ಬಂಜಾರ ಹೆಂಗಳೆಯರ ಬೆಳಕಿನ ಹಬ್ಬ ದೀಪಾವಳಿ…..

ಬಂಜಾರರು ಮೂಲತಃ ಬುಡಕಟ್ಟು ಸಮುದಾಯದವರು ಇವರು ಆಚರಿಸುವ ಎಲ್ಲ ಹಬ್ಬ ಹರಿದಿನಗಳು, ಉಡುಗೆ-ತೊಡುಗೆಗಳು ಬೇರೆ ಬೇರೆ ಸಮುದಾಯಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತವೆ. ಬಂಜಾರರು ಪ್ರತಿ ಹಿಂದೂ ಹಬ್ಬಗಳನ್ನು ಚಾಚು ತಪ್ಪದೆ ಆಚರಿಸುತ್ತಾರೆ ಅವುಗಳಲ್ಲಿ ಹೋಳಿ ಹಬ್ಬ ಮತ್ತು ದೀಪಾವಳಿ ಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ತಾಂಡಗಳ ಪ್ರತಿ ಮನೆ-ಮನಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ ಹಾಗೂ ಬಂಜಾರರ ಶ್ರೀಮಂತ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ದೀಪಾವಳಿ ಹಬ್ಬವನ್ನು ತಮ್ಮ ಭಾಷೆಯಲ್ಲಿ “ದವಾಳಿ” ಎಂದು ಕರೆಯುತ್ತಾರೆ ಹಾಗೂ ಇದನ್ನು ಹೆಂಗೆಳೆಯರ ಹಬ್ಬವೆಂದು ಕರೆಯುತ್ತಾರೆ. ಹಾಗಾಗಿ ಅಪ್ಸರೆಯಂತಹ ಬಂಜಾರ ಕನ್ಯೆಯರಿಗೆ ಎಲ್ಲಿಲ್ಲದ ಖುಷಿ, ಹಬ್ಬದಲ್ಲಿ ಕನ್ಯೆಯರ ಕಾರುಬಾರು ಇರುವುದು ಈ ಹಬ್ಬದ ವಿಶೇಷ.ಈ ಹಬ್ಬವನ್ನು ಪ್ರತಿ ತಾಂಡಾಗಳಲ್ಲಿ ಹಾಗೂ ವಿಶ್ವದ ಯಾವುದೇ ಮೂಲೆಯಲ್ಲಿ ವಾಸಿಸುವ ಪ್ರತಿ ಬಂಜಾರರ ಮನೆಯಲ್ಲಿ ಚಾಚು ತಪ್ಪದೆ ಆಚರಿಸುತ್ತಾರೆ, ಸ್ಥಾನಿಕ ಭಿನ್ನತೆಯಿಂದ ಕೆಲವೊಂದು ಕಡೆ ಭಿನ್ನವಾಗಿದ್ದರೂ ಹಬ್ಬದ ಉದ್ದೇಶ, ಆಚರಣೆ ಒಂದೆಯಾಗಿರುತ್ತದೆ ಒಂದು ತಿಂಗಳಿಂದ ನಡೆಯುವ ಹಬ್ಬವು ಮನೆಗಳನ್ನು ಸುಣ್ಣ ಬಣ್ಣ ಹಚ್ಚಿ ಮನೆಯನ್ನು ಶುಚಿಗೊಳಿಸಿ ಗೋಮುತ್ರವನ್ನು ಮನೆತುಂಬೆಲ್ಲ ಪ್ರೋಕ್ಷಿಸಿ ಪೂಜೆಗೆ ಎಲ್ಲ ರೀತಿಯಲ್ಲಿ ಅಣಿಗೊಳಿಸಿಕೊಳ್ಳುತ್ತಾರೆ.ದೀಪಾವಳಿ ಹಬ್ಬದಲ್ಲಿ ಪ್ರಮುಖ ಆಚರಣೆಗಳು ೧. ಕಾಳಿ ಮಾಸ್ ೨. ಮೇರಾ ಮತ್ತು ೩. ಧಬಕಾರ.ಮಹಾನವಮಿ ಅಮವಾಸ್ಯೆಯಿಂದ ದೀಪಾವಳಿ ಅಮಾವಾಸ್ಯೆಯವರಿಗೆ ಒಂದು ತಿಂಗಳು ಕಾಲ ಹೆಂಗೆಳೆಯರು ಸೇವಾಲಾಲ್ ಮತ್ತು ಮಾರಿಕಾಂಬಾ ಮಂದಿರದ ಪ್ರಾಂಗಣದಲ್ಲಿ ಹಿರಿಯ ಮಹಿಳೆಯರ, ತಾಯಂದಿರ ಮಾರ್ಗದರ್ಶನದಂತೆ ಸೇರಿಕೊಂಡು ಬಂಜಾರ ಸಾಂಪ್ರದಾಯಿಕ ವಸ್ತ್ರವನ್ನು ಧರಿಸಿ ಹಾಡು, ನೃತ್ಯಗಳನ್ನು ಕಲಿಯುತ್ತಾರೆ ಮತ್ತು ಕಲಿಸುವ ಮೂಲಕ ಮದುವೆ ನಿಶ್ಚಯವಾಗಿರುವ ಕನ್ಯೆಯರು ಕಿರಿಯರಿಗೆ ತಮ್ಮ ಜ್ಞಾನವನ್ನು ಧಾರೆಯೆರೆಯುತ್ತಾರೆ. ಹಾಗೂ ತಮ್ಮ ಸ್ನೇಹ ಪ್ರೀತಿ, ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ತಮ್ಮ ಕನ್ಯತ್ವದ ಪ್ರತೀಕವಾಗಿ ಮತ್ತು ಮದುವೆ ನಿಶ್ಚಯವಾಗಿರುವ ಹೆಂಗೆಳೆಯರು ತಬ್ಬಿಕೊಂಡು ಅಳುವ ಸಂಪ್ರದಾಯವನ್ನು ಸಹ ರೂಢಿಸಿಕೊಳ್ಳುತ್ತಾರೆ. ನಂತರ ಕಾಳಿ ಮಾಸ್ ಅಂದರೆ ದೀಪಾವಳಿ ಅಮವಾಸ್ಯೆಯ ದಿನದ ಸಂಭ್ರಮ ಆರಂಭವಾಗಲಿದೆ.
೧. ಕಾಳಿ ಮಾಸ್ (ಕಾಳಿ ಅಮಾಸ್)******************
ಕಾಳಿ ಮಾಸ್ ಮೂಲಕ ದೀಪಾವಳಿ ಹಬ್ಬ ಮೊದಲು ಪ್ರಾರಂಭವಾಗುತ್ತದೆ ಈ ದೀಪಾವಳಿ ಹಬ್ಬವೆಂದರೆ ಹೆಂಗೆಳೆಯರಲ್ಲಿ ಒಂಥರ ವಿಶಿಷ್ಟ ಸೊಗಡನ್ನು ಪಸರುವ, ಬಂಜಾರ ಸಂಸ್ಕೃತಿ ಬಿತ್ತನೆಯ ದಿನಗಳೆಂದರೆ ಅತಿಶಯೋಕ್ತಿಯೇನಲ್ಲ, ಏಕೆಂದರೆ ಬಂಜಾರರು ವರ್ಷದಲ್ಲಿ ಬರುವ ಎಲ್ಲ ಅಮವಾಸ್ಯೆಗಳನ್ನು ಎಲ್ಲರೂ ಕರೆಯುವ ಹೆಸರಿನಿಂದಲೇ ಕರೆಯುತ್ತಾ ಆಚರಿಸುತ್ತಾರೆ, ಆದರೆ ಈ ದೀಪಾವಳಿ ಅಮಾವಾಸ್ಯೆಯನ್ನು ಮಾತ್ರ ಕಾಳಿ ಮಾಸ್ ಎಂದು ಪ್ರತ್ಯೇಕ ಹೆಸರಿನಿಂದ ಪೂರ್ವಜರ ಕಾಲದಿಂದ ಕರೆಯುತ್ತಾ ಬಂದಿದ್ದಾರೆ. ಅಮಾವಾಸ್ಯೆ ದಿನದಂದು ತಾಂಡಾದ ಗುರು ಹಿರಿಯರು ಸೇವಾಲಾಲ ಹಾಗೂ ಮರಿಯಮ್ಮಾ (ಮಾರಿಕಾಂಬಾ) ರ ದೇವಸ್ಥಾನದ ಮುಂದೆ ಸೇರಿ ಕಳೆದ ಒಂದು ವರ್ಷದಲ್ಲಿ ನಡೆದ ಅಹಿತಕರ ಘಟನೆಗಳು, ನೋವು, ದುಃಖ,ನಷ್ಟಗಳು ಮರಳಿ ಬಾರದಂತೆ ತಮ್ಮ ಕುಲದೇವತೆ ಮಾರಿಕಾಂಬಾ ಮತ್ತು ಸೇವಾಲಾಲ್ ರವರನ್ನು ಆರಾಧಿಸುತ್ತಾರೆ, ಸಂತಾಪ ಸೂಚಿಸುವ ಕಾರಣದಿಂದ ಸಾವು ನೋವು ಆಗಿದ್ದ ಮನೆಗಳಿಗೆ ಹೋಗಿ ಸಾಂತ್ವಾನ ಹೇಳುತ್ತಾರೆ, ಎಲ್ಲರಿಗೂ ಈ ನೋವು ತಪ್ಪಿದಲ್ಲ ಸಮಾಧಾನ ಮಾಡಿಕೊಳ್ಳಿ ಮತ್ತು ಎಲ್ಲ ಮರೆತು ಈ ಹಬ್ಬವನ್ನು ನಮ್ಮ ಜೊತೆ ನೀವು ಸೇರಿ ಆಚರಿಸಿ ಎಂದು ಹೇಳಿ ಬರುತ್ತಾರೆ. ನಂತರ ಇಳಿ ಸಂಜೆಯ ಹೊತ್ತಿನಲ್ಲಿ ಎಲ್ಲಾ ಹಿರಿಯರು, ಯುವಕರು ತಾಯಂದಿರು, ಮಕ್ಕಳು ಸೇರಿ ಸಮಾಜದ ದೈವಗಳಿಗೆ ಕಾಯಿ, ಕರ್ಪೂರ, ಫಲಪುಷ್ಪಗಳು ಅರ್ಪಿಸುತ್ತಾರೆ ಮತ್ತು ಹೋತ/ ಟಗರಗಳ ಬಲಿಯನ್ನು ನೀಡಿ ಅದರ ರಕ್ತದಿಂದ ಸಳೋಯಿ ಮತ್ತು ಫಿಕ್ ಬೋಟಿಯ ನೈವೇದ್ಯವನ್ನು ದೇವತೆಗಳಿಗೆ ಅರ್ಪಿಸಿ ತಾಂಡಾದ ಡಾವ್ (ಹಿರಿಯರು) ಅಥವಾ ನಾಯಕ್ ವಿಂತಿ ಅಂದರೆ ಪ್ರಾರ್ಥನೆಯನ್ನು ಮಾಡಿ ತಾಂಡಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತಿರಲಿ ಮತ್ತು ಎಲ್ಲರಿಗೂ ಒಳ್ಳೆಯದನ್ನೇ ಮಾಡು ಎಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತಾರೆ.ಕಾಳಿ ಮಾಸ್ ನಲ್ಲಿ ಕುರಿ ಬಲಿ ಮುಖ್ಯ ಉದ್ದೇಶವೆಂದರೆ ಇದುವರೆಗೆ ತಾಂಡಾದಲ್ಲಿ ಕಾಡಿದ ಅನಾರೋಗ್ಯ, ಕಷ್ಟ ನಷ್ಟಗಳು ಕರಗಲಿ ಜೊತೆಗೆ ಅಮಾವಾಸ್ಯೆಯ ರಾತ್ರಿ ಮೇರಾ ಮಾಡುವ ಯುವತಿಯರ ದೀಪಾರಾಧನೆಯ ಮೂಲಕ ದುಷ್ಟ ಶಕ್ತಿಗಳು ಹೊರ ಹೋಗಲಿ ಎಂಬ ಸದಾಶಯ ಮತ್ತು ನಂಬಿಕೆ ಪೂರ್ವಜರದ್ದಾಗಿತ್ತು ಎಂಬುವುದು ಹಿರಿಯರಿಂದ ತಿಳಿದು ಬಂದಿದೆ.
೨. ಮೇರಾ***********
ಕಾಳಿ ಅಮಾಸ್ ನ ರಾತ್ರಿ ಎಲ್ಲಾ ಮನೆಯ ಹೆಂಗಳೆಯರು ಅಂದರೆ ಮದುವೆಯಾಗಿರದ, ಮದುವೆ ನಿಶ್ಚಯವಾಗಿರುವ ಎಲ್ಲ ಯುವತಿಯರು ಗುಂಪು ಗೂಡಿ ತಾಂಡಾದ ಸಂತ ಶ್ರೀ ಸೇವಾಲಾಲರ ಮತ್ತು ಮಾರಿಕಾಂಬಾ (ಮರಿಯಮ್ಮಾ) ರ ಮಂದಿರ ದ ಮೊದಲು ಮೇರಾ ಮಾಡಿ ಹಣತೆ ಇಟ್ಟು ನಂತರ ನಾಯಕನ ಮಾನೆ ಆಮೇಲೆ ಪ್ರತಿ ಮನೆಗಳಿಗೆ ತೆರಳಿ ಆರತಿ ತಟ್ಟೆ ಮತ್ತು ಮಣ್ಣಿನ ಹಣತೆಯನ್ನು ಹಿಡಿದು ಮೇರಾ ಮಾಡುತ್ತಾರೆ, ಮೇರಾ ಮಾಡುವ ಯುವತಿಯರಿಗೆ ಮನೆಯ ಹಿರಿಯರು ಆರತಿ ತಟ್ಟೆಯಲ್ಲಿ ಕೊಡುವ ಹಣವು ಅವರ ಉಡುಗೊರೆಯೆಂದು ಪರಿಭಾವಿಸುತ್ತಾರೆ ಇದುವೇ ಈ ಹಬ್ಬದ ವಿಶೇಷ. ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕನ್ನು ತರಲಿ ಎಂಬ ಹಾರೈಕೆಯ ಹಾಡುಗಳ ಬಂಜಾರ ಭಾಷೆಯಲ್ಲಿ ಸಾಕಷ್ಟಿವೆ. ಎಲ್ಲ ಯುವತಿಯರು ಏಕದನಿಯಲ್ಲಿ ಲಯಬದ್ಧವಾಗಿ ಮೇರಾ ಪದಗಳನ್ನು ಹಾಡಿದಾಗ, ಕೇಳುವುದೇ ಇಂಪು. ತಮಗಿಂತಲೂ ಹಿರಿಯರಾದವರ ಸಂಬಂಧಗಳನ್ನು ಸಂಬೋಧಿಸಿ ಅವರಿಗೆ ಹಾಡಿನ ಮೂಲಕ ಹಾರೈಸುತ್ತಾರೆ. ಅಪ್ಪ, ಅಣ್ಣ, ಅಕ್ಕ, ಚಿಕ್ಕಪ್ಪ, ತಾಂಡಾದ ನಾಯಕ, ಕುಲದೇವರು… ಹೀಗೆ ಎಲ್ಲರ ಹೆಸರಿನ ನಂತರದ ‘ತೋನ ಮೇರಾ’ ಎಂದು ಹೇಳುತ್ತಾರೆ.ವರ್ಷೆದಾಡೇರ್ ಕೋರ್ ದವಾಳಿಬಾಪು ತೋನ ಮೇರಾ,ವರ್ಷೆದಾಡೇರ್ ಕೋರ್ ದವಾಳಿಯಾಡಿ ತೋನ ಮೇರಾ,ವರ್ಷೆದಾಡೇರ್ ಕೋರ್ ದವಾಳಿಮರಿಯಮ್ಮ ತೋನ ಮೇರಾ,ವರ್ಷೆದಾಡೇರ್ ಕೋರ್ ದವಾಳಿಜಗದಂಬಾ ತೋನ ಮೇರಾ,ಎಂಬ ಹಾಡನ್ನು ಹಾಡುತ್ತಾರೆ ಈ ಹಾಡಿನ ಮೂಲಕ ಪ್ರತಿಯೊಬ್ಬರ ಬಾಳು ಹಸನಾಗಲಿ, ಆಯುರಾರೋಗ್ಯ ಹೆಚ್ಚಾಗಲಿ ಅಂಧಕಾರ ತೊಲಗಿ ಜ್ಯೋತಿ ಬೆಳಗಲಿ ಜಡತ್ವ ಹೋಗಿ ಹೊಸ ಚೈತನ್ಯ ಮೂಡಲಿ ಎಂದು ಹಾರೈಸುತ್ತಾರೆ ಮತ್ತು ಆಚರಣೆಯ ಮುಖ್ಯ ಉದ್ದೇಶವೆ ಇದಾಗಿರುತ್ತದೆ. ಹಾಗೆ ಮೇರಾ ಮಾಡಿದಾಗ ಪ್ರತಿ ಮನೆಯವರು ಪ್ರೀತಿಯಿಂದ ಹಣದ ರೂಪದಲ್ಲಿ ನೀಡಿದ ಕಾಣಿಕೆ ಹಣವನ್ನು ಪಾಡ್ಯದ ದಿನ ಎಲ್ಲ ಅವಿವಾಹಿತ ಯುವತಿಯರು ಸಾಂಪ್ರದಾಯಿಕ ಮತ್ತು ಹೊಸ ಹೊಸ ಬಣ್ಣದ ವಸ್ತ್ರಗಳನ್ನು ಧರಿಸಿ ಸಂತೆಗೆ ಹೋಗಿ ತಿನ್ನಲು ಬೇಕಾದ ಪದಾರ್ಥಗಳನ್ನು ಖರೀದಿಸಿ ಎಲ್ಲರೂ ಬಂಜಾರ ಸಂಪ್ರದಾಯದ ಹಾಡನ್ನು ಹಾಡುತ ಊರಿನ ಆಚೆ ಕಾಡಿನಲ್ಲಿ ಹೋಗಿ ತಾವು ತಂದ ಸಿಹಿ ಖಾದ್ಯಗಳನ್ನು, ಹಣ್ಣು-ಹಂಪಲುಗಳನ್ನು ಹಂಚಿ ತಿಂದು ನಲಿಯುತ್ತಾರೆ. ಹಾಗೂ ಮದುವೆ ನಿಶ್ಚಯವಾದ ಕೆಲವು ಯುವತಿಯರು ನಾನು ಮುಂದಿನ ವರ್ಷ ನಿಮ್ಮ ಜೊತೆ ಮೇರಾ ಮಾಡಲಾಗುವುದಿಲ್ಲ ಎಂದು ನೋವು ಮತ್ತು ಬೇಸರ ವ್ಯಕ್ತಪಡಿಸಿ ಢಾವಲೋ ಅಂದರೆ ತಬ್ಬಿಕೊಂಡು ಅಳುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡು ಅಳುತ್ತಾರೆ. ಅವರನ್ನು ತಮ್ಮ ಗೆಳತಿಯರು ಹೇಗೋ ಸಮಾಧಾನ ಮಾಡಿ ಸಂಜೆಯ ವೇಳೆಗೆ ಮನೆಗೆ ಮರಳುವ ಸಮಯದಲ್ಲಿ ದಾರಿಯುದ್ಧಕ್ಕೂ ಹೂವು ಗರಿಕೆ ಉತ್ತರಾಣಿ ಕಡ್ಡಿ ಮತ್ತು ಗೋವಿನ ಸಗಣಿಯನ್ನು ಸಂಗ್ರಹಿಸಿ ತರುತ್ತಾರೆ ಅವುಗಳಿಂದ ಫುಲ್ ಗಾಡೇರೊ ಅಂದರೆ ಗೋವಿನ ಸಗಣಿಯಿಂದ ಗೋದನ ಅಂದರೆ ಕುಪ್ಪೆ ಮಾಡಿ ಅದರೊಳಗೆ ತಾವು ತಂದ ಹೂವು, ಉತ್ತರಾಣಿ ಕಡ್ಡಿ ಗರಿಕೆಗಳನ್ನು ಹಾಕಿ ಗೋವರ್ಧನನನ್ನು ಪ್ರತಿಷ್ಠಾಪಿಸುತ್ತಾರೆ ಮದುವೆ ನಿಶ್ಚಯ ಆದ ಹುಡುಗಿಯರಿಂದ ಆರತಿ ಬೆಳಗಿಸಿ ಒಂದು ಮನೆಗೆ ೫ ಗೋದನ ಇಡುತ್ತಾರೆ ಇದು ಶ್ರೀಕೃಷ್ಣ ಹೇಗೆ ಧರ್ಮವಂತ ಪಾಂಡುವಿನ ಐದು ಸುಪುತ್ರರ ಏಳ್ಗೆಗೆ ಸದಾ ಕಾಲ ರಕ್ಷಣೆ ಮಾಡಿದನೋ ಹಾಗೆಯೇ ಪಂಚ ಪಾಂಡವರಿಗೆ ದೊರೆತ ರಕ್ಷಣೆ ನಿಮಗೂ ದೊರೆಯಲಿ ಮತ್ತು ನಮ್ಮ ಸಂಬಂಧಗಳು ಸದಾ ಕಾಲ ಗಟ್ಟಿಗೊಳ್ಳಲಿ ಎಂಬ ನಂಬಿಕೆಯನ್ನು ಹೊಂದಿರುತ್ತಾರೆ ಫುಲ್ ಗಾಡೆರೋ ಮುಗಿದ ೪ ಘಂಟೆಯ ನಂತರ ಗೋದಣ ಪೂಜೆರೋ ಅಂದರೆ ಎಲ್ಲ ಯುವತಿಯರು ತಟ್ಟೆಯಲ್ಲಿ ಹಣತೆ ಇಟ್ಟು ಆಗರಬತ್ತಿ ತಂದು ತಾವು ಸ್ಥಾಪಿಸಿದ ಪಂಚ ಪಾಂಡವರ ಪ್ರತೀಕವಾದ ೫ ಗೋದಣಗಳಿಗೆ ಗೋವುಗಳನ್ನು ಕಟ್ಟುವ ಸ್ಥಳದಲ್ಲಿ ಅಥವಾ ಮನೆಯ ಬಾಗಿಲಿನ ಮುಂದೆ ದೀಪದಾರತಿ ಮತ್ತು ಆಗರಬತ್ತಿಯನ್ನು ಬೆಳಗಿ ಗೋಮಾತೆಗಳಿಗೆ ಪ್ರಾರ್ಥಿಸುತ್ತಾ ಎಲ್ಲರಿಗೂ ಒಳ್ಳೆಯದನ್ನೇ ಮಾಡು ಹಾಗೂ ಮುಂದಿನ ವರ್ಷ ದೀಪಾವಳಿ ಹಬ್ಬ ಮರಳಿ ಬರಲಿ ಎಂದು ಸಾಂಪ್ರದಾಯಿಕವಾಗಿ ಹಾಡುತ್ತಾರೆ.
೩. ಧಬಕಾರ***********
ಅಮವಾಸ್ಯೆಯ ಮಾರನೇಯ ದಿನ ಬೆಳಿಗ್ಗೆ ತಾಂಡಾದ ಹಿರಿಯ ಮಹಿಳೆಯರು ಕಿರಿಯರಿಗೆ ಮಾರ್ಗದರ್ಶನ ನೀಡುವ ಮೂಲಕ ಪ್ರತಿ ಮನೆಗಳ ಒಲೆಗಳನ್ನು ಸಾರಿಸಿಕೊಂಡು ಅಕ್ಕಿ ಮತ್ತು ಬೆಲ್ಲದ ಲಾಪ್ಸಿಯನ್ನು ಮಾಡಿಕೊಳ್ಳಲು ಹಾಗೂ ಹಿಟ್ಟಿನ ಉಂಡೆಯನ್ನು ಮಾಡಿ ಅದರೊಳಗೆ ಎಣ್ಣೆ ಹಾಕಿ ಬತ್ತಿಯನಿಟ್ಟು ದೀಪವನ್ನು ಹಚ್ಚುತ್ತಾರೆ ಮತ್ತು ತಮ್ಮ ಮನೆತನದ ಹಿರಿಯರು ನಾಯಕ್, ಡಾವೋ ಅವರ ಮೂಲಕ ಮನೆಯ ಒಲೆಯಲ್ಲಿ ಬೆಲ್ಲದ ಲಾಪ್ಸಿ, ತುಪ್ಪ ಮೂರು ಸಲ ಹಾಕಿ, ತೆಂಗಿನ ಕಾಯಿ, ಉದುಬತ್ತಿ ಬೆಳಗಿ ಪೂರ್ವಜರಿಗೆ ಸ್ಮರಿಸಿ ಅಗ್ನಿ ದೇವನಿಗೆ ನೈವೇದ್ಯ ಅರ್ಪಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡು ಎಂದು ಭಕ್ತಿ ಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.
ಭೂಮಿಕಾ. ದಾಸರಡ್ಡಿ