ಪತ್ರಕರ್ತರಿಗೆ ಮನೆ ನಿವೇಶನ ಮಂಜೂರಾತಿ ಮಾಡುತ್ತೇನೆ — ಜಿ.ಎಚ್.ಶ್ರೀನಿವಾಸ್.
ತರೀಕೆರೆ ಜುಲೈ.25

ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಪ್ಪುಗಳನ್ನು ವಿಮರ್ಶಿಸಿ ಪ್ರಕಟಿಸುವುದು ಪತ್ರಿಕಾ ಧರ್ಮ ಎಂದು ಶಾಸಕ ಜಿ ಎಚ್ ಶ್ರೀನಿವಾಸ್ ಹೇಳಿದರು. ಅವರು ತರೀಕೆರೆ ಪತ್ರಕರ್ತರ ಸಂಘ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಪ್ಪುಗಳನ್ನು ಪತ್ರಿಕೆಗಳು ವರದಿ ಮಾಡಿದಾಗ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವ ಮೂಲಕ ಆಗಿರುವ ಮತ್ತು ಮುಂದೆ ಆಗಬಹುದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದ್ದು ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಸುದ್ದಿಗಳು ಬಂದರೂ ಪತ್ರಿಕೆಗಳನ್ನು ಓದಿದಾಗ ಸಿಗುವ ಜ್ಞಾನ ಮತ್ತು ಆನಂದಗಳು ಅಭೂತಪೂರ್ವ ವಾದವುಗಳಾಗಿರುತ್ತವೆ ಎಂದು ಹೇಳಿದರು. ತರೀಕೆರೆ ಪಟ್ಟಣ ಒಂದರಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ನಿವೇಶನ ರಹಿತರು ನಿವೇಶನಗಳ ಕೊರತೆ ಇರುವುದರಿಂದ ಅರ್ಹ ಪತ್ರಕರ್ತರಿಗೆ ಅಗತ್ಯ ನಿವೇಶನಗಳನ್ನು ಒದಗಿಸಲು ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನಗಳನ್ನು ಒದಗಿಸಲು ಇಂದಿನಿಂದಲೇ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಿ ಗುಂಡಪ್ಪನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ರಾಜ್ಯ ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ ಪ್ರಜಾಪ್ರಭುತ್ವದಲ್ಲಿರುವ ನಾಲ್ಕು ಅಂಗಗಳಲ್ಲಿ ಪತ್ರಿಕ ರಂಗ ಅದರದ್ದೇ ಆದ ವಿಶೇಷ ಸ್ಥಾನಮಾನಗಳನ್ನು ಹೊಂದಿದೆ, ಪ್ರಜಾಪ್ರಭುತ್ವ ಗಟ್ಟಿಯಾಗಬೇಕಾದರೆ ಪತ್ರಿಕ ರಂಗ ತನ್ನ ಜವಾಬ್ದಾರಿಯನ್ನು ಅರಿತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿಎಂ ರಾಜಶೇಖರ್ ಮಾತನಾಡಿ ಪತ್ರಕರ್ತರು ಕರೋನ ದಂತಹ ಸಂಕಷ್ಟ ಸಮಯದಲ್ಲೂ ಎದೆಗುಂದದೆ ತಮ್ಮ ಜೀವಗಳನ್ನೆ ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಮೂಲಕ ಜಗತ್ತಿಗೆ ಸುದ್ದಿಗಳನ್ನು ನೀಡಿದವರು. ಆದರೆ ಇಂದು ಪತ್ರಿಕೆಗಳನ್ನು ಹೊರ ತರುವುದೇ ಕಷ್ಟಕರವಾಗಿದೆ. ಪತ್ರಕರ್ತರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಿ ಸರ್ಕಾರದ ವತಿಯಿಂದ ಪತ್ರಕರ್ತರುಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ಚಲನಚಿತ್ರ ನಟರಾದ ಧರ್ಮ ಕೀರ್ತಿರಾಜ್ ಮಾತನಾಡಿ, ನಮ್ಮ ತಂದೆಯವರು ಪತ್ರಕರ್ತರಾಗಿ ಮತ್ತು ಚಲನಚಿತ್ರ ನಟರಾಗಿ ಕಾರ್ಯ ನಿರ್ವಹಿಸಿರುವುದರಿಂದ ಪತ್ರಕರ್ತರ ಕಷ್ಟ ಸುಖಗಳ ಅರಿವು ನನಗಿದೆ. ಸಿನಿಮಾ ರಂಗವಷ್ಟೇ ಅಲ್ಲದೆ ಪ್ರತಿಯೊಬ್ಬರೂ ಪತ್ರಕರ್ತರುಗಳಿಗೆ ಬೆನ್ನೆಲುಬು ಆಗಿ ನಿಲ್ಲಬೇಕು ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ ಕೃಷ್ಣ ನಾಯಕ್ ರವರು ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ದೇವರಾಜ್, ಆರ್ ದೇವಾನಂದ್, ಮಿಲ್ಟ್ರಿ ಶ್ರೀನಿವಾಸ್, ಇಂಜಿನಿಯರ್ ಎಂ ಎ ರಿಯಾಜ್, ಸತ್ಯಪ್ಪ, ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಕೀಲರಾದ ಜಿ ಸುಬ್ರಹ್ಮಣ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಚಲನಚಿತ್ರ ನಿರ್ಮಾಪಕರಾದ ಎಚ್ ಈ ಪ್ರಶಾಂತ್, ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮಾ, ಮನುಸೂಳಿ ಮೋಹನ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕುಮಾರ್, ಜಯ ಕರ್ನಾಟಕ ಸಂಘಟನೆಯ ಜಗದೀಶ್, ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ರಾಘವೇಂದ್ರ, ಅಜ್ಜಂಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಂಜುನಾಥ್ ಉಪಸ್ಥಿತರಿದ್ದು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಯತಿರಾಜರವರು ಶಾಸಕರ ಮುಖಾಂತರ ಬೆಳೆ ವಿಮೆ ಕುರಿತು ಕರಪತ್ರವನ್ನು ಬಿಡುಗಡೆ ಮಾಡಿದರು. ಕನ್ನಡ ಶ್ರೀ ಬಿ ಎಸ್ ಭಗವಾನ್ ಪ್ರಾರ್ಥಿಸಿ, ಕೆ ಆರ್ ರಮೇಶ್ ಕುಮಾರ್ ಸ್ವಾಗತಿಸಿ, ಎನ್ ವೆಂಕಟೇಶ್ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ