ಬಿಜೆಪಿಯವರೇ, ರಸ್ತೆ ಗುಂಡಿಗಳ ಜೊತೆ ಸೆಲ್ಫಿ ತೆಗೆಯುವಾಗ – ನಿಮ್ಮ ಶಾಸಕರು ಹಾಗೂ ಸಂಸದರನ್ನೂ ನಿಲ್ಲಿಸಿ….!
ಕುಂದಾಪುರ ಸ.19





ರಸ್ತೆಗಳ ಹದಗೆಟ್ಟಿರುವ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು, ರಸ್ತೆ ಹೊಂಡಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ, ತಮ್ಮದೇ ಪಕ್ಷದ ಸಂಸದರು ಮತ್ತು ಶಾಸಕರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಫೋಟೋ ತೆಗೆಯುವುದು ಉತ್ತಮ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಸಕರು ಮತ್ತು ಸಂಸದರ ಕರ್ತವ್ಯವೆಂದರೆ, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಖಚಿತಪಡಿಸಿಕೊಳ್ಳುವುದು. ಆದರೆ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಆರು ಅವಧಿಯಿಂದ ಬಿಜೆಪಿ ಶಾಸಕರೇ ಅಧಿಕಾರದಲ್ಲಿದ್ದಾರೆ. ಹೀಗಿರುವಾಗ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅವರ ಬೇಜವಾಬ್ದಾರಿಯೇ ಮುಖ್ಯ ಕಾರಣ ಎಂದು ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ನಿರ್ಲಕ್ಷಿಸಿ, ಹೊಂಡಬಿದ್ದ ರಸ್ತೆಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸುವುದು ಬಿಜೆಪಿ ಪಕ್ಷದ ರಾಜಕೀಯ ದಿವಾಳಿತನದ ಪರಮಾವಧಿ. ಅವರಿಗೆ ನಿಜವಾಗಿಯೂ ಅಭಿವೃದ್ಧಿಯ ಚಿಂತನೆ ಇದ್ದರೆ, ರಾಜ್ಯಕ್ಕೆ ಸಮರ್ಪಕವಾಗಿ ಬಾರದ ತೆರಿಗೆ ಹಣದ ಪಾಲನ್ನು ಕೇಂದ್ರ ಸರ್ಕಾರದಿಂದ ತರಲಿ. ಕಳೆದ ಎರಡು ವರ್ಷಗಳಿಂದ ಪಂಚ ಗ್ಯಾರಂಟಿಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದನ್ನು ಸಹಿಸಲಾಗದೆ, ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಕಾಸ್ ಹೆಗ್ಡೆ ಹೇಳಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ