ಬಳ್ಳಾರಿ ಜಿಲ್ಲೆಯಾದ್ಯಂತ ಖಾಸಗಿ ಅನಧಿಕೃತ ಶಾಲೆಗಳ ರದ್ದತಿಗೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯಿಂದ ಆಗ್ರಹ.
ಬಳ್ಳಾರಿ ಮೇ.31

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ನಗರ ಮತ್ತು ಆಯಾ ತಾಲೂಕಿನಾದ್ಯಂತ ಒಟ್ಟು ಜಿಲ್ಲೆಯಲ್ಲಿ ಸುಮಾರು 70 ಕ್ಕೂ ಹೆಚ್ಚು ಖಾಸಗಿ ಅನಧಿಕೃತ ಶಾಲೆಗಳಿದ್ದು, ಪ್ರತೀ ವರ್ಷ ನಾಯಿ ಕೊಡೆಗಳಂತೆ ಹತ್ತಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಹೈಟೆಕ್ ಮಾದರಿ ಶಿಕ್ಷಣ ನೀಡುತ್ತೇವೆಂದು ಪ್ರಚಾರ ಗಿಟ್ಟಿಸಿ, ಪೋಷಕರನ್ನು ಮಕ್ಕಳನ್ನು ಅಡ್ಮಿಶನ್ ಮಾಡಿಸಿ ಕೊಂಡು ಮುಂದೆ ಟಿಸಿ ಬೇಕೆಂದಾಗ ಈ ಶಾಲೆಯ ಟಿಸಿ ನೀಡಲಾರದೆ ಬೇರೆಯವರ ಶಾಲೆಯ ಹೆಸರಿನ ಮೇಲೆ ಟಿಸಿ ಮೂಲ ವರ್ಗಾವಣೆಯ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದು ಇನ್ನು ಕೆಲವು ವಿದ್ಯಾರ್ಥಿಗಳ ಟಿಸಿಗಳನ್ನು ನೀಡಲಾರದೆ ಇದ್ದಿದ್ದು ಪಾಲಕರು ಈ ರೀತಿಯಾಗಿ ವಂಚಿಸುತ್ತಿದ್ದು ಇದರ ಬಗ್ಗೆ ಶಿಕ್ಷಣ ಇಲಾಖೆ ಯಾವ ಶಾಲೆಗೆ ಮಾನ್ಯತೆ ಇದೆ. ಅನಧಿಕೃತ ಶಾಲೆ ಯಾವುದೆಂದು ಪೋಷಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.ವಿದ್ಯಾರ್ಥಿಗಳ ಭವಿಷ್ಯ ರೂಪಿಸ ಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡುತ್ತಿವೆ. ಜಿಲ್ಲೆಯಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆಯ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಅಂತ ಅದೆಷ್ಟೋ ಪೋಷಕರು ಹಗಲಿರುಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಹೈಟೆಕ್ ಶಾಲೆಗಳಿಗೆ ದಾಖಲಾತಿ ಮಾಡಿಸುತ್ತಾರೆ.

ಆದರೆ ಅನಧಿಕೃತ ಶಾಲೆಗಳು ಪೋಷಕರ ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ.ಶಾಲೆಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಮೌನ ವಹಿಸಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದರೂ ಶಿಕ್ಷಣ ಇಲಾಖಾಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲಾ. ಬೇರೆ ಪಠ್ಯ ಕ್ರಮ ಬೋಧಿಸುತ್ತಿರುವ ಶಾಲೆಗಳು, ನೋಂದಣಿ ಮತ್ತು ಮಾನ್ಯತೆ ಪಡೆದ ಶಾಲೆಯಲ್ಲಿ ಅಧಿಕೃತ ಪಠ್ಯಕ್ರಮದ ಬದಲಾಗಿ ಬೇರೆ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಪ ನಿರ್ದೇಶಕರು (ಆಡಳಿತ), ಇವರ ಕಚೇರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಸೇವಾ ನಿಯಮಾವಳಿ ಅನ್ವಯ ಕ್ರಮವಹಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಉಪನಿರ್ದೇಶಕರು. ಒಟ್ಟಿನಲ್ಲಿ ಜಿಲ್ಲೆಯ ಹಲವೆಡೆ ಪೋಷಕರಿಗೆ ದಾರಿ ತಪ್ಪಿಸುತ್ತಿರುವ ಅನಧಿಕೃತ ಶಾಲೆಗಳ ಕಳ್ಳಾಟದ ವಿರುದ್ಧ ಶಿಕ್ಷಣ ಇಲಾಖೆ ಇನ್ನಾದರೂ ಚಾಟಿ ಬೀಸಬೇಕಿದೆ.

ಮುಂದಿನ ದಿನಗಳಲ್ಲಿ ಪೋಷಕರು ಮೋಸ ಹೋಗದಂತೆ ತಡೆಯಲು ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಗೊಳಿಸಿ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಖಾಸಗಿ ಅನಧಿಕೃತ ಶಾಲೆಗಳನ್ನು ಕೂಡಲೇ ರದ್ದುಪಡಿಸ ಬೇಕು ಹಾಗೂ ಖಾಸಗಿ ಶಿಕ್ಷಣ ಅನಧಿಕೃತ ಶಾಲೆಗಳೊಂದಿಗೆ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಗಳ ಮಾಲೀಕರೊಂದಿಗೆ ಶಾಮಿಲಾಗಿದ್ದು ಇವರ ಮೇಲೆ ಕೂಡಲೇ ಕಟ್ಟುನಿಟ್ಟಿನ ಶಿಸ್ತಿನ ಕ್ರಮ ಜರುಗಿಸ ಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯಿಂದ ಆಗ್ರಹಿಸುತ್ತಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.