ವಿಶ್ವ ಕುಟುಂಬ ದಿನ ಕುಟುಂಬವು ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ – ಸಂತೋಷ ಬಂಡೆ.
ನಾಗಠಾಣ ಮೇ .15

ಕುಟುಂಬವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದು ನಮ್ಮ ಬದುಕನ್ನು ನಿರ್ಮಿಸುವ ಅಡಿಪಾಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಅಭಿಪ್ರಾಯ ಪಟ್ಟರು. ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಗುರುವಾರ ದಂದು ಹಮ್ಮಿಕೊಂಡ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕುಟುಂಬವು ಪ್ರೀತಿ, ಗೌರವ, ನಂಬಿಕೆ, ಭರವಸೆ, ಕಾಳಜಿ ಮತ್ತು ಉತ್ತಮ ನಡವಳಿಕೆಯಂತಹ ಮೌಲ್ಯಗಳನ್ನು ಕಲಿಸಿ, ಜೀವನಕ್ಕೆ ಭದ್ರ ಬುನಾದಿಯನ್ನು ಹಾಕುತ್ತದೆ. ಕುಟುಂಬವು ಸಮಾಜದ ಅಡಿಪಾಯವಾಗಿದ್ದು, ಪ್ರೀತಿಯಿಂದ ಒಟ್ಟಿಗೆ ಬದುಕಲು ಸದಾ ಪ್ರೇರೇಪಿಸುತ್ತದೆ ಎಂದು ಹೇಳಿದರು. ಇಂಡಿ ಸರಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಿ ವೈ ರಜನಿಕರ ಮಾತನಾಡಿ, ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಸಾಮಾಜಿಕೀಕರಣ, ಭಾಷಾ ಬೆಳವಣಿಗೆ, ಮಗುವಿನಲ್ಲಿ ಬೆಳೆಸುವ ಭಾವನಾತ್ಮಕ ಕೌಶಲ್ಯಗಳು ಕುಟುಂಬದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಕುಟುಂಬವು ಒಂದು ಸಾರ್ವತ್ರಿಕ ಸಂಸ್ಥೆಯಾಗಿದೆ. ಇದು ಮಗುವಿಗೆ ತನ್ನ ಗುರುತನ್ನು ನೀಡುವ ಅತ್ಯಂತ ಹಳೆಯ ಸಂಸ್ಥೆಯಾಗಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿಸುವಲ್ಲಿ ಕುಟುಂಬವೇ ಮುಖ್ಯವಾಗಿದ್ದು, ಮಗುವಿಗೆ ಸಹಾನುಭೂತಿ, ಮತ್ತು ಒಗ್ಗಟ್ಟಿನ ಮಹತ್ವವನ್ನು ಕಲಿಸುತ್ತದೆ ಎಂದುಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಸಿದ್ರಾಮ ಹೊಸಟ್ಟಿ, ಗ್ರಾಮಸ್ಥರಾದ ಸುರೇಶ ಕತ್ನಳ್ಳಿ, ಬಸವರಾಜ ಸಾರವಾಡ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.