ಸ್ವಾಮಿ ವಿವೇಕಾನಂದರ ಚಿಂತನೆಗಳ ಸಾರ ಶಕ್ತಿಯ ಅಭಿವ್ಯಕ್ತಿ – ಚೇತನ್ ಕುಮಾರ್.
ಚಳ್ಳಕೆರೆ ಜ.09

ಸ್ವಾಮಿ ವಿವೇಕಾನಂದರ ಸಮಗ್ರ ಚಿಂತನೆಗಳನ್ನು ಅವಲೋಕಿಸಿದಾಗ ಅದರ ಒಟ್ಟು ಸಾರವಸ್ತುವೇ ಶಕ್ತಿಯ ಅಭಿವ್ಯಕ್ತಿಯಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಚೇತನ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಸ್ವಾಮಿ ವಿವೇಕಾನಂದರ ಚಿಂತನೆಗಳು” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಪ್ರತಿಯೊಬ್ಬರ ಒಳಗೂ ಅಪಾರ ಶಕ್ತಿಯ ಗಣಿಯಿದೆ,ಅದರಲ್ಲಿ ಪೂರ್ಣ ವಿಶ್ವಾಸವಿಟ್ಟು ಮುನ್ನಡೆದರೆ ಖಂಡಿತವಾಗಿಯೂ ಅದ್ಭುತ ಗುರಿ ಸಾಧನೆಯಾಗುತ್ತದೆ.
ಪ್ರತಿ ನಿತ್ಯ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಓದುವ-ಅನುಸಂಧಾನ ಮಾಡುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.
ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ಸಿ.ಎಸ್ ಭಾರತಿ ಚಂದ್ರಶೇಖರ್, ರಶ್ಮಿ ವಸಂತ, ಮಾನ್ಯ, ಹಣ್ಣಿನ ವ್ಯಾಪಾರಿ ವೆಂಕಟೇಶ್, ಪುಷ್ಪಲತಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

