ದೇವರ ಎತ್ತುಗಳ ನೆಲೆ ಗೋ ಕ್ಷೇತ್ರವಾಗಲಿದೆ – ಡಾ, ವೈ.ರಾಜಾರಾಮ್ ಗುರುಗಳು ಭವಿಷ್ಯ.
ಚಳ್ಳಕೆರೆ ಜೂ.30

ತಾಲೂಕಿನ ಅಜ್ಜನಗುಡಿ ಸಮೀಪದ ದೇವರ ಎತ್ತುಗಳ ಸ್ಥಳ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಗೋ ಕ್ಷೇತ್ರವಾಗುತ್ತದೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಭವಿಷ್ಯ ನುಡಿದರು. ನಗರದ ಹೊರವಲಯದ ಶ್ರೀಜಗಲೂರು ಅಜ್ಜನಗುಡಿ ಸಮೀಪ ಇರುವ ನನ್ನಿವಾಳದ ಕಟ್ಟೆ ಮನೆಗೆ ಸೇರಿದ ಮುತ್ತಯ್ಯಗಳ ದೇವರ ಎತ್ತುಗಳಿಗೆ ಚಳ್ಳಕೆರೆಯ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಸದಸ್ಯರ ಆರ್ಥಿಕ ನೆರವಿನಿಂದ ನಿರ್ಮಿಸಿದ ಎರಡು ಶೆಡ್ಡುಗಳ (ಮೇಲ್ಚಾವಣಿ) ಲೋಕಾರ್ಪಣೆಯನ್ನು ನೆರವೇರಿಸಿ ಗೋ ಪೂಜೆ ಮಾಡಿ ಆಶೀರ್ವಚನ ನೀಡಿದರು. ಬಿಸಿಲು-ಮಳೆಯಿಂದ ತೊಂದರೆ ಅನುಭವಿಸುತ್ತಿದ್ದ ದೇವರ ಎತ್ತುಗಳಿಗೆ ನೆಮ್ಮದಿ ಯಾಗಿರಲು ಮೇಲ್ಛಾವಣಿ ನಿರ್ಮಿಸಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಹೆಚ್ಚು ನಡೆಯಲಿ. ನಾವು ಗೋವಿನಿಂದ ಪಡೆಯುವ ಉಪಯೋಗಗಳು ಅನೇಕ. ಅದರಿಂದ ಉತ್ಪನ್ನವಾಗುವ ವಸ್ತುಗಳು ಮನುಷ್ಯನ ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಆದ್ದರಿಂದ ಗೋ ಉತ್ಪನ್ನಗಳನ್ನು ಹೆಚ್ಚು ಬಳಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅವರು ಶ್ರೀನರಹರಿ ಸೇವಾ ಪ್ರತಿಷ್ಠಾನದ ವತಿಯಿಂದ ದೇವರ ಎತ್ತುಗಳಿಗಾಗಿ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬನಶ್ರೀ ವೃದ್ಧಾ ಶ್ರಮದ ಸಂಸ್ಥಾಪಕರಾದ ಶ್ರೀಮತಿ ಮಂಜುಳಮ್ಮ ದೇವರ ಹಸುಗಳನ್ನು ನೋಡುತ್ತಿದ್ದರೆ ನಮಗೆ “ಪುಣ್ಯಕೋಟಿ ಕಥೆ” ನೆನಪಾಗುತ್ತದೆ. ಇಂತಹ ದೇವರ ಎತ್ತುಗಳನ್ನು ನಿಸ್ವಾರ್ಥವಾಗಿ ಪಾಲನೆ-ಪೋಷಣೆ ಮಾಡುತ್ತಿರುವ ಗೋಪಾಲಕರ ಮತ್ತು ಕಿಲಾರಿಗಳ ಸೇವೆ ನಿಜಕ್ಕೂ ಮೆಚ್ಚುಗೆಯ ಕಾರ್ಯವಾಗಿದೆ ಎಂದು ತಿಳಿಸಿದ ಅವರು ಬನಶ್ರೀ ವೃದ್ಧಾ ಶ್ರಮದಿಂದ ದೇವರ ಎತ್ತುಗಳಿಗಾಗಿ ಐದು ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದರು. ವಾಣಿಜ್ಯೋದ್ಯಮಿಗಳಾದ ಶ್ರೀಮತಿ ಮಂಜುಳ ನಾಗರಾಜ್ ದೇವರ ಎತ್ತುಗಳಿಗಾಗಿ ಶೆಡ್ಡುಗಳನ್ನು ನಿರ್ಮಿಸಿರುವುದನ್ನು ಶ್ಲಾಘಿಸಿದರು.

ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರು ಆಧ್ಯಾತ್ಮಿಕ ಜೀವಿ ಇಂದ್ರಮ್ಮನವರ ಹೆಸರಿನಲ್ಲಿ ಐದು ಸಾವಿರ ರೂಪಾಯಿ ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ಬಾಬು, ಪದ್ಮ, ಶುಭ, ಮೋಹಿನಿ, ಸುಧಾಮಣಿ, ಗಿಡ್ಡ ಓಬಣ್ಣ, ಸಿದ್ದೇಶ್, ಯತೀಶ್.ಎಂ ಸಿದ್ದಾಪುರ, ಪ್ರೇಮಲೀಲಾ, ಹೂವಿನ ಲಕ್ಷ್ಮೀದೇವಮ್ಮ, ಮಹಾದೇವಿ, ನಳಿನಕುಮಾರಿ, ದೀಪಿಕಾ, ಸೋಮಶೇಖರ್, ಚಿನ್ನಯ್ಯ, ಬೋರಯ್ಯ, ನಾಗರಾಜ್, ಚಾಟಿ ಓಬಯ್ಯ, ಕಿಲಾರಿ ಪಾಲಯ್ಯ, ಕಿಲಾರಿ ಓಬಯ್ಯ, ಕಾಟಯ್ಯ, ಪಾಪಯ್ಯ, ಬೋಸಯ್ಯ ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.