🚨 ಬ್ರೇಕಿಂಗ್ ನ್ಯೂಸ್ 🚨ಕುದುರೆಮುಖ ಅರಣ್ಯ ನಿರಾಶ್ರಿತ ಕುಟುಂಬಗಳ ಗೋಳು, ತಕ್ಷಣ ಪುನರ್ವಸತಿ, ನ್ಯಾಯಯುತ ಪರಿಹಾರಕ್ಕೆ – ನವೀನ್ ಸಾಲಿಯನ್ ಆಗ್ರಹ..!
ಉಡುಪಿ ಡಿ.13

ದಶಕಗಳಿಂದ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು ಇದೀಗ ಉದ್ಯಾನವನದ ನಿರ್ಬಂಧ ಹಾಗೂ ಕಾನೂನು ತೊಡಕುಗಳಿಂದಾಗಿ ಜೀವನೋಪಾಯವಿಲ್ಲದೆ ಸಂಕಷ್ಟದಲ್ಲಿರುವ ನೂರಾರು ಕುಟುಂಬಗಳಿಗೆ ರಾಜ್ಯ ಸರ್ಕಾರ ತಕ್ಷಣವೇ ಪುನರ್ವಸತಿ ಮತ್ತು ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಅವರು ಬಲವಾಗಿ ಆಗ್ರಹಿಸಿದ್ದಾರೆ.ಸಾಲಿಯನ್ ಅವರು ಸರ್ಕಾರದ ಗಮನ ಸೆಳೆಯಲು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಪುನರ್ವಸತಿ ಕೇವಲ ಸ್ಥಳಾಂತರವಲ್ಲ – ಇದು ಬದುಕು ಪುನರ್ನಿರ್ಮಿಸುವ ಪ್ರಕ್ರಿಯೆ” ಎಂದು ಒತ್ತಿ ಹೇಳಿದ್ದಾರೆ.
🗻 ಕೆ.ಐ.ಒ.ಸಿ.ಎಲ್ ನಂತರ ಸಂಕಷ್ಟದ ಸುರುಳಿ:-
ಒಂದು ಕಾಲದಲ್ಲಿ ಕುದುರೆಮುಖ ಕಬ್ಬಿಣದ ಅದಿರು ಗಣಿಗಾರಿಕೆ ಕಂಪನಿ (ಕೆಐಒಸಿಎಲ್) ಕಾರ್ಯಾಚರಣೆಯಲ್ಲಿದ್ದಾಗ ಅಲ್ಲಿ ಕೆಲಸ ನಿರ್ವಹಿಸಲು ವಿವಿಧ ಭಾಗಗಳಿಂದ ಬಂದು ನೆಲೆಸಿದ್ದ ಹಲವು ಕುಟುಂಬಗಳು, ಕಂಪನಿ ಮುಚ್ಚಿದ ನಂತರ ನಿರುದ್ಯೋಗಿಗಳಾಗಿದ್ದಾರೆ. ಈ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಸದ್ಯ ಸ್ವಂತ ಸೂರಿಲ್ಲದೆ, ಕಳಸ-ಶೃಂಗೇರಿ ಕಡೆ ಕಾಫಿ ತೋಟಗಳಲ್ಲಿ ಮತ್ತು ಉಡುಪಿ ಭಾಗದಲ್ಲಿ ಕೃಷಿ ಕೂಲಿ ಕೆಲಸಗಳನ್ನು ಮಾಡಿಕೊಂಡು ಅತಂತ್ರ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.
🚧 ಕಾನೂನು ತೊಡಕುಗಳೇ ಅಡ್ಡಿ:-

ಕುದುರೆಮುಖ ಪ್ರದೇಶವು ಪರಿಸರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಇರುವುದು ಮತ್ತು ಕಸ್ತೂರಿ ರಂಗನ್ ವರದಿಯ ಅಂಶಗಳು ಇಲ್ಲಿ ವಸತಿಗಾಗಿ ಜಾಗ ಒದಗಿಸಲು ಪ್ರಮುಖ ಕಾನೂನು ಅಡ್ಡಿಗಳಾಗಿವೆ. ಈ ಕಾರಣದಿಂದಾಗಿ, ಪ್ರದೇಶದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರೂ ಈ ಕುಟುಂಬಗಳಿಗೆ ಅಲ್ಲಿ ನೆಲೆಸಲು ಸಾಧ್ಯವಾಗುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ಅನುಭವಿಸುತ್ತಿರುವ ದೀರ್ಘಕಾಲದ ನೋವಿಗೆ ಸಕಾರಾತ್ಮಕ ಪರಿಹಾರ ದೊರಕುವಂತೆ ಸಾಲಿಯನ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
📢 ಸಾಲಿಯನ್ ಅವರ ಪ್ರಮುಖ ಮನವಿ:-
ತಮ್ಮ ಮನವಿಯನ್ನು ಬಲಪಡಿಸಿ ಮಾತನಾಡಿದ ನವೀನ್ ಸಾಲಿಯನ್, “ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಮಾಡಲು ಸಾಧ್ಯವಾಗದೆ ಪುನರ್ವಸತಿ ಬಯಸಿರುವ ಬಡ ಕುಟುಂಬಗಳಿಗೆ ಸರ್ಕಾರ ಸಹಾಯ ಹಸ್ತ ನೀಡಿಲಿ,” ಎಂದು ಹೇಳಿದ್ದಾರೆ.ಈ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರದ ಹಸ್ತಕ್ಷೇಪದ ಮೂಲಕ ಪರ್ಯಾಯ ಸ್ಥಳದಲ್ಲಿ ವಸತಿ, ಭೂಮಿ ಮತ್ತು ಜೀವನೋಪಾಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ರಾಜ್ಯ ಸರ್ಕಾರವು ಈ ಗಂಭೀರ ಮಾನವೀಯ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ನಿರಾಶ್ರಿತರಿಗೆ ನ್ಯಾಯ ಒದಗಿಸಬೇಕು ಎಂದು ಸಾಲಿಯನ್ ಒತ್ತಾಯಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

