ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಜಿಲ್ಲಾ ಘಟಕ ದಿಂದ – ಕವಿಗೋಷ್ಠಿ ಹಾಗೂ ಉಪನ್ಯಾಸ ಜರುಗಿತು.
ಚಿತ್ರದುರ್ಗ ಮಾ.16


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಪತ್ರಕರ್ತರ ಭವನದ ಅಂಬೇಡ್ಕರ್ ಸಭಾಂಗಣದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ, ಜೆ.ಕರಿಯಪ್ಪ ಮಾಳಗಿ ಅವರು “ಮಹಿಳೆಯರು 21 ನೇ. ಶತಮಾನದಲ್ಲಿ ಇರುವ ನೀವೆಲ್ಲರೂ ಹಳೆಯದನ್ನೇ ಮಾತನಾಡ ಬಾರದು. ಏಕೆಂದರೆ ಈಗಾಗಲೇ ಮಹಿಳೆ ಸಾಕಷ್ಟು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನ ಮೂಡಿಸುವ ಮೂಲಕ ತನ್ನ ಅಸ್ತಿತ್ವವನ್ನು ಕಂಡು ಕೊಂಡಿದ್ದಾಳೆ. ಮಹಿಳೆಯರಿಗಾಗಿ ಗರತಿ ಹಾಡುಗಳಿವೆ ವಿನ: ಪುರುಷರಿಗಾಗಿ ಇಲ್ಲಾ. ಇಂತಹ ಕಾರ್ಯಕ್ರಮಗಳು ಬಹುತ್ವವನ್ನು ಪ್ರತಿಪಾದಿಸುತ್ತವೆ ರಾಜ್ಯದ ಮೂಲೆ ಮೂಲೆಯಿಂದ ಬಂದಿರುವಂತಹ ನೀವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೀರಾ ಎಂದರು.

ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕರು ಕವಿಗಳು ಆದಂತಹ “ತಾರಿಣಿ ಶುಭದಾಯಿನಿ” ಮಾತನಾಡಿ, “ಅನಾದಿ ಕಾಲದಿಂದ ಮಹಿಳೆ ಶೋಷಣೆಯನ್ನ ಅನುಭವಿಸುತ್ತಾ ಬಂದಿದ್ದಾಳೆ ಅವಳ ಭಾವನೆಗಳನ್ನು ಅವಿವ್ಯಕ್ತಿಸಲು ಪುರುಷನ ಒಪ್ಪಿಗೆಯೇ ಬೇಕಾಗಿರುತ್ತದೆ ಇದನ್ನು ನಾವು ಇಂದಿನ ದಿನಗಳಲ್ಲಿ ಕೂಡ ನೋಡುತ್ತಿದ್ದೇವೆ ಎಂದರು. ಹೆಳವನಕಟ್ಟೆ ಗಿರಿಯಮ್ಮ ರಚಿಸಿದ ಒಂದು ಸೀತಾ ಪಾತ್ರದ ಮೂಲಕ ಆ ಒಂದು ಸನ್ನಿವೇಶವನ್ನು ವಿವರಿಸಿದರು. ಭಿನ್ನ ರೀತಿ ಆಲೋಚನೆ ಮಾಡುವಂತಹ ಶಕ್ತಿ ಮಹಿಳೆಗಿದೆ ಆದರೆ ಅದನ್ನು ಒಪ್ಪುವಂತಹ ಮನಸ್ಥಿತಿಯ ಕೊರತೆ ಇದೆ. ಸೃಜನ ಶೀಲತೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ . ಮಹಿಳೆಯು ಪುರುಷ ಇಬ್ಬರು ಒಂದೇ ಯಾಗಿದ್ದಾರೆ. ಪ್ರತಿಭಾವಂತ ಮಹಿಳೆಗೆ ಸಾಕಷ್ಟು ಸವಾಲುಗಳಿರುತ್ತವೆ ಅದನ್ನ ದಾಟುತ್ತಲೇ ತನ್ನ ಯಶಸ್ಸನ್ನ ಗಳಿಸುಬೇಕು” ಎಂದರು.

ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿರುವಂತಹ ಕವಿಗಳು ಹಾಗೂ ಚಿತ್ರಕಲಾವಿದರು ಆದ “ಜಭಿವುಲ್ಲಾ” ಎಂ.ಅಸದ್ ಮಾತನಾಡಿ “ಕವಿಯಿಂದ ಕವಿತೆ ಗುರುತಿಸಿ ಕೊಳ್ಳುವುದಲ್ಲ, ಕವಿತೆಯಿಂದ ಕವಿ ಗುರುತಿಸಿ ಕೊಳ್ಳಬೇಕು” ಎಂಬುದನ್ನು ಹೇಳುವ ಮೂಲಕ ಕವಿತೆ ಹೇಗಿರಬೇಕು ಎಂಬುದನ್ನು ವಿಶ್ಲೇಷಿಸಿದರು. ಕವಿತೆ ವಾಚಿಸುವಾಗ ರಂಗಭೂಮಿಯ ಕಲಾವಿದರು ಹೇಗೆ ತಮ್ಮ ಪಾತ್ರಕ್ಕೆ ಜೀವ ತುಂಬುವರು ಹಾಗೆಯೇ ನಾವು ನಮ್ಮ ಕವಿತೆ ಆಶಯಕ್ಕೆ ಹಾವ ಭಾವದ ಮೂಲಕ ಜೀವ ತುಂಬ ಬೇಕು ಎಂದರು. ಓದಿದ ಕವಿತೆಗಳೆಲ್ಲವೂ ಮಹಿಳೆಯರ ಅಂತರಂಗದ ಶಕ್ತಿಯನ್ನ, ನೋವನ್ನ ಪ್ರತಿಧ್ವನಿಸಿದವು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಲೇಖಕರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಮರಡಿಹಳ್ಳಿ, ಅವರು ಮಾತನಾಡಿ ಮಹಿಳಾ ಸಾಹಿತ್ಯ ಪ್ರೋತ್ಸಾಹಿಸಿಲಿಕ್ಕಾಗಿಯೆ ಈ ಸಂಘವಿದ್ದು ಇದರ ಕಾರ್ಯ ಚಟುವಟಿಕೆಗಳೆಲ್ಲವೂ ಮಹಿಳೆಯರನ್ನು ಸಾಂಸ್ಕೃತಿಕವಾಗಿ ಗಟ್ಟಿ ಗೊಳಿಸುವ ಉದ್ದೇಶ ಹೊಂದಿದೆ ಎಂದರು. ಉಪಾಧ್ಯಕ್ಷರಾದ ಶ್ರೀಮತಿ ಡಿ.ಶಬ್ರಿನಾ ಮಹಮದ್ ಅಲಿ, ಅವರು ಮಾತನಾಡಿ, “ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿ ಗೋಸ್ಕರ ಇರುವ ಈ ಸಂಘವೂ, ಚಿತ್ರದುರ್ಗ ಜಿಲ್ಲಾ ಘಟಕ ಪುನರೂಪ ಗೊಂಡ ಬಗೆಯನ್ನು ವಿವರಿಸಿ ಸತತ ಎರಡು ವರ್ಷಗಳ ಸಂಘಟನೆಯಿಂದ ಇಂದು ಅಧಿಕೃತವಾಗಿ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ಸಂತಸ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ದೀಪಿಕಾ ಬಾಬು ಸಹ ಕಾರ್ಯದರ್ಶಿ ಚಾಂದನಿ ಮೇಡಂ ಖಜಾಂಚಿಯಾದ ಮೀರಾ ನಾಡಿಗ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಶಾಂತ ಶಶಿಕಲಾ ಹಾಗೂ ಸಲಹಾ ಸಮಿತಿ ಸದಸ್ಯರಾದ ಗೀತಾ ನಾಗರಾಜ್ ದ್ಯಾಮಕ್ಕ ಹಾಗೂ ರೇಣುಕಾ ಪ್ರಕಾಶ್ ಅವರು & ರಾಜ್ಯದ ನಾನಾ ಕಡೆಯಿಂದ ಬಂದ ಒಟ್ಟು ೬೩ ಕವಯತ್ರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶಾಂತ,ಪ್ರಾರ್ಥನೆಯನ್ನು ಕೆ.ಸಿ ಶಿಲ್ಪ ಜಗದೀಶ್, ವಂದನಾರ್ಪಣೆಯನ್ನು ಮೀರಾ ನಾಡಿಗ್ ಅವರು ನಿರ್ವಹಿಸಿದರು ಎಂದು ವರದಿಯಾಗಿದೆ.

