ಮುಂಜಾಗೃತಾ ಕ್ರಮಗಳನ್ನು ಪಾಲಿಸಲು ಆರೋಗ್ಯ ಶಿಕ್ಷಣಾಧಿಕಾರಿ – ಎಂ.ಪಿ ದೊಡ್ಡಮನಿ.
ಹೊಸಪೇಟೆ ಏ.19

ಬಿಸಿಲು, ಬಿಸಿಗಾಳಿ ತಾಪಕ್ಕೆ ಕಾರ್ಮಿಕರು ಹೈರಾಣಾಗದಂತೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವ ಮೂಲಕ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ ದೊಡ್ಡಮನಿ ಹೇಳಿದರು. ಹೊಸಪೇಟೆ ತಾಲೂಕಿನ ವ್ಯಾಸನ ಕೆರೆಯಲ್ಲಿ ಹೂಳು ತೆಗೆಯುವ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಗುರುವಾರ ಅವರು ಮಾತನಾಡಿದರು. ಬೇಸಿಗೆಯಲ್ಲಿ ನಿರ್ಜಲೀಕರಣ ವಾಗದಂತೆ ಪ್ರತಿ 20 ನಿಮಿಷ ಕ್ಕೊಮ್ಮೆ ಶುದ್ಧ ಕುಡಿಯುವ ನೀರನ್ನು ಕುಡಿಯಬೇಕು. ಓ.ಆರ್.ಎಸ್ ಬಳಸಿ ನೀರು ಅಥವಾ ಮಾತ್ರೆಗಳನ್ನು ಸೇವಿಸಿದರೆ ಒಳ್ಳೆಯದು. ತಲೆ ನೋವು, ಮೈಕೈ ನೋವು ಕಂಡು ಬಂದರೆ ನಿರ್ಲಕ್ಷಿಸದೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿಗಳ ಬಳಿ ಚಿಕಿತ್ಸೆ ಪಡೆಯಬೇಕು. ಆದಷ್ಟು ಕಾರ್ಮಿಕರು ಬೆ.11 ರಿಂದ ಸಂಜೆ. 4ರ ವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರು ಆಯಾಸ ಗೊಂಡರೆ ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಳ್ಳಬೇಕು. ಕಾರ್ಮಿಕರು ಆದಷ್ಟು ಹತ್ತಿಯ ಮತ್ತು ಶ್ವೇತ ವರ್ಣದ ತುಂಬು ತೋಳಿನ ಅಂಗಿ, ಬಟ್ಟೆ ಮತ್ತು ಟೋಪಿಯನ್ನು ಧರಿಸುವುದು ಉತ್ತಮ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.ಕಾರ್ಮಿಕರಿಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಎಲ್ಲರಿಗೂ ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು. ತಾಲೂಕಿನ ಮಲಪನಗುಡಿ, ಸೀತಾರಾಮ್ ತಾಂಡ, ಕಲ್ಲಹಳ್ಳಿ, ನಾಗೇನಹಳ್ಳಿ, ಹೊಸೂರು ಗ್ರಾ.ಪಂ ನ ಸುಮಾರು 2500 ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಚಿಕಿತ್ಸೆ ಪಡೆದರು. ಈ ವೇಳೆ ಮರಿಯಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ರಾಧಾಕೃಷ್ಣ, ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಧನಲಕ್ಷ್ಮೀ, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣ, ಸಮುದಾಯ ಆರೋಗ್ಯ ಅಧಿಕಾರಿ ಭರತ, ರೇಣುಕಾ, ಜಿ.ಪಂ ನ ಐಇಸಿ ಸಂಯೋಜಕ ನಾಗರಾಜ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ