ಓದು ಬರಹ ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗಗಳು. ಸಂತೋಷ್ ಬಂಡಿ
ಇ೦ಡಿ ಮಾರ್ಚ್ : 12
ಇಂಡಿ : ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳನ್ನು ಓದುವುದರ ಜೊತೆಗೆ ಬರವಣಿಗೆಗೆ ಪ್ರಾಮುಖ್ಯತೆ ನೀಡಬೇಕು.ಇದು ಅವರ ಜ್ಞಾನದಿಗಂತವನ್ನು ವಿಸ್ತಾರಗೊಳಿಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಜರುಗಿದ 8ನೇ ವರ್ಗ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಓದು-ಬರಹವು ಮಕ್ಕಳ ಮನಸ್ಸನ್ನು ಏಕಕಾಲದಲ್ಲಿ ಸಕ್ರಿಯಗೊಳಿಸಿ,ಕೇಂದ್ರೀಕೃತವಾಗಿಸಿ,ಮನರಂಜನೆಯನ್ನು ನೀಡುತ್ತದೆ.ಇದು ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ.ಓದು-ಬರಹ ಕೇವಲ ಶಿಕ್ಷಣಕ್ಕಾಗಿ ಅಲ್ಲ.ಅದು ಮಕ್ಕಳ ಬದುಕನ್ನು ರೂಪಿಸುತ್ತದೆ ಎಂದು ಹೇಳಿದರು.
ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಿ ಡಿ ಚಪ್ಪರಬಂದ ಜ್ಯೋತಿ ಬೆಳಗಿಸಿ ಮಾತನಾಡಿ,ಓದುವುದರ ಜೊತೆಗೆ ಜ್ಞಾನಾಭಿವೃದ್ಧಿಗೆ ಬರವಣಿಗೆ ಕೂಡ ಬಹಳ ಮಹತ್ವ ಪಡೆದಿರುತ್ತದೆ. ಕೇವಲ ಓದುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು ನಮ್ಮ ಸ್ವಂತ ಪದಗಳಲ್ಲಿ ಅಭಿವ್ಯಕ್ತಗೊಳಿಸುವುದರಿಂದ ಮಾತ್ರ ಆಳವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ,ಮಕ್ಕಳು ನಿರಂತರವಾಗಿ ಅಧ್ಯಯನದಲ್ಲಿ
ತೊಡಗಿ,ಒಳ್ಳೆಯ ಸಂಸ್ಕಾರ,ಮಾನವೀಯ ಗುಣಗಳನ್ನು ರೂಢಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ,ಎಸ್ ಎಂ ಮಕಾನದಾರ,
ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ ಮಾತನಾಡಿದರು,
ಎಸ್ ಪಿ ಪೂಜಾರಿ, ಡಿಎಡ್ ವಿದ್ಯಾರ್ಥಿನಿ ತೈಸಿನ್ ನದಾಫ್,ಉಮೇರ್ ಅರಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು