ರೈತ ಒಕ್ಕದ್ದಿದರೆ ಬಿಕ್ಕುವುದು ಜಗವೆಲ್ಲ…..

ನೇಗಿಲ ಹಿಡಿದು ಹೊಲದೊಳು ಹಾಡುತ್ತ ಉಳುವಾ ಯೋಗಿಯ ನೋಡಲ್ಲಿ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವಿತೆಯನ್ನು ಕೇಳಿದ ಕ್ಷಣ ನಮಗೆ ನೆನಪಿಗೆ ಬರುವುದೇ ರೈತ .ಕೋಳಿ ಕೂಗುವ ಮೊದಲೇ ಎದ್ದು ಭೂ ತಾಯಿಗೆ ನಮಸ್ಕರಿಸಿ ಹೊಲಕ್ಕೆ ಹೋಗುತ್ತಾನೆ. ಮುಂಜಾನೆ ಯಿಂದ ಸಂಜೆಯ ವರೆಗೆ ಹೊಲದಲ್ಲಿ ದುಡಿದು ಚಳಿಯೋ ಮಳೆಯೋ ,ಬಿಸಿಲೋ ಎಲ್ಲವನ್ನೂ ಸಹಿಸಿ ಕೊಂಡು , ಬೆವರು ಸುರಿಸಿ ನಮ್ಮ ಹಿರಿಯರ ಮಾತಿನಂತೆ ಹಸಿದು ಉನ್ನುವುದು ಪ್ರಕೃತಿ , ಹಸಿಯದೆ ಉನ್ನುವುದು ವಿಕೃತಿ ತಾನೂ ಹಸಿದರೂ ಪರರಿಗೆ ಉನ್ನಿಸುವವನು ರೈತ.ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ ಯಾಗಿದ್ದಾನೆ. ಇಂತಹ ರೈತನಿಗೂ ಒಂದು ದಿನಾಚರಣೆ ಇರುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ , ಎಂಬುದು ವಿಪರ್ಯಾಸವೇ ಸರಿ ಚೌಧರಿ ಚರಣ್ ಸಿಂಗ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನಾಚರಣೆ ಆಚರಿಸಿ ಕೊಂಡು ಬರಲಾಗುತ್ತಿದೆ. ಬೇರೆ ಬೇರೆ ದಿನಾಚರಣೆಗೆ ಸಿಗುವಷ್ಟು ಮಹತ್ವ ರೈತರ ದಿನಾಚರಣೆಗೆ ಸಿಗುತ್ತಿಲ್ಲ ಅನ್ನ ಕೊಡುವ ರೈತನನೇ ಮರೆತು ಜೀವನ ಸಾಗಿಸಿದರ ಇನ್ನೆಲ್ಲಿದೆ ರೈತನಿಗೆ ಗೌರವ ? ಈ ದಿಸೆಯಲ್ಲಿ ರೈತ ದಿನಾಚರಣೆ ಐತಿಹಾಸ ಮತ್ತು ಹಿನ್ನೆಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ , ವಂದಿಸ ಬೇಕಿದೆ .ಪ್ರತಿ ದಿನ ರೈತ ನಸುಕಿನಲ್ಲಿ ತನ್ನ ಜೋಡಿ ಎತ್ತುಗಳನ್ನು ಹೊಲಕ್ಕೆ ಕರೆದು ಕೊಂಡು ಹೋಗಿ ನಿಸ್ವಾರ್ಥದಿಂದ ಮತ್ತೊಬ್ಬರಿಗೆ ತೊಂದರೆ ಯಾಗದಂತೆ ತನ್ನ ಕೆಲಸವನ್ನು ತುಂಬಾ ಶ್ರದ್ಧೆಯಿಂದ ನಿರ್ವಹಿಸಿ ಕೊಂಡು ಹೋಗುತ್ತಿದ್ದಾನೆ, ಆದರೆ ಇಂದಿನ ದಿನಗಳಲ್ಲಿ ರೈತ ಬಹಳ ತೊಂದರೆ ಅನುಭವಿಸುತ್ತಿದ್ದು , ಅವನ ಕೇಳುವವರೇ ಇಲ್ಲವಾಗಿದ್ದಾರೆ ಒಂದು ತಿಂಗಳು ಸಂಬಳ ತಡವಾಗಿ ಬ೦ದರೆ ನಾವು ಪರಿತಪಿಸುತ್ತೇವೆ ಆದರೆ ರೈತ ತಾಳ್ಮೆಯಿಂದ ಒಂದು ಬೆಳೆಯನ್ನು ಬೆಳೆಯಲು 6 ತಿಂಗಳು ಕಾಲ ಕಾಯುತ್ತಾನೆ. ಎಲ್ಲಾ ರೈತರು ಬಯಸುವುದು ಒಂದೇ ಉತ್ತಮವಾದ ಬೆಳೆ ಹಾಗೂ ಬೆಳೆಗೆ ತಕ್ಕ ಬೆಲೆ , ಇವೆರಡು ಆಗೋದು ಕನಸಿನ ಮಾತು ಹಿಂದೆ ರೈತನ ಮನೆಯಲ್ಲಿ ಧವಸ ಧಾನ್ಯ ತುಂಬಿ ತುಳುಕುತ್ತಿದ್ದವು . ಆದರೆ ಇದೀಗ ತನ್ನ ಹೊಲದಲ್ಲಿ ಬಿತ್ತನೆ ಮಾಡಲು ಕಾಳುಗಳು ಇಲ್ಲದೆ ನೆರೆ ಹೊರೆಯವರ ಬಳಿ ಸಾಲ ಕೇಳಬೇಕಾಗಿದೆ, ಇನ್ನೂ ಸಾಲ ಮಾಡಿ ಹೊಲದಲ್ಲಿ ಬಿತ್ತನೆ ಮಾಡಿದರೂ ಸರಿಯಾಗಿ ಮಳೆ ಬಾರದೆ ಬೆಳೆ ಕೂಡಾ ರೈತನ ಕೈ ಸೇರುತ್ತಿಲ್ಲ . ಇನ್ನೂ ಕೆಲವು ಬಾರಿ ಮಳೆ ಸರಿಯಾಗಿ ಉತ್ತಮ ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ದಲ್ಲಾಳಿ ಕಾಟದಿಂದ ಬಂದ ಬೆಳೆ ಬಾಯಿಗೆ ಬರದ ರೀತಿ ಆಗುತ್ತದೆ . ಪರಿಣಾಮ ರೈತನು ಇನ್ನಷ್ಟು ಸಂಕಷ್ಟಕ್ಕೆ ಈಡಾಗಬೇಕಾಗಿದ್ದು , ಈ ಕಡೆ ಮನೆಯನ್ನು ನಿರ್ವಹಿಸಿ ಕೊಂಡು ಹೋಗಲಾರದೇ ಮಾಡಿದ ಸಾಲವನ್ನು ತೀರಿಸಲಾಗದೆ ತನ್ನ ಜೀವನವನ್ನು ತಾನೇ ಹರಣ ಮಾಡಿ ಕೊಳ್ಳುತ್ತಿದ್ದಾನೆ . ರೈತ ನಮಗೆಲ್ಲಗೂ ಅನ್ನ ನೀಡುವ ಶ್ರೇಷ್ಠ ವೃತ್ತಿಯನ್ನು ನಿರ್ವಹಿಸಿ ಕೊಂಡು ಹೋಗುತ್ತಿದ್ದಾನೆ . ರೈತನಿಲ್ಲದೆ ದೇಶವನ್ನು ಊಹಿಸಿ ಕೊಳ್ಳಲು ಸಾಧ್ಯವಿಲ್ಲ , ರೈತ ಇಲ್ಲದೆ ಹೋದರೆ ನಾವ್ಯಾರೂ ಇಲ್ಲ ದೇಶ ಎಷ್ಟೇ ಮುಂದುವರಿದರೂ ಹೊಸ ತಂತ್ರಜ್ಞಾನ ಬಂದರೂ ಆಹಾರವನ್ನು ಭೂಮಿಯಲ್ಲಿ ಬೆಳೆಯ ಬೇಕು ರೈತ “ನಮ್ಮ ದೇಶದ ಬೆನ್ನೆಲುಬು” ಎಂದು ನಾವು ಕರೆಯುತ್ತೇವೆ ಬೆನ್ನೆಲುಬು ಮುರಿಯುವ ತನಕ ದುಡಿಯುತ್ತಾನೆ . ಅವನು ದುಡಿಮೆ ಮಾಡಿದ್ದಕ್ಕೆ ಪ್ರತಿ ಫಲವೇನು ? ಅವನ ಜೀವನ ಹರಣವೇ ? ನಮಗೆಲ್ಲ ರೈತ ಬೆಳೆದ ಧವಸ ಧಾನ್ಯಗಳು ಬೇಕು ಆದರೆ ನಾವು ಬೆಳೆಯನ್ನು ಬೆಳೆಯಲು ತಯಾರಿಲ್ಲ, ಹಸುಗಳನ್ನು ಸಾಕಲು ತಯಾರಿಲ್ಲ ನಮಗೆ ಆಡಂಬರದ ಜೀವನ ಬೇಕು , ರೈತನ ಧಾನ್ಯಗಳು ಬೇಕು ಆದರೆ ರೈತರ ಸಂಕಷ್ಟ ಮಾತ್ರ ಬೇಡ ಎಂಬಂತಾಗಿದೆ . ರೈತರು ತಾವು ಮಾಡಿದ ಸಾಲವನ್ನು ತೀರಿಸಲು ಗದ್ದೆಯನ್ನು ಮಾರಿ ಅದರಿಂದ ಬಂದ ಹಣವನ್ನು ತೆಗೆದು ಕೊಂಡು ನಗರಗಳಿಗೆ ವಲಸೆ ಬರುತ್ತಿದ್ದಾರೆ , ಗಾದೆ ಮಾತಿನಂತೆ ” ಒಕ್ಕಲಿಗ ಒಕ್ಕದಿದ್ದರೆ ಬಿಕ್ಕವುದು ಜಗವೆಲ್ಲ”_ ಇದು ಸತ್ಯ. ದೇಶದಲ್ಲಿ ಎಲ್ಲ ರೈತರು ತಮ್ಮ ಹೊಲವನ್ನು ಮಾರಿ ನಗರಗಳಿಗೆ ವಲಸೆ ಬಂದರೆ ಕೃಷಿಯನ್ನು ಮಾಡುವವರಾರು ? ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವು ಒಂದೊಂದು ತುತ್ತಿಗಾಗಿ ಅಳೆದಾಡುವ ಪರಿಸ್ಥಿತಿ ಉಂಟಾಗುವುದು ಖಚಿತ.
ಭೂಮಿಕಾ ರಂಗಪ್ಪ ದಾಸರಡ್ಡಿ
ಬಿದರಿ ,