ಯೋಗ ಮತ್ತು ಧ್ಯಾನದಿಂದ ಒತ್ತಡ ನಿವಾರಣೆ – ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ.
ಹುನಗುಂದ ಸಪ್ಟೆಂಬರ್:23

ದುರ್ಬಲ ಮನಸ್ಸು ಸ್ಥಿತಿ ಮತ್ತು ಅತಂತ್ರ ಮನಸ್ಸಯುಳ್ಳ ವ್ಯಕ್ತಿಗಳಲ್ಲಿ ಒತ್ತಡಕಾರಗಳು ಬಹಳಷ್ಟು ಪರಿಣಾಮ ಬೀರುತ್ತಿದ್ದು.ಒತ್ತಡದ ಜೀವನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು ದುರ್ಬಲ ಮನಸ್ಸಿನಿಂದ ಹೊರಬರುವುದೊಂದೇ ಎಲ್ಲ ಮಾನಸಿಕ ಸಮಸ್ಯೆಗಳಿಗೆ ಉತ್ತರ ಎಂದು ಮನೋರೋಗ ತಜ್ಞೆ ಡಾ. ಎಸ್.ಎಸ್.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಡಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ನಮಗರಿವಿಲ್ಲದೆಯೇ ನಮ್ಮ ಮನಸ್ಸಿನ ಮೇಲೆ ಅನೇಕ ಒತ್ತಡಕಾರಕ ಸಂಗತಿಗಳು ದಾಳಿ ಮಾಡುತ್ತಿದ್ದು ಹತಾಶೆಗೊಂಡ ಕೆಲವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಲಿಯಾಗುತ್ತಿರುವದು ಕಳವಳಕಾರಿ ಸಂಗತಿ. ಬದುಕಿನಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳು ತಾತ್ಕಾಲಿಕವಾಗಿದ್ದು ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಉತ್ತಮ ಹವ್ಯಾಸ, ಒಂಟಿತನದಿಂದ ದೂರವಿರುವದು, ಯೋಗ-ಧ್ಯಾನ, ಮನೋನಿಗ್ರಹದ ಮೂಲಕ ಮಾನಸಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದರು.ಪ್ರಧಾನ ದಿವಾಣಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ದೀಪಾ ಅರಳಗುಂಡಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲ ಸಂಘದ ಅಧ್ಯಕ್ಷ ಪಿ.ಎಸ್.ಕಠಾಣಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜೀವನದ ಪ್ರತಿ ಹಂತದಲ್ಲೂ ಸಮಸ್ಯೆಗಳಿರುವಂತೆ ಅವುಗಳಿಗೆ ಪರಿಹಾರಗಳೂ ಇವೆ. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಬಲ್ಲರು ಎಂದರು. ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ,ಸಹಾಯಕ ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಪೂಜಾರಿ, ವಕೀಲರ ಸಂಘದ ಉಪಾಧ್ಯಕ್ಷರಾದ ಪಿ.ಬಿ.ಹುಲ್ಯಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು.ಭಾಗೀರಥಿ ಕೊಡೇಕಲ್ಲ ಪ್ರಾರ್ಥಿಸಿದರು. ಉಪನ್ಯಾಸಕ ಎಚ್.ಟಿ.ಅಗಸಿಮುಂದಿನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎನ್.ವಾಯ್.ನದಾಫ್ ನಿರೂಪಿಸಿದರು. ಸಿದ್ದಲಿಂಗಪ್ಪ ಬೀಳಗಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ