ವಿದ್ಯಾರ್ಥಿ.ಶಿಕ್ಷಕ ಮತ್ತು ಸಮುದಾಯ ಶಿಕ್ಷಣದ ಪ್ರಮುಖ ಆಧಾರ ಸ್ತಂಭಗಳಾಗಿವೆ-ಮಹಾಂತೇಶ ಪರೂತಿ.
ಹುನಗುಂದ ಸಪ್ಟೆಂಬರ್:23
ವಿದ್ಯಾರ್ಥಿ,ಶಿಕ್ಷಕ,ಸಮುದಾಯ ಇವು ಮೂರು ಶಿಕ್ಷಣದ ಆಧಾರಸ್ತಂಭಗಳು.ಮಗುವಿನ ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ತುಂಬಾ ಮಹತ್ವದ್ದಾಗಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ ತುಂಬಾ ಅವಶ್ಯಕವಾಗಿದ್ದು ಮಗುವಿನ ಶೈಕ್ಷಣಿಕ ಉನ್ನತಿಯಲ್ಲಿ ಶಿಕ್ಷಕರೊಂದಿಗೆ ಪಾಲಕರೂ ಕೈಜೋಡಿಸುವ ಅಗತ್ಯವಿದೆ. ಪಾಲಕರಾದವರು ಮಗುವಿನ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದರ ಜೊತೆಗೆ ಮಾರ್ಗದರ್ಶಕರೂ ಆಗಿರಬೇಕು. ಮಗುವಿನ ದಿನಚರಿಗಳನ್ನು ಗಮನಿಸುತ್ತ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ನಿರಂತರ ಸಮಾಲೋಚನೆ ಮಾಡುತ್ತಿರಬೇಕು.ಮಗುವನ್ನು ಉತ್ತಮ ನಾಗರಿಕನನ್ನಾಗಿಸುವಲ್ಲಿ ಶಿಕ್ಷಕರಷ್ಟೇ ಪಾಲಕರೂ ಜವಾಬ್ದಾರರಾಗಿರುತ್ತಾರೆ ಎಂದರು.

ಉಪನ್ಯಾಸಕರ ಪರವಾಗಿ ಛಾಯಾ ಪುರಂದರೆ ಮತ್ತು ಎಚ್.ಟಿ.ಅಗಸಿಮುಂದಿನ, ಪಾಲಕರ ಪರವಾಗಿ ಶೇಖರಗೌಡ ಗೌಡರ ಮತ್ತು ಕಸ್ತೂರಿಬಾಯಿ ಕೊಳೂರ ಮಾತನಾಡಿದರು.ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಗು ಮಾನವ ಸಂಪನ್ಮೂಲವಾಗಿ ಪರಿವರ್ತನೆಯಾಗಲು ಅನೇಕ ಜನರು ಕಾರಣರಾಗಿದ್ದು ಪಾಲಕರು ಮತ್ತು ಶಿಕ್ಷಕರು ಅದರ ಮುಂಚೂಣಿಯಲ್ಲಿರುತ್ತಾರೆ. ಮಕ್ಕಳನ್ನು ಶಾಲೆಗೆ ಕಳಿಸುವುದಷ್ಟೇ ಪಾಲಕರ ಕೆಲಸವಲ್ಲ. ಅವರ ಅಧ್ಯಯನಕ್ಕೆ ಪೂರಕವಾಗುವ ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತ ಅವರ ಪ್ರಗತಿಯ ಬಗ್ಗೆಯೂ ಆಲೋಚಿಸುತ್ತಿರಬೇಕು. ಸರ್ಕಾರ ಶಿಕ್ಷಣದ ಸಲುವಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಶೇಖರ ಚಟ್ನಿಹಾಳ, ಮುತ್ತಣ್ಣ ಗಂಜಿಹಾಳ ಹಾಗೂ ಅಶೋಕ ಮುಂಡೇವಾಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಕ್ಷ್ಮೀ ಉಕ್ಕಲಿ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಸ್ವಾಗತಿಸಿದರು.ಐ.ಎಚ್.ನಾಯಕ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ