ತಂಬಾಕು ಸೇವನೆಯ ದುಷ್ಪರಿಣಾಮದ ಅರಿವು ಎಲ್ಲರಿಗೂ ಅಗತ್ಯ- ಸಂತೋಷ ಬಂಡೆ.
ನಾಗಠಾಣ ಮೇ.31

ಯುವ ಜನತೆ ತಂಬಾಕು ಸೇವನೆಯಿಂದ ಮುಕ್ತರಾದಾಗ ಮಾತ್ರ ಸದೃಢ ದೇಶ ನಿರ್ಮಾಣವಾಗಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ತಂಬಾಕಿನಿಂದ ಆಗುವ ಪರಿಣಾಮದ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ಶನಿವಾರ ದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ತಂಬಾಕು ರಹಿತ ದಿನ’ ವನ್ನು ಉದ್ಘಾಟಿಸಿ ಮಾತನಾಡಿದರು. ತಂಬಾಕು ಸೇವನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ ಮುಡಿವರೆಗೆ ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ. ಮಾನವಾಭಿವೃದ್ಧಿಗೆ ದೊಡ್ಡ ಕಂಟಕವಾಗಿರುವ ಈ ಪಿಡುಗನ್ನು ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ,ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇವನೆ ಮಾಡುವುದರಿಂದ ಆರೋಗ್ಯ ಕೆಡುವುದಲ್ಲದೆ ಸುತ್ತ ಮುತ್ತಲಿನ ಇತರರ ಆರೋಗ್ಯವು ಹದಗೆಡುತ್ತದೆ. ದೇಶದಾದ್ಯಂತ ಸಾವಿರಾರು ಜನರು ತಂಬಾಕು ಸೇವನೆ ಮಾಡಿ ಜೀವ ಕಳೆದು ಕೊಳ್ಳುತ್ತಿರುವುದು ಆತಂಕಕಾರಿ ಯಾಗಿದೆ ಎಂದು ಹೇಳಿದರು.ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಗ್ರಾಮದ ವಿಶ್ವನಾಥ ಹಂಡಿ, ಸುರೇಶ ಕತ್ನಳ್ಳಿ, ಆನಂದ ಗಂಗನಳ್ಳಿ, ರಾಜು ಕತ್ನಳ್ಳಿ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.