಚಿವುಟ ಬೇಕು – ಡಿ.ಶಬ್ರಿನಾ ಮಹಮದ್ ಅಲಿ”…..

ನಮ್ಮ ಅಜ್ಜಿ ಮುತ್ತಜ್ಜಿ ಕಾಲದಿಂದ ಇಂದಿನವರೆಗೂ, ಹೆಣ್ಣು, ತನ್ನ ಮೇಲಾಗುವ ಶೋಷಣೆ,ಹಿಂಸೆ ಹಾಗೂ ದೌರ್ಜನ್ಯಕೆ ‘ಮರ್ಯಾದೆ’ ಎಂಬ ಬೆಚ್ಚನೆಯ ಹೊದಿಕೆ’ ಹೊದಿಸಿ ತನ್ನ ನೋವು ಸಂಕಟವನು ನಿದ್ರೆಗೆ ಜಾರಿಸಿ ತಾನು ಜಾಗೃತಳಾಗಿರುವೆ,ತಾನು ಅತ್ಯಂತ ಸಂತೋಷದಿಂದಿರುವೆ ಎಂಬಂತೆ ನಟಿಸುತ್ತಲೆ ಬಂದಿದ್ದಾಳೆ! ವಿಪರ್ಯಾಸವೆನೆಂದರೆ ಆ ನಟನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಈ ‘ಸಮಾಜ’ ಆಕೆಗೆ ‘ತಾಳ್ಮೆಯಗಣಿ’ ,’ತ್ಯಾಗಮಯಿ’ ಎಂಬ ಹೊಗಳಿಕೆಯ ಪಟ್ಟ ಕಟ್ಟಿ ತಮ್ಮ ಅಟ್ಟಹಾಸ ಮೆರೆಯುತ್ತಲೇ ಬಂದಿದೆ. ಶೋಷಣೆಯ ಹೆಸರಲಿ ಆ ಹೊಗಳಿಕೆಯ ಪಟ್ಟಗಳು ಯಾರಿಗೆ ಬೇಕು? ಅವುಗಳಿಂದ ಹೆಣ್ಣುಕುಲಕೆ ಆಗುವ ಪ್ರಯೋಜನವಾದರೂ ಏನಾದರೂ ಇವೆಯಾ? ಇವೆ ಎಂದು ಹೇಳಲು ನಿಮ್ಮಿಂದ ಸಾಧ್ಯವಿದೆಯಾ! ಹೌದು ಎಂದಾದಾರೆ, ಸಂದೇಹವೇ ಬೇಡ ನಿಮ್ಮದು ಮತ್ತದೆ ಮೊಂಡುವಾದ! ಇರಲಿ, ಇಲ್ಲಿ ನಾವು ಚರ್ಚಿಸಬೇಕಾದದ್ದು, ತನ್ನ ಮೇಲಾಗುವ ಹಿಂಸೆ,ದೌರ್ಜನ್ಯವನ್ನು ಮುಚ್ಚಿಡುವ ಈ ‘ಮರ್ಯಾದೆ’ ಎಂಬ ಬೆಚ್ಚನೆಯ ಹೊದಿಕೆಯನ್ನು ಆ ಹೆಣ್ಣಿನ ಕೈಗಿತ್ತವರು ಯಾರು? ಎಂದು! ಒಮ್ಮೆ ಯೋಚಿಸಿ ನೋಡಿ, ಆಗ ನಿಮ್ಮ ಕಣ್ಮುಂದೆ ಬಂದು ನಿಲ್ಲುವವರು ಹೆತ್ತವರು,ಮನೆಯ ಹಿರಿಕರು! ಇವರೊಟ್ಟಿಗೆ ನನ್ನೆದಿರು ಮತ್ತೊಂದು ಹೆಬ್ಬಂಡೆಯಂತೆ ನಿಂತಿದೆ, ಅದುವೇ ಸ್ತ್ರೀ ಶೋಷಣೆಯನ್ನು ಪ್ರೋತ್ಸಾಹಿಸುವ ಸಾಹಿತ್ಯ& ಸಿನಿಮಾಗಳು! ಹೆಣ್ಣನ್ನು ‘ಭೂಮಿ’ಗೆ ಹೋಲಿಸಿ ಸಹಿಸಿ ಕೊಳ್ಳುವುದು ಆಕೆಯ ‘ಆ ಜನ್ಮಸಿದ್ಧ ಕರ್ತವ್ಯ’ ಎಂಬಂತೆ ಆಕೆಗಾಗುವ ಶೋಷಣೆ,ಹಿಂಸೆ ದೌರ್ಜನ್ಯಕೆ ಹೊಂದಿ ಕೊಳ್ಳುವಂತಹ ಮನಸ್ಥಿತಿಯನ್ನು ಪುರಾಣ ಕತೆಗಳ ಮೂಲಕ,,ಜಾನಪದ ಗೀತೆಗಳ ಮೂಲಕ, ಸಿನಿಮಾಗಳ ಮೂಲಕ ತರುವಲ್ಲಿ ಈ ಸಮಾಜ ಅಂದಿಗೂ ಇಂದಿಗೂ ತನ್ನ ಕ್ರೌರ್ಯ ಮೆರೆಯುತ್ತಲೇ ಬಂದಿದೆ..!
ಒಂದು ಜಾನಪದ ಗೀತೆಯ ಸಾಲುಗಳು ಹೀಗಿವೆ:-
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕುಹೊತ್ತಾಗಿ ಇಕ್ಕಿದರು ಉಣಬೇಕು| ತೌರೀಗೆಒಳ್ಳೆಯ ಹೆಸರಾ ತರಬೇಕು||
ಆದದ್ದೆಲ್ಲಾ ಸಹಿಸಿ ಕೊಂಡರೆ ಮಾತ್ರ ಸಾದ್ವಿ:-
ಪ್ರಶ್ನಿಸಿದರೆ ಚಾಂಡಾಲಿ, ಗಯ್ಯಾಳಿ, ಚಾರಿತ್ರ್ಯ ಹೀನಳು..! ಇದು ಈ ಸಮಾಜದ ಹೆಣ್ಣು ಗಂಡು ಸೇರಿದಂತೆ ಬಹುತೇಕರ ಮನಸ್ಥಿತಿ..! ಪ್ರಶ್ನಿಸಿದ್ದನ್ನ ಒಪ್ಪುವವರು ಬೆರಳಣಿಕೆ ಮಾತ್ರ..!
ಈ ಮೇಲಿನ ಜಾನಪದ ಗೀತೆಯ ‘ತೌರೀಗೆ ಹೆಸರಾ ತರಬೇಕು’ ಎಂಬ ಕೊನೆಯ ಸಾಲು ಒಬ್ಬ ತಾಯಿ ತನ್ನ ಮಗಳಿಗೆ ತಿಳುವಳಿಕೆ ಹೇಳುವ ನೆಪದಲಿ ಗಂಡನ ಮನೆಯಲ್ಲಾಗುವ ದೌರ್ಜನ್ಯ, ಹಿಂಸೆಯನ್ನು ಸಹಿಸಿ ಕೊಳ್ಳುವಂತೆ ಸಿದ್ಧ ಮಾಡುತಿದ್ದಾಳೆ. “ನಿನಗೆ ಎಷ್ಟೇ ಕಷ್ಟ ಬಂದರೂ ನೆರೆ ಹೊರೆಯವರಿಗೆ, ತೌರೀಗೆ ಹೇಳಬಾರದು, ಅಷ್ಟೇಯಲ್ಲ, ನಿನ್ನ ಜೀವಕ್ಕೆ ಕುತ್ತು ಬಂದರೂ, ನೀನು ಭೂಮಿ ತೂಕದ ತಾಳ್ಮೆಯಿಂದ ನೋವು ನುಂಗಿ ಕೊಳ್ಳಬೇಕು. ಆಗಲೇ ನೀನು ತೌರೀಗೆ ಹೆಸರು ತರ್ತಿಯಾ” ಎಂಬ ಭಾವನಾತ್ಮಕ ಮಾತನ್ನು ಹೇಳುವ ಮೂಲಕ ಮಗಳ ಬದುಕನ್ನ ಪ್ರಶ್ನಿಸುವ ಮನೋಭಾವದಿಂದ ದೂರ ಮಾಡುತಿದ್ದಾಳೆ!
ಇದು ಕೇವಲ ಒಬ್ಬ ತಾಯಿಯ ಮಾತಲ್ಲ,ಬಹುತೇಕ ಎಲ್ಲಾ ತಾಯಂದಿರ ಮಾತು ಇದೇ ಆಗಿದೆ! ಈ ಒಂದು ಮಾತಿನಿಂದ ಅದೆಷ್ಟು ಹೆಣ್ಮಕ್ಳು ತನ್ನ ತವರಿನ ಮೇಲಿನ ಪ್ರೇಮದಿಂದ ತನ್ನ ಮೇಲಾಗುವ ಹಿಂಸೆ,ದೌರ್ಜನ್ಯವನ್ನ ‘ಮರ್ಯಾದೆ’ ಗೆ ಅಂಜಿ ತನ್ನ ಶಕ್ತಿ ಮೀರಿ ಸಹಿಸಿಕೊಂಡು,ಮಿತಿ ಮೀರಿದಾಗ ಕೊನೆಗೆ ಯಾರಿಗೂ ಹೇಳದೆ, ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ..!
ಯಾವುದೋ ಕಾಲದ ಇತಿಹಾಸ ಬೇಡ, ನಮ್ಮ ಬಾಲ್ಯದಲ್ಲಿ ನಮ್ಮದೇ ಊರಿನ ಹೆಣ್ಮಕ್ಳ ಸಾವಾಗೀಡಾಗಿದ್ದನ್ನ ನೆನಪಿಸಿಕೊಳ್ಳೋಣಾ! ಏನಿಲ್ಲವೆಂದರೂ ಒಬ್ಬೊಬ್ಬರಿಗೆ ಒಂದೆರಡು ಹಿಂಸಾತ್ಮಕ ಸಾವುಗಳು ನಮ್ಮೆದಿರು ಬಂದು ನಿಲ್ಲುತ್ತವೆ ಅಲ್ಲವೇ! ಅಷ್ಟೇಯಲ್ಲ, ಸತ್ತ ಮೇಲೆ ಹೆತ್ತತಾಯಿ ಬಂದು, “ನನಗಾದ್ರು ಒಂದೂ ಮಾತು ಹೇಳದೇ ಹೋದೆಯಲ್ಲಮ್ನಾ” ಅಂತಾ ಕಣ್ಣೀರು ಹಾಕಿದ್ದು ಸಹ ನೆನಪಾಗುತ್ತದೆ! ಹೇಳದಂತೆ ತಡೆದದ್ದು ನಾನೇ ಎಂಬ ಪರಿಜ್ಞಾನವೂ ಅವರಿಗಿರುವುದಿಲ್ಲ! ಇದು ವಾಸ್ತವ!
ಇನ್ನೂ ಪುರಾಣದ ಕತೆಗಳು,ಸಿನಿಮಾಗಳು ಸಹ ಹೆಣ್ಣಿನ ಶೋಷಣೆಯನ್ನ ಪ್ರೋತ್ಸಾಹಿಸುತ್ತಲೆ ಬಂದಿವೆ. ಹೆಣ್ಣು ಸಹಿಸಿಕೊಂಡ್ರೆ ಮಾತ್ರ ಬದುಕು ಸಾಧ್ಯ ಎಂಬ ಮನಸ್ಥಿತಿಯನ್ನ ತರುವಲ್ಲಿ ಇವುಗಳ ಪಾತ್ರವೂ ಹಿರಿದಿದೆ! ಇಂತಹ ಸಾಹಿತ್ಯ & ಸಿನಿಮಾಗಳಿಗೆ ಕಡಿವಾಣ ಹಾಕಬೇಕಿದೆ.
‘ಹೆಣ್ಣು’ ಸಹಿಸದರಷ್ಟೇ ಬದುಕಲ್ಲ, ಅನ್ಯಾಯವನ್ನು, ಅಸತ್ಯವನ್ನು ಪ್ರಶ್ನಿಸಿದರೂ ಬದುಕುತ್ತಾಳೆ’ಎಂಬುದನ್ನ ಅರ್ಥಮಾಡಿಸಬೇಕಿದೆ. ಆದ್ದರಿಂದ ಹೆತ್ತವರು ಮಕ್ಕಳಿಗೆ ಬದುಕಿನ ಮೌಲ್ಯಗಳ ಜೊತೆಗೆ ಪ್ರಶ್ನಿಸುವುದನ್ನ ಕಲಿಸಬೇಕಿದೆ. ಹಿಂಸೆ& ದೌರ್ಜನ್ಯವನ್ನ ಮೊದಲ ಬಾರಿಯೇ ಪ್ರಶ್ನಿಸಿ ತಡೆದರೆ ಅದರ ಕ್ರೌರ್ಯಕೆ ಭವಿಷ್ಯವಿರುವುದಿಲ್ಲ! ಎಂಬುದನ್ನ ಮನದಟ್ಟು ಮಾಡಬೇಕಿದೆ. ‘ಮರ್ಯಾದೆ’ ಅಂತಾ ಸಹಿಸಿಕೊಂಡರೆ ಅದು ಹೆಮ್ಮರವಾಗಿಬಿಡುತ್ತದೆ! ಆದ್ದರಿಂದ ಆ ಹಿಂಸೆ & ದೌರ್ಜನ್ಯವನ್ನು ಮೊಳಕೆಯಿದ್ದಾಗಲೆ ಚಿವುಟಿ ಹಾಕಬೇಕು. ಸರಿ ತಪ್ಪು ಏನೇಯಿದ್ದರೂ ಕುಳಿತು ಮಾತಿನಲ್ಲಿ ಬಗೆಹರಿಸಿಕೊಳ್ಳುವ ಮನಸ್ಥಿತಿಗೆ ತರಬೇಕು. ದೈಹಿಕ ಹಿಂಸೆಗೆ,ದೌರ್ಜನ್ಯಕೆ ಅವಕಾಶ ಮಾಡಿಕೊಡಬಾರದು ಎಂಬುದನ್ನ ಎಳೆ ಎಳೆಯಾಗಿ ಬಿಡಿಸಿ ಹೇಳಬೇಕಿದೆ.
ಸಹಿಸಿ ಕೊಳ್ಳುವುದರಿಂದ ದಾಂಪತ್ಯದಲ್ಲಾಗಲಿ, ಬದುಕಿನಲ್ಲಾಗಲಿ ಮೇಲ್ನೋಟದ ಹೊಂದಾಣಿಕೆ ಆಗುತ್ತದೆ, ಸಹಿಸುವ ಬದಲು, ಪ್ರಶ್ನಿಸಿ ಸರಿ ಪಡಿಸಿದರೆ ಸಂಬಂಧಗಳ ಬಂಧ ಆಂತರಿಕವಾಗಿ ಬಿಗಿ ಯಾಗುತ್ತವೆ ಎಂಬುದನ್ನ ಅರುಹ ಬೇಕಿದೆ.
ಹೀಗೆ ನಾವು ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಕ ಮಕ್ಕಳು ತಾವು ಅನುಭವಿಸಿದ ಹಿಂಸೆ, ದೌರ್ಜನ್ಯ,ಶೋಷಣೆ ಯಿಂದ ಬೇಸತ್ತು ‘ಮರ್ಯಾದೆ’ ಎಂಬ ಹೆಸರಲಿ ಆತ್ಮ ಹತ್ಯೆ ಮಾಡಿ ಕೊಳ್ಳದಂತೆ ತಡೆಯಬಹುದು ಎಂಬುದು ನನ್ನಮನದಾಶಯ. ಕಾರಣ, ಆದ ದೌರ್ಜನ್ಯವನೆಲ್ಲಾ ಸಹಿಸಿ ಕೊಂಡು ‘ಒಳ್ಳೆಯವಳು’ ಎಂಬ ಅನಗತ್ಯದ ಪಟ್ಟ ಕಟ್ಟಿಕೊಂಡು.
ಅಸಂತೋಷ ದಿಂದ, ಅಸಮಾಧಾನ ದಿಂದ, ಅತೃಪ್ತಿ ಯಿಂದ ಬದುಕುವುದಕ್ಕಿಂತ, ಅನ್ಯಾಯವನು, ದೌರ್ಜನ್ಯವನು ಖಂಡಿಸಿ ಧೈರ್ಯದಿಂದ, ಆತ್ಮ ತೃಪ್ತಿಯಿಂದ ಬದುಕವುದೇ ನಿಜವಾದ ಬದುಕು. ಏನಂತಿರಾ..?
ಧನ್ಯವಾದಗಳು
✍️ ಡಿ.ಶಬ್ರಿನಾ ಮಹಮದ್ ಅಲಿ
ಲೇಖಕಿ,ಚಳ್ಳಕೆರೆ

